ಬೆಂಗಳೂರು: ದುಷ್ಕರ್ಮಿಗಳು ಪಾರ್ಕ್ ಮಾಡಿದ್ದ 30ಕ್ಕೂ ಹೆಚ್ಚು ವಾಹನಗಳ ಗ್ಲಾಸ್ಗಳಿಗೆ ಹಾನಿಯುಂಟು ಮಾಡಿದ್ದು, ಶುಕ್ರವಾರ ರಾಜರಾಜೇಶ್ವರಿ ನಗರ ಕ್ಷೇತ್ರದ ಲಗ್ಗೆರೆಗೆ ಶಾಸಕ ಮುನಿರತ್ನ ಭೇಟಿ ನೀಡಿದ್ದಾರೆ. ಈ ವೇಳೆ, ಡಿಕೆ ಸಹೋದರರು ಮತ್ತು ಮುನಿರತ್ನ ನಡುವಿನ ಮುಸುಕಿನ ಗುದ್ದಾಟ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಶಾಸಕರ ಭೇಟಿ ವೇಳೆ ಅಲ್ಲಿ ನೆರೆದಿದ್ದವರು ಮುನಿರತ್ನ ಅವರನ್ನು 'ಜೈ ಡಿಕೆ ಸುರೇಶ್ ಎಂಪಿ!' ಎಂಬ ಘೋಷಣೆಗಳೊಂದಿಗೆ ಸ್ವಾಗತಿಸಿದರು. ಇದರಿಂದ ಮುನಿರತ್ನ ಕೋಪಗೊಂಡರು.
ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಪೊಲೀಸರೇ ಕಾರಣ. ಇಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತಿದ್ದು, ಪೊಲೀಸ್ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿಲ್ಲ. ವಾಹನಗಳ ಮೇಲಿನ ದಾಳಿಯ ಬಗ್ಗೆ ಪರಿಶೀಲಿಸಲು ತೆರಳಿದಾಗ, ಮಾಧ್ಯಮವರು ಅಲ್ಲಿದ್ದರು. ಆದರೆ, ಪೊಲೀಸರೇ ಕಾಣಿಸಲಿಲ್ಲ ಎಂದು ಟಿಎನ್ಐಇಗೆ ತಿಳಿಸಿದರು.
ಇದನ್ನೂ ಓದಿ: ಪ್ರತಿಮಾ ಕೊಲೆ ಪ್ರಕರಣದಲ್ಲಿ ಟಾರ್ಗೆಟ್; ಲೋಕಸಭೆ ಚುನಾವಣೆಗೂ ಮುನ್ನ ನನ್ನನ್ನು ತಿಹಾರ್ ಜೈಲಿಗೆ ಕಳುಹಿಸಲು ಪಿತೂರಿ: ಮುನಿರತ್ನ
ಕಳೆದ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಡಿಕೆಶಿ ಸಹೋದರರ ವಿರುದ್ಧ ಶಾಸಕ ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ, ತಮ್ಮ ಕ್ಷೇತ್ರದ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ಸರ್ಕಾರದಿಂದ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ವಿಶೇಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಆಗ ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು ಮುನಿರತ್ನ ಅವರಿಗೆ ಲಿಖಿತ ದೂರು ನೀಡುವಂತೆ ತಿಳಿಸಿದ್ದರು.
ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಐಎಎಸ್ ಅಧಿಕಾರಿ ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯ ಅವರು ಡಿಕೆ ಸಹೋದರರ ನಿಕಟವರ್ತಿಯಾಗಿದ್ದು, ತಮ್ಮ ಕ್ಷೇತ್ರದಲ್ಲಿ ತನಗಿಂತ ಅವರ ಮಾತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಮುನಿರತ್ನ ಅವರು ಪ್ರತಿಭಟನೆ ವೇಳೆ ದೂರಿದ್ದರು.
ಇದನ್ನೂ ಓದಿ: 'ಫಿಲಂನವ್ರದ್ದು ಏನೋ ಇರ್ತದೆ, ಆ ಮೇಲೆ ಡ್ರಾಮಾ ಅರ್ಟಿಸ್ಟ್, ಸ್ಕ್ರಿಪ್ಟ್ ನೋಡೋಣ': ಮುನಿರತ್ನ ಕಂಡು ಛೇಡಿಸಿದ ಡಿಕೆ ಶಿವಕುಮಾರ್
ಈ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಆಯುಕ್ತ ಸುರೇಶ್, 'ಗಾಂಜಾ ಮತ್ತು ಡ್ರಗ್ಸ್ ದಂಧೆ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಗುರುವಾರವೂ ದೊಡ್ಡ ಪ್ರಮಾಣದ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾರುಗಳ ಹಾನಿಗೆ ಸಂಬಂಧಿಸಿದಂತೆ, ನಾವು ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಪುನರಾವರ್ತಿತ ಅಪರಾಧಿಗಳಿದ್ದರೆ, ಕಾನೂನಿನ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸುತ್ತೇವೆ' ಎಂದರು.