ರಾಜಕೀಯ

ಸದ್ದು ಮಾಡುತ್ತಿದೆ 'ಆಪರೇಷನ್ ಹಸ್ತ': 2024ರ ಚುನಾವಣೆಗೆ ಮುನ್ನ ಬಿಜೆಪಿಯ ಹಲವು ನಾಯಕರು 'ಕೈ' ಹಿಡಿಯಲು ಸಜ್ಜು!

Sumana Upadhyaya

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. ಆಡಳಿತಾರೂಢ ಕಾಂಗ್ರೆಸ್ 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಜೆಡಿಎಸ್‌ನಿಂದ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಳ್ಳುವಲ್ಲಿ ನಿರತವಾಗಿದೆ. ವಿಧಾನಸಭೆಯಲ್ಲಿ ತನ್ನ ನಾಯಕ ಮತ್ತು ರಾಜ್ಯ ಘಟಕದ ಅಧ್ಯಕ್ಷರನ್ನು ಇನ್ನೂ ಘೋಷಿಸದ ಬಿಜೆಪಿಯ ಲಾಭವನ್ನು ಅತ್ಯಂತ ಹಳೆಯ ಪಕ್ಷವಾದ, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ "ಆಪರೇಷನ್ ಹಸ್ತ" ಮುಂದುವರಿಸಲು ಭಾರೀ ಉತ್ಸುಕವಾಗಿದೆ. 

ರಾಜ್ಯ ಬಿಜೆಪಿ ನಾಯಕತ್ವವು ಜಿಲ್ಲಾ ಮತ್ತು ಸ್ಥಳೀಯ ಮಟ್ಟದಲ್ಲಿ ತನ್ನ ನಾಯಕರ ಮೇಲೆ ಹಿಡಿತ ಕಳೆದುಕೊಳ್ಳುತ್ತಿದೆ. ಚಿಕ್ಕಮಗಳೂರಿನಂತಹ ಜಿಲ್ಲೆಗಳಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಸಿ.ಟಿ.ರವಿ ಅವರು ತಮ್ಮ ಬೆಂಬಲಿಗ ಸ್ಥಳೀಯ ಪುರಸಭೆಯ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮೇಲೆ ಹಿಡಿತವನ್ನು ಕಳೆದುಕೊಂಡಿದ್ದಾರೆ. ಅವರ ನಿರ್ದೇಶನದ ಹೊರತಾಗಿಯೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ವೇಣುಗೋಪಾಲ್ ನಿರಾಕರಿಸಿದ್ದಾರೆ. 

ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ರವಿ ಅವರ ಆಪ್ತರಾಗಿದ್ದ ಎಚ್‌ಡಿ ತಮ್ಮಯ್ಯ ಅವರನ್ನು ಚಿಕ್ಕಮಗಳೂರಿನಿಂದ ಕಣಕ್ಕಿಳಿಸಿತು. ಚುನಾವಣೆಯಲ್ಲಿ ಚಿಕ್ಕಮಂಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದ ರವಿ ಅವರನ್ನು ತಮ್ಮಯ್ಯ ಸೋಲಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿಯ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ವಿಧಾನಸಭೆಗೆ ಸೇರ್ಪಡೆಗೊಂಡಾಗ ವಿಧಾನಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್‌ಗೆ ದೊಡ್ಡ ಉತ್ತೇಜನ ಸಿಕ್ಕಿತು. ಉತ್ತರ ಕರ್ನಾಟಕದಲ್ಲಿ ಇಬ್ಬರಿಗೂ ಸಾಕಷ್ಟು ಅನುಯಾಯಿಗಳಿವೆ. ಶಿರಹಟ್ಟಿಯ ಬಿಜೆಪಿ ಮಾಜಿ ಶಾಸಕ ರುದ್ರಪ್ಪ ಲಮಾಣಿ ಕಾಂಗ್ರೆಸ್ ಸೇರುವಂತೆ ಮನವೊಲಿಸಿದವರು ಜಗದೀಶ್ ಶೆಟ್ಟರ್. 

"ನಮ್ಮ ಪಕ್ಷಕ್ಕೆ 45 ನಾಯಕರು ಸೇರ್ಪಡೆಯಾಗಲು ಸಿದ್ಧರಾಗಿದ್ದಾರೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಮೂಡಿಗೆರೆ ಬಿಜೆಪಿಯ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲಮಾಣಿ ಅವರೊಂದಿಗೆ ಭೇಟಿ ಮಾಡಿದ್ದರು.

ಇತ್ತೀಚೆಗಷ್ಟೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸೇರಿದಂತೆ ಮುಖಂಡರು ಆಡಳಿತ ಪಕ್ಷ ಸೇರಲು ವೇದಿಕೆ ಸಿದ್ಧವಾಗಿದೆ. 

''ನಾನು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ. ಆದರೆ ಅವರು ನಮ್ಮನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು ಎಂದು ಪೂರ್ಣಿಮಾ ಇತ್ತೀಚೆಗೆ ಸುದ್ದಿಗಾರರಿಗೆ ಹೇಳಿದ್ದರು. ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಜುಲೈ 2024 ರ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಭರವಸೆ ನೀಡಿದ್ದಾರೆ ಎಂದು ಅವರ ಪತಿ ಡಿಟಿ ಶ್ರೀನಿವಾಸ್ ಹೇಳಿದ್ದಾರೆ. 

ಗೊಲ್ಲ ಸಮುದಾಯದ “ಊರು ಗೊಲ್ಲ” ಉಪಪಂಗಡಕ್ಕೆ ಸೇರಿದವರಾಗಿರುವ ಶ್ರೀನಿವಾಸ್ ಮತ್ತು ಪೂರ್ಣಿಮಾ ಅವರಿಗೆ ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಬೆಂಬಲಿಗರಿದ್ದಾರೆ.

SCROLL FOR NEXT