ಬೆಂಗಳೂರು: ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಪಕ್ಷದೊಳಗೆ ಅಥವಾ ಹೊರಗಿನವರ ಕೈಗೊಂಬೆಯಂತೆ ವರ್ತಿಸಲು ನನಗೆ ಸಾಧ್ಯವಿಲ್ಲ. ಏಕೆಂದರೆ, ನಾನು ಪಕ್ಷದ 'ರಚನಾತ್ಮಕ ಕಾರ್ಯಕರ್ತ' ಎಂದು ಬಿಜೆಪಿ ಹಿರಿಯ ಮುಖಂಡ ವಿ ಸೋಮಣ್ಣ ಬುಧವಾರ ದೃಢಪಡಿಸಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ‘ಅವಳಿ ಸೋಲಿನ ಆಘಾತದಿಂದ ನಾನು ಇನ್ನೂ ಹೊರಬಂದಿಲ್ಲ' ಎಂದರು.
'ನನ್ನ ಉಭಯ ಸೋಲು ನನಗೆ ಅನೇಕ ವಿಷಯಗಳನ್ನು ಕಲಿಸಿದೆ. ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ. ನಾನಿನ್ನು ಯಾರ ಕೈಗೊಂಬೆಯಲ್ಲ ಎಂದು ನಿಮಗೆ (ಮಾಧ್ಯಮಗಳಿಗೆ) ಹೇಳುತ್ತೇನೆ' ಎಂದು ಅವರು ಬಿಜೆಪಿ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ವೈಯಕ್ತಿಕ ಲಾಭಕ್ಕಾಗಿ ಅಥವಾ ಅಧಿಕಾರಕ್ಕಾಗಿ ನಾನು ರಾಜಕೀಯಕ್ಕೆ ಬಂದಿಲ್ಲ. ಬದಲಿಗೆ ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಸಾರ್ವಜನಿಕ ಸೇವೆ ಮಾಡುವ ನನ್ನ ಬದ್ಧತೆಯು ಜಾತಿ, ಧರ್ಮ ಅಥವಾ ಯಾವುದೇ ಪಂಥದಿಂದ ಪ್ರಭಾವಿತವಾಗಿಲ್ಲ ಎಂದು ಅವರು ಒತ್ತಿಹೇಳುತ್ತಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ಮಾಜಿ ಸಚಿವ ವಿ ಸೋಮಣ್ಣ ಕಣ್ಣು; ಕೇಸರಿ ಪಕ್ಷಕ್ಕೆ ಮತ್ತೊಂದು ಸಂಕಷ್ಟ!
ಬಸವರಾಜ ಬೊಮ್ಮಾಯಿಯೊಂದಿಗಿನ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಳೆಯ ಕುಟುಂಬದ ಸ್ನೇಹಿತನನ್ನು (ಬೊಮ್ಮಾಯಿ) ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದರು.
‘ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಹಿಟ್ ಆ್ಯಂಡ್ ರನ್ ಮಾಡಲು ನಾನು ರೆಡಿ ಇಲ್ಲ. ಈ ಬಗ್ಗೆ ಪಕ್ಷದ ಮುಖಂಡರ ಬಳಿ ಮಾಹಿತಿ ಪಡೆಯುತ್ತೇನೆ. ಒಬ್ಬ ಸೀನಿಯರ್ ಆಗಿ ಮಾಹಿತಿ ಇಲ್ಲದೇ ಮಾತನಾಡುವುದಿಲ್ಲ’ ಎಂದು ಸುದ್ದಿಗಾರರ ಪ್ರಶ್ನೆಗೆ ಸೋಮಣ್ಣ ಪ್ರತಿಕ್ರಿಯಿಸಿದರು.
‘ನಾನು ಮತ್ತು ಬೊಮ್ಮಾಯಿ ಸ್ನೇಹಿತರು. ಅವರ ತಂದೆ ದಿವಂಗತ ಎಸ್ಆರ್ ಬೊಮ್ಮಾಯಿಯವರ ಗರಡಿಯಲ್ಲಿ ಬೆಳೆದವನು ನಾನು. ಬೊಮ್ಮಾಯಿ ಅವರನ್ನು ಭೇಟಿ ಮಾಡದೇ ಬಹಳ ದಿನಗಳಾಗಿತ್ತು. ಹೀಗಾಗಿ, ಅವರನ್ನು ಭೇಟಿ ಮಾಡಲು ಬಂದಿದ್ದೆ. ಈ ಭೇಟಿಯ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ' ಎಂದು ತಿಳಿಸಿದರು.