ರಾಜಕೀಯ

ಸೋಮಣ್ಣ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ, ಬರಲಿಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ: ಬಿ ಎಸ್ ಯಡಿಯೂರಪ್ಪ

Sumana Upadhyaya

ಬೆಂಗಳೂರು: ಪಕ್ಷದಲ್ಲಿ ಕೆಲವು ಹಿರಿಯ ನಾಯಕರಿಗೆ ಮನ್ನಣೆಯಿಲ್ಲ, ಹೈಕಮಾಂಡ್ ಒತ್ತಾಯಕ್ಕೆ ಕಟ್ಟುಬಿದ್ದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡೆರಡು ಕ್ಷೇತ್ರದಿಂದ ಚುನಾವಣೆಗೆ ನಿಂತರೂ ಸೋತೆ ಎಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಸಿದ್ಧಲಿಂಗ ಸ್ವಾಮಿಗಳ ಮುಂದೆ ನೋವು ತೋಡಿಕೊಂಡಿದ್ದ ಮಾಜಿ ಸಚಿವ ವಿ ಸೋಮಣ್ಣ ಅವರ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಲ್ಲಿ ಪ್ರತಿಕ್ರಿಯೆ ಕೇಳಿದರು.

ಆಗ ಬಿ ಎಸ್ ಯಡಿಯೂರಪ್ಪ, ಅವರನ್ನು ಫೋನ್‌ನಲ್ಲಿ ಸಂಪರ್ಕಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಅವರು ಫೋನ್‌ ರಿಸೀವ್‌ ಮಾಡುತ್ತಿಲ್ಲ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಬರಲಿಲ್ಲ ಅಂದರೆ ಏನು ಮಾಡಲು ಆಗುತ್ತದೆ ಎಂದು ಸೋಮಣ್ಣ ಅವರು ಪಕ್ಷ ಬಿಡಲು ಮನಸ್ಸು ಮಾಡಿದ್ದಾರೆ ಎಂಬ ಸುಳಿವನ್ನು ಯಡಿಯೂರಪ್ಪ ನೀಡಿದ್ದಾರೆ. 

ಸೋಮಣ್ಣ ಅವರು ಸಿದ್ಧಗಂಗಾ ಮಠದಲ್ಲಿ ಮಾತನಾಡಿದ್ದನ್ನು ನಾನು ನೋಡಿದ್ದೇನೆ. ಅವರ ಬಳಿ ಫೋನಲ್ಲಿ ಮಾತಾಡೋ ಪ್ರಯತ್ನ ಮಾಡಿದ್ದೇವೆ. ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಬರಲಿಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ ಎಂದು ಹೇಳಿದರು.

ಯತ್ನಾಳ್‌ ಮನೆಗೆ ಯಾರು ಹೋಗ್ತಾರೆ?: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ ವಿಜಯೇಂದ್ರ ಅವರು ನನಗೆ ಅನುದಾನ ತಪ್ಪಿಸಿದ್ದಾರೆ. ಈಗ ರಾಜ್ಯಾಧ್ಯಕ್ಷರಾದ ಬಳಿಕ ಅವರು ಮನೆಗೆ ಬಂದು ಹೂಗುಚ್ಛ ಕೊಡೋ ನಾಟಕ ಆಡೋದು ಬೇಡ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಹೇಳಿಕೆಗೆ ಆಕ್ರೋಶದಿಂದ ಪ್ರತಿಕ್ರಿಯಿಸಿದ ಬಿ.ಎಸ್‌. ಯಡಿಯೂರಪ್ಪ, ಅವರ ಮನೆ ಬಾಗಿಲಿಗೆ ಯಾರು ಹೋಗಿದ್ರು? ʻಯತ್ನಾಳ್ ಮನೆಗೆ ಹೋಗ್ತೀವಿ ಅಂದೋರು ಯಾರು ಎಂದು ಕೇಳಿದರು. 

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ ವೈ ವಿಜಯೇಂದ್ರ ಆಯ್ಕೆಯನ್ನು ಪ್ರಶ್ನಿಸಿ ಮತ್ತು ಪಕ್ಷದಲ್ಲಿ ತಮಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ, ತಮ್ಮ ಸಮಸ್ಯೆ ಕೇಳುವವರಿಲ್ಲ ಎಂದು ಸಮಸ್ಯೆ ಹೊತ್ತುಕೊಂಡು ವಿ. ಸೋಮಣ್ಣ, ಬಸನಗೌಡ ಪಾಟೀಲ್‌ ಯತ್ನಾಳ್‌, ರಮೇಶ್ ಜಾರಕಿಹೊಳಿ, ಅರವಿಂದ್ ಬೆಲ್ಲದ್ ಮೊದಲಾದವರು ಹೈಕಮಾಂಡ್ ನ್ನು ಭೇಟಿ ಮಾಡುವ ಸಾಧ್ಯತೆಯಿದೆ.

SCROLL FOR NEXT