ರಾಜಕೀಯ

ಐಟಿ ದಾಳಿಯಲ್ಲಿ ಸಿಕ್ಕ ಹಣ ಬಿಜೆಪಿಗೆ ಸೇರಿದ್ದು ಎಂದ ಡಿಕೆಶಿ: ಸಾಕ್ಷ್ಯ ಒದಗಿಸಲಿ ಎಂದು ಸದಾನಂದ ಗೌಡ ಸವಾಲು!

Ramyashree GN

ಬೆಂಗಳೂರು: ರಾಜ್ಯದಲ್ಲಿ ದಾಳಿ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿದ ಹಣ ಹಿಂದಿನ ಸರ್ಕಾರಕ್ಕೆ ಸೇರಿದ್ದು ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸದಾನಂದ ಗೌಡ, ಈ ಕುರಿತು ತನಿಖೆಗೆ ಆದೇಶಿಸಿ ಮತ್ತು ಅವರ ಆರೋಪಗಳಿಗೆ ಸೂಕ್ತ ಸಾಕ್ಷ್ಯವನ್ನು ಒದಗಿಸಲಿ ಎಂದಿದ್ದಾರೆ.

ಮಂಗಳವಾರ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಅವರು, ನಗದು ಸಂಗ್ರಹಣೆಯಲ್ಲಿ ತೊಡಗಿರುವವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ವಸೂಲಿ ಮಾಡಿರುವ ಹಣ ಬಿಜೆಪಿಗೆ ಸೇರಿದ್ದು ಎಂದು ಉಪ ಮುಖ್ಯಮಂತ್ರಿ ಹೇಳಿದ್ದಾರೆ. ಇದು ನಮ್ಮ ಪಕ್ಷಕ್ಕೆ ಸೇರಿದ್ದು ಎಂಬುದಕ್ಕೆ ಪುರಾವೆ ಒದಗಿಸಲಿ. ನಗದು ದಂಧೆ ಹಿಂದೆ ಬಿದ್ದಿರುವವರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣವು ಬಿಜೆಪಿ ನಾಯಕರಿಗೆ ಸೇರಿದ್ದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಹಿಂದೆ ಆರೋಪಿಸಿದ್ದರು.

'ಭ್ರಷ್ಟಾಚಾರದ ಆಧಾರ ಸ್ತಂಭವೇ ಬಿಜೆಪಿಯಾಗಿದೆ. ಹೀಗಾಗಿಯೇ ರಾಜ್ಯ ಜನತೆ ಅವರನ್ನು ತಿರಸ್ಕರಿಸಿದ್ದಾರೆ. ಐಟಿ ಅಧಿಕಾರಿಗಳು ದಾಳಿ ನಡೆಸಿ, ವಶಪಡಿಸಿಕೊಂಡ ಹಣ ಬಿಜೆಪಿ ನಾಯಕರಿಗೆ ಸೇರಿದ್ದು. ಈ ಹಣಕ್ಕೂ ಕಾಂಗ್ರೆಸ್ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಅವರು ಹೇಳಿದರು.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ (ಸಿಬಿಡಿಟಿ) ಪತ್ರಿಕಾ ಪ್ರಕಟಣೆಯ ಪ್ರಕಾರ, ದಾಳಿಯ ಸಮಯದಲ್ಲಿ ಹಲವು ದಾಖಲೆಗಳು, ದಾಖಲೆಗಳ ಹಾರ್ಡ್ ಪ್ರತಿಗಳು ಮತ್ತು ಡಿಜಿಟಲ್ ಡೇಟಾದ ರೂಪದಲ್ಲಿ ಸಾಕ್ಷ್ಯಗಳು ಕಂಡುಬಂದಿವೆ ಮತ್ತು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕರ್ನಾಟಕ ಮತ್ತು ಕೆಲವು ಇತರ ರಾಜ್ಯಗಳಲ್ಲಿ ಸರ್ಕಾರಿ ಗುತ್ತಿಗೆದಾರರು ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 8 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರದ ಆಭರಣಗಳ ಜೊತೆಗೆ ಅಂದಾಜು 94 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಅಕ್ಟೋಬರ್ 12ರಂದು ಬೆಂಗಳೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದರು. 

ಇದಕ್ಕೂ ಮುನ್ನ ಭಾನುವಾರ, ಬಿಜೆಪಿ ಮುಖಂಡ ಸಿಟಿ ರವಿ ಅವರು ವಸೂಲಿ ಮಾಡಿದ ಹಣವು ಮುಂಬರುವ ಪಂಚ ರಾಜ್ಯಗಳ ಚುನಾವಣೆಗಾಗಿ ಕಾಂಗ್ರೆಸ್‌ನ ಅಕ್ರಮ ನಿಧಿ ಸಂಗ್ರಹದ ಭಾಗವಾಗಿದೆ ಎಂದು ಆರೋಪಿಸಿದರು.

'ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಯಿಂದ 42 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಬಿಲ್ಡರ್ ಸಂತೋಷ್ ಕೃಷ್ಣಪ್ಪ ಅವರ ನಿವಾಸದಿಂದ ಇನ್ನೂ 40 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಈ ಹಣವನ್ನು ಮುಂಬರುವ ರಾಜ್ಯಗಳ ಚುನಾವಣೆಗೆ ಬಳಸಲು ಉದ್ದೇಶಿಸಲಾಗಿದೆ ಎಂದು ನಮಗೆ ಮಾಹಿತಿ ಇದೆ. ಈ ಎಲ್ಲಾ ಹಣವು ಕಾಂಗ್ರೆಸ್‌ಗೆ ಸೇರಿದ್ದು' ಎಂದು ದೂರಿದ್ದರು.

SCROLL FOR NEXT