ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ 
ರಾಜಕೀಯ

ಲೋಕಸಭೆ ಚುನಾವಣೆಯಲ್ಲಿ ಎಲ್ಲಾ 28 ಸೀಟು ಗೆದ್ದು, ಮೋದಿಗೆ ಉಡುಗೊರೆಯಾಗಿ ನೀಡುತ್ತೇವೆ: ಯಡಿಯೂರಪ್ಪ

Lingaraj Badiger

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ "ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿಯವರಿಗೆ ಅರ್ಪಿಸುತ್ತೇವೆ" ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಉನ್ನತ ನಾಯಕತ್ವವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. “ರಾಜ್ಯದಿಂದ ಎಲ್ಲಾ 28 ಅಭ್ಯರ್ಥಿಗಳನ್ನು ಗೆಲ್ಲಿಸಿ ನಾನು ದೆಹಲಿಗೆ ಕಳುಹಿಸುತ್ತೇನೆ ಎಂದು ಅವರಿಗೆ ಭರವಸೆ ನೀಡಿದ್ದೇನೆ. ನನಗೆ ಅದರಲ್ಲಿ ವಿಶ್ವಾಸವಿದೆ. ಇದೇ ವಿಷಯವನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೂ ಹೇಳಿದ್ದೇನೆ. ಈ ಬಾರಿ ಖಂಡಿತವಾಗಿಯೂ ಇಲ್ಲಿ ಎಲ್ಲಾ ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿಯವರಿಗೆ ಉಡುಗೊರೆಯಾಗಿ ನೀಡುತ್ತೇವೆ ಎಂದು ಹೇಳಿದರು.

“ಎಲ್ಲವೂ ನಮ್ಮ ಪರವಾಗಿದೆ. ನಾವು ನಮ್ಮ ಗುರಿಯನ್ನು ತಲುಪುತ್ತೇವೆ. ಪ್ರಧಾನಿ ಮೋದಿ ಅವರು ಏಪ್ರಿಲ್ 14 ರಂದು ಕರಾವಳಿ ನಗರವಾದ ಮಂಗಳೂರು ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಪ್ರಚಾರ ಮಾಡಲು ಯೋಚಿಸುತ್ತಿದ್ದಾರೆ. ಅವರ ಕಾರ್ಯಕ್ರಮವನ್ನು ಅಂತಿಮಗೊಳಿಸಬೇಕಾಗಿದೆ” ಎಂದು ಮಾಜಿ ಸಿಎಂ ವಿವರಿಸಿದರು.

ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಉಂಟಾದ ಬಂಡಾಯ ಮತ್ತು ಭಿನ್ನಾಭಿಪ್ರಾಯವನ್ನು ಸಮರ್ಥವಾಗಿ ನಿಭಾಯಿಸಲಾಗಿದ್ದು, ಇದೀಗ ಎಲ್ಲವೂ ಸರಿಯಾಗಿದೆ. “ನಾನು ಎಲ್ಲರನ್ನು ಮನೆಗೆ ಕರೆದಿದ್ದೇನೆ. ಚರ್ಚೆ ನಡೆಸಿ ಒಗ್ಗಟ್ಟಾಗಿ ಹೋಗುವಂತೆ ಹೇಳಿದ್ದೇನೆ. ಈಗ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ” ಎಂದು ಯಡಿಯೂರಪ್ಪ ಹೇಳಿದರು.

SCROLL FOR NEXT