ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ 
ರಾಜಕೀಯ

ಸತತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೋಮಣ್ಣ ಎಷ್ಟು ಹಣ ಲೂಟಿ ಹೊಡೆದಿರಬೇಕು?: ಸಿಎಂ ಸಿದ್ದರಾಮಯ್ಯ

Manjula VN

ತುಮಕೂರು: ಸತತ ಚುನಾವಣೆಯಲ್ಲಿ ಸ್ಪರ್ಧಿಸಲು ಸೋಮಣ್ಣ ಎಷ್ಟು ಹಣ ಲೂಟಿ ಮಾಡಿರಬಹುದು ಎಂಬುದನ್ನು ಊಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದರು.

ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ ಬಳಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೋಮಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದ್ದ ವಿ.ಸೋಮಣ್ಣ ರೂ.50 ಕೋಟಿಯಿಂದ ರೂ.60 ಕೋಟಿ ಹಣ ಖರ್ಚು ಮಾಡಿದ್ದಾರೆ. ಚಾಮರಾಜನಗರದಲ್ಲೂ ಅಷ್ಟೇ ಪ್ರಮಾಣದ ಹಣ ಖರ್ಚು ಮಾಡಿ ಸೋತಿದ್ದಾರೆ. ಸೋಮಣ್ಣ ಬಳಿ ಹಣವಿದೆ ಎಂದು ತುಮಕೂರಿಗೆ ಕರೆತಂದು ನಿಲ್ಲಿಸಿದ್ದಾರೆ. ವರುಣಾ, ಚಾಮರಾಜನಗರದಲ್ಲಿ ಅಷ್ಟೊಂದು ದೊಡ್ಡ ಮೊತ್ತದ ಹಣ ಖರ್ಚು ಮಾಡಿದ್ದರು. ಚುನಾವಣೆ ನಡೆದು ಇನ್ನೂ ಹತ್ತು ತಿಂಗಳು ಕಳೆಯುವುದರ ಒಳಗೆ ಮತ್ತೊಂದು ಚುನಾವಣೆಗೆ ನಿಂತಿದ್ದಾರೆ. ಹಾಗಾದರೆ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸಮಯದಲ್ಲಿ ಸೋಮಣ್ಣ ಇನ್ನೆಷ್ಟು ಭ್ರಷ್ಟಾಚಾರ ನಡೆಸಿ, ಹಣ ಮಾಡಿರಬಹುದು ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಲೂಟಿ ಮಾಡಿದರು. ಆ ಹಣವನ್ನು ಖರ್ಚು ಮಾಡಲು ಇಲ್ಲಿಗೆ ಬಂದಿದ್ದಾರೆ. ಹಣ ಇದೆ ಎಂಬ ಒಂದೇ ಕಾರಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಸೋಮಣ್ಣ ಕೆಲಸಗಾರ, ವೋಟು ಕೋಡಿ ಎಂದು ಹೇಳುತ್ತಿದ್ದಾರೆ. ಅವರು ವಸತಿ ಸಚಿವರಾಗಿದ್ದ ಸಮಯದಲ್ಲಿ ಬಡವರಿಗೆ ಹೊಸದಾಗಿ ಒಂದೇ ಒಂದು ಮನೆಯನ್ನು ಕಟ್ಟಿಸಿಕೊಟ್ಟಿದ್ದರೆ ದಾಖಲೆ ತೋರಿಸಲಿ. ಅಭಿವೃದ್ಧಿ ಕೆಲಸಗಳನ್ನೇ ಮಾಡಿಲ್ಲ. ಮಾಡಿದ್ದರೆ ಯಾವ ಕೆಲಸ ಮಾಡಿದ್ದಾರೆ ಎಂಬುದನ್ನು ಜನರ ಮುಂದಿಡಲಿ ಎಂದು ಸವಾಲು ಹಾಕಿದರು.

ಇದೇ ವೇಳೆ ಮೈಸೂರು ಭಾಗದ ಜನರು ಸೋಮಣ್ಣ ಅವರನ್ನು ಸೋಲಿಸಿ ಮನೆಗೆ ಕಳುಹಿಸಿದಂತೆ ತುಮಕೂರು ಜಿಲ್ಲೆಯ ಜನರು ಅಂತಹ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

SCROLL FOR NEXT