ಬ್ಯಾಡಗಿಯಲ್ಲಿ ಮಂಗಳವಾರ ಬಿಜೆಪಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದರು
ಬ್ಯಾಡಗಿಯಲ್ಲಿ ಮಂಗಳವಾರ ಬಿಜೆಪಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರಚಾರ ನಡೆಸಿದರು 
ರಾಜಕೀಯ

ಮಾಜಿ ಪ್ರಧಾನಿ ದೇವೇಗೌಡರಿಗೆ ಬುದ್ಧಿ ಹೇಳುವಷ್ಟು ಸಿದ್ದರಾಮಯ್ಯ ದೊಡ್ಡವರಲ್ಲ: ಬಸವರಾಜ ಬೊಮ್ಮಾಯಿ

Ramyashree GN

ಹಾವೇರಿ: ಚುನಾವಣಾ ಪ್ರಚಾರದ ವೇಳೆ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರನ್ನು ಗುರಿಯಾಗಿಸಿಕೊಂಡು ತೀರಾ ವೈಯಕ್ತಿಕವಾಗಿ ಟೀಕೆಗಳನ್ನು ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿಗೆ ಸಲಹೆ ನೀಡುವಷ್ಟು ಸಿದ್ದರಾಮಯ್ಯ ಅವರು ದೊಡ್ಡ ನಾಯಕರಲ್ಲ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿನಾಕಾರಣ ಟೀಕಿಸುವ ಮೂಲಕ ಪ್ರಧಾನಿ ಸ್ಥಾನಕ್ಕೆ ಅಗೌರವ ತೋರಬೇಡಿ ಎಂಬ ದೇವೇಗೌಡರ ಸಲಹೆಗೆ ಸಿದ್ದರಾಮಯ್ಯ ತೀವ್ರವಾಗಿ ಪ್ರತಿಕ್ರಿಯಿಸಿದರು. ಫೆಡರಲ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಧಾನಿ ನಿರಂಕುಶಾಧಿಕಾರಿಯಲ್ಲ ಮತ್ತು ಮುಖ್ಯಮಂತ್ರಿಯೂ ಅವರಿಗೆ ಅಧೀನರಲ್ಲ. ಕನ್ನಡಿಗರಿಗೆ ಆಗಿರುವ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಬೇಕು ಎಂದು ಸಿದ್ದರಾಮಯ್ಯ ದೇವೇಗೌಡರಿಗೆ ಸಲಹೆ ನೀಡಿದರು.

ಈ ಕುರಿತು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಮಾಜಿ ಪ್ರಧಾನಿ ದೇವೇಗೌಡರಿಗೆ ಸಲಹೆ ನೀಡುವಷ್ಟು ಸಿದ್ದರಾಮಯ್ಯ ದೊಡ್ಡವರಲ್ಲ. ಆರು ದಶಕಗಳ ರಾಜಕೀಯ ಅನುಭವವಿರುವ ಗೌಡರಿಗೆ ಬುದ್ಧಿ ಹೇಳುವಷ್ಟು ದೊಡ್ಡವರು ಯಾರೂ ರಾಜ್ಯ ರಾಜಕಾರಣದಲ್ಲಿಲ್ಲ ಎಂದರು

ತುಮಕೂರಿನಲ್ಲಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಮಾಜಿ ಪ್ರಧಾನಿ ದೇವೇಗೌಡರು ನಡೆಸುತ್ತಿರುವ ಸಭೆಗೆ ನುಗ್ಗಿ ದಾಂಧಲೆ ನಡೆಸಿರುವುದನ್ನು ಖಂಡಿಸಿದ ಬೊಮ್ಮಾಯಿ, ರಾಜಕೀಯದಲ್ಲಿ ರೌಡಿಸಂ ಅನ್ನು ಕರ್ನಾಟಕದ ಜನರು ಸಹಿಸುವುದಿಲ್ಲ. ಕನ್ನಡಿಗರ ಹೆಮ್ಮೆಯ ಮಾಜಿ ಪ್ರಧಾನಿ ದೇವೇಗೌಡರ ಸಭೆಯಲ್ಲಿ ಆ ರೀತಿ ದಾಂಧಲೆ ಮಾಡುವುದು ನಮ್ಮ ಸಂಸ್ಕೃತಿ ಅಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅವಕಾಶವಿದೆ. ಆದರೆ, ಎನ್‌ಡಿಎ ಪ್ರಚಾರ ಸಭೆಯಲ್ಲಿ ಕನ್ನಡಿಗರಿಗೆ ಮತ್ತು ಮಾಜಿ ಪ್ರಧಾನಿಗೆ ಅಗೌರವ ತೋರುವ ಗೊಂದಲ ಸೃಷ್ಟಿಸಿರುವುದು ಖಂಡನೀಯ. ಗಲಾಟೆ ಸೃಷ್ಟಿಸುವುದು ಕನ್ನಡಿಗರ ಸಂಸ್ಕೃತಿಯಲ್ಲ, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಅಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ಅವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಅವರು ಇತ್ತೀಚೆಗೆ ಮಹಿಳೆಯರ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದರು. ಅದಕ್ಕೆ ಕಾಂಗ್ರೆಸ್ ಸ್ಪಷ್ಟನೆ ನೀಡಲಿ. ಕಾಂಗ್ರೆಸ್ ಆಡಳಿತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಿವೆ ಎಂದು ಆರೋಪಿಸಿದರು.

ನಂತರ, ಸರಣಿ ಸಭೆಗಳನ್ನು ನಡೆಸಿದ ಬೊಮ್ಮಾಯಿ, ಮೋದಿ ಸರ್ಕಾರದ ಅವಧಿಯಲ್ಲಿ ಹೂಡಿಕೆಗಳು ಹೆಚ್ಚಾದವು. ಇದಕ್ಕೆ ದೇಶದಲ್ಲಿನ ಉತ್ತಮ ಕಾನೂನು ಮತ್ತು ಸುವ್ಯವಸ್ಥೆ ಕಾರಣ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವಾರು ಜನಪರ ಯೋಜನೆಗಳು ಮತ್ತು ನೀತಿಗಳನ್ನು ಒತ್ತಿ ಹೇಳಿದರು.

SCROLL FOR NEXT