ರಾಜಕೀಯ

ಜನತಾ ದರ್ಶನದಲ್ಲಿ ಜಟಾಪಟಿ: ಸಚಿವ, ಶಾಸಕರ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ ಸಂಸದ

Lingaraj Badiger

ಬೆಂಗಳೂರು: ಜನತಾದರ್ಶನದ ವೇಳೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ಕೋಲಾರದ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಮುನಿಸ್ವಾಮಿ ಅವರು, ಕಾಂಗ್ರೆಸ್ ಸಚಿವ, ಕೋಲಾರ ಶಾಸಕ ಮತ್ತು ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ) ವಿರುದ್ಧ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರಿಗೆ ಬುಧವಾರ ದೂರು ನೀಡಿದ್ದಾರೆ.

ನಗರಾಭಿವೃದ್ಧಿ ಸಚಿವ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರೂ ಆದ  ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ, ಎಸ್ಪಿ ಎಂ.ನಾರಾಯಣ ಅವರ ವಿರುದ್ಧ ಬಿಜೆಪಿ ಸಂಸದ ರಾಜ್ಯಪಾರಿಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಕೋಲಾರದಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದ ವೇದಿಕೆ ಮೇಲೆಯೇ ತಮ್ಮ ಮೇಲೆ ಹಲ್ಲೆ ನಡೆಸಿ ಅವಮಾನಿಸಲಾಗಿದೆ ಎಂದು ಮುನಿಸ್ವಾಮಿ ಆರೋಪಿಸಿದ್ದಾರೆ. ಸಚಿವ ಬೈರತಿ ಸುರೇಶ್, ಶಾಸಕ ನಾರಾಯಣಸ್ವಾಮಿ, ಎಸ್ಪಿ ನಾರಾಯಣ ಅವರು ಅಸಾಂವಿಧಾನಿಕವಾಗಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ.

ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಸೇರಿದಂತೆ 30 ಸದಸ್ಯರ ಬಿಜೆಪಿ ನಿಯೋಗ ಇಂದು ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.

“ಮೇಲೆ ಹೇಳಿದ ವ್ಯಕ್ತಿಗಳು ಜನ ಪ್ರತಿನಿಧಿಯೊಂದಿಗೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಸಂವಿಧಾನವು ಆಡಳಿತ ಪಕ್ಷದ ಜೊತೆಗೆ ವಿರೋಧ ಪಕ್ಷಕ್ಕೂ ಅದೇ ಅಧಿಕಾರವನ್ನು ನೀಡುತ್ತದೆ ಎಂದು ಮುನಿಸ್ವಾಮಿ ದೂರಿನಲ್ಲಿ ಹೇಳಿದ್ದಾರೆ.

“ನನ್ನನ್ನು ಹೊರಗೆ ತಳ್ಳಿದ ಕೋಲಾರ ಎಸ್ಪಿ ವಿರುದ್ಧವೂ ಹಕ್ಕು ಚ್ಯುತಿ ಮಂಡಿಸುತ್ತಿದ್ದೇನೆ. ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೂ ದೂರು ನೀಡುತ್ತೇನೆ ಎಂದು ಮುನಿಸ್ವಾಮಿ ಹೇಳಿದ್ದಾರೆ.

ಕಳೆದ ಸೋಮವಾರ ಜನರನ್ನು ನೇರವಾಗಿ ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಪರಿಹರಿಸಲು ಕಾಂಗ್ರೆಸ್ ಸರ್ಕಾರ ಜನತಾದರ್ಶನ ಆಯೋಜಿಸಿದ್ದ ವೇಳೆ ಈ ಘಟನೆ ನಡೆದಿದೆ.

SCROLL FOR NEXT