ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ 
ರಾಜಕೀಯ

ಬಿಜೆಪಿ ಭ್ರಷ್ಟಾಚಾರಿಗಳಿಗೆ ಕ್ಲೀನ್ ಚಿಟ್ ನೀಡುವ ವಾಷಿಂಗ್ ಮೆಷಿನ್‌ನಂತೆ ಕೆಲಸ: ಖರ್ಗೆ ಕಿಡಿ

Nagaraja AB

ಕಲಬುರಗಿ: ಪ್ರಧಾನಿ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳುತ್ತಾರೆ, ಆದರೆ ಬಿಜೆಪಿ ಭ್ರಷ್ಟಾಚಾರ ಆರೋಪ ಹೊತ್ತವರಿಗೆ ಕ್ಲೀನ್ ಚಿಟ್ ನೀಡುವ ವಾಷಿಂಗ್ ಮೆಷಿನ್‌ನಂತೆ ಕೆಲಸ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಕಲಬುರಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರ ನಾಮಪತ್ರ ಸಲ್ಲಿಕೆಯ ನಂತರ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಮೋದಿಜಿ ಮತ್ತು ಶಾ ಬಳಿ ಒಂದು ದೊಡ್ಡ ಯಂತ್ರವಿದೆ. ವಾಷಿಂಗ್ ಮಷೀನ್. ಇದು ಎಷ್ಟು ದೊಡ್ಡ ಯಂತ್ರವೆಂದರೆ ಅದು ಬಟ್ಟೆಗಳನ್ನು ಮಾತ್ರವಲ್ಲ; ಮನುಷ್ಯರನ್ನು ಕೂಡ ಶುದ್ಧಗೊಳಿಸಬಲ್ಲದು.ಒಮ್ಮೆ ಬಿಜೆಪಿ ಸೇರಿದರೆ ಸಾಕು ಈ ಯಂತ್ರದ ಮೂಲಕ ಹಾದು ಎಲ್ಲರೂ ಪರಿಶುದ್ಧರಾಗುತ್ತಾರೆ. ಭ್ರಷ್ಟತೆಯ ಆರೋಪದ ಮೇಲೆ ಜೈಲಿಗೆ ಕಳುಹಿಸಲ್ಪಟ್ಟವರು, ಭ್ರಷ್ಟಾಚಾರ ಆರೋಪ ಪ್ರಕರಣ ದಾಖಲಾದವರು, ನೀವೇ ಜೈಲಿಗೆ ಕಳಿಸದವರೆಲ್ಲಾ ನಿಮ್ಮ ಪಕ್ಷಕ್ಕೆ ಸೇರಿದ ಮೇಲೆ ಅದು ಹೇಗೆ ಪರಿಶುದ್ಧರಾಗುತ್ತಾರೆ? ಎಂದು ಪ್ರಶ್ನಿಸಿದರು.

ಮೋದಿಜೀ ಭ್ರಷ್ಟರನ್ನು ಎಂದಿಗೂ ಬಿಡುವುದಿಲ್ಲ ಎನ್ನುತ್ತಾರೆ. ಆದರೆ ಭ್ರಷ್ಟರು ಅವರ ಹೆಗಲ ಮೇಲೆಯೇ ಕುಳಿತಿದ್ದಾರೆ. ಅಂಥವರನ್ನು ನೀವು ಸಿಎಂ ಮಾಡುತ್ತೀರಿ. ಕರ್ನಾಟಕ, ಗೋವಾ, ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲಿ ನೀವು ಇದನ್ನೇ ಮಾಡಿದ್ದೀರಿ. ಇದೇ ಮೋದಿ ಮತ್ತು ಶಾ ರ ಪ್ರಜಾಸತ್ತಾತ್ಮಕ ತತ್ವಗಳು. ಪ್ರತಿಪಕ್ಷಗಳನ್ನು ಗುರಿಯಾಗಿಸಲು ಮತ್ತು ಬಿಜೆಪಿಯೇತರ ರಾಜ್ಯಗಳಲ್ಲಿಯ ಸರ್ಕಾರಗಳನ್ನು ಉರುಳಿಸಲು ಮೋದಿ ಸರ್ಕಾರ ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಈ ಚುನಾವಣೆಯು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ನಡೆಯುತ್ತಿದ್ದು ಬಿಜೆಪಿಗೆ ಮತ ನೀಡಿದರೆ ಮೋದಿ ಅವರು ಎಲ್ಲಾ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಾರೆ. ಈಗಾಗಲೇ ಮೋದಿ ಎಲ್ಲಾ ಸಂಘಟನೆಗಳನ್ನು ನಾಶ ಮಾಡಿದ್ದಾರೆ. ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ನೇಮಿಸಿಕೊಂಡು ಇತರರನ್ನು ನಿರುದ್ಯೋಗಿಗಳು ಮತ್ತು ಶಕ್ತಿಹೀನರನ್ನಾಗಿ ಮಾಡಿದ್ದಾರೆ. ಹಾಗಾಗಿ ಪ್ರಜಾಪ್ರಭುತ್ವವನ್ನು ಉಳಿಸಬೇಕಾದರೆ ಹಾಗೂ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರವರು ರಚಿಸಿದ ಸಂವಿಧಾನವನ್ನು ರಕ್ಷಿಸಲು ಮತ್ತು ಸ್ಥಳೀಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಗೆ ಮತ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.

SCROLL FOR NEXT