ಗೆಲುವಿನ ಬಳಿಕ ಡಾ ಸಿಎನ್ ಮಂಜುನಾಥ್ ಜನತೆಗೆ ಧನ್ಯವಾದ ಹೇಳಿದರು.  
ರಾಜಕೀಯ

ಬೆಂಗಳೂರು ಗ್ರಾಮಾಂತರ 'ಕಮಲ' ತೆಕ್ಕೆಗೆ: ಗ್ರಾಮೀಣ ಪ್ರದೇಶದಲ್ಲಿ ಹಿಡಿತ ಸಾಧಿಸಿದ ಬಿಜೆಪಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಡಿ ಕೆ ಬ್ರದರ್ಸ್ ಹಿಡಿತದಿಂದ ಸಡಿಲಿಸಿ ಕ್ಷೇತ್ರವನ್ನು ಗೆಲ್ಲುವ ಮೂಲಕ ಕೀರ್ತಿ ಪತಾಕೆ ಹಾರಿಸಿರುವ ಹೃದ್ರೋಗ ತಜ್ಞ ಡಾ ಸಿ ಎನ್ ಮಂಜುನಾಥ್ ಅವರ ಗೆಲುವಿಗೆ ನಾನಾ ಕಾರಣಗಳನ್ನು ವಿಶ್ಲೇಷಿಸಲಾಗುತ್ತಿದೆ.

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಅವರು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಅವರನ್ನು ಸೋಲಿಸಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ಗೆ ಇದು ಭಾರೀ ಹಿನ್ನಡೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಕಾಲಿಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಡಾ ಮಂಜುನಾಥ್ ಅವರ ಗೆಲುವಿನ ಅಂತರ ಕಾಂಗ್ರೆಸ್ ಗೆ ಗಾಯದ ಮೇಲೆ ಉಪ್ಪು ಹಾಕಿದಂತಾಗಿದೆ. ಡಾ.ಮಂಜುನಾಥ್ 2.69 ಲಕ್ಷ ಮತಗಳಿಂದ ಜಯಗಳಿಸಿದ್ದು, ಕರ್ನಾಟಕದ ಅತಿ ದೊಡ್ಡ ಗೆಲುವಿನ ಅಂತರಗಳಲ್ಲಿ ಒಂದಾಗಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಅಳಿಯನನ್ನು ಕಣಕ್ಕಿಳಿಸುವ ಮೂಲಕ ತಂತ್ರ ರೂಪಿಸಿದ್ದ ಬಿಜೆಪಿಗೆ ಫಲ ನೀಡಿದೆ. ಇಲ್ಲಿ ಕುತೂಹಲದ ವಿಷಯವೆಂದರೆ ಡಾ ಮಂಜುನಾಥ್ ಅವರು ರಾಜಕೀಯ ಕುಟುಂಬದ ಭಾಗವಾಗಿದ್ದರೂ, ಇದುವರೆಗೆ ಅವರು ಎಂದಿಗೂ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿರಲಿಲ್ಲ. ಹೃದ್ರೋಗ ತಜ್ಞರಾಗಿಯೇ ಅವರು ಜನಮಾನಸದಲ್ಲಿ ಪರಿಚಿತರಾಗಿದ್ದವರು.

ಹೃದ್ರೋಗ ತಜ್ಞ ಮತ್ತು ಜಯದೇವ ಹೃದಯರಕ್ತನಾಳದ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಉನ್ನತ ನಿರ್ದೇಶಕರಾಗಿ ತಮ್ಮದೇ ಆದ ವರ್ಚಸ್ಸು ಮತ್ತು ಯಶಸ್ಸಿನ ಕಥೆಯನ್ನು ಹೊಂದಿರುವ ಮಂಜುನಾಥ್ ಪರವಾಗಿ ಸಾಂಪ್ರದಾಯಿಕ ಜೆಡಿಎಸ್ ಮತಗಳು ಮತ್ತು ಬಿಜೆಪಿ ಮತಗಳು ಅವರನ್ನು ಗೆಲ್ಲುವಂತೆ ಮಾಡಿದವು. 2013ರಿಂದ ಸಂಸದರಾಗಿದ್ದ ಸುರೇಶ್ ಅವರು ಈ ಬಾರಿ ಆಡಳಿತ ವಿರೋಧಿ ಅಲೆಯನ್ನು ಪ್ರಬಲವಾಗಿ ಎದುರಿಸಿದ್ದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರವು 27.53 ಲಕ್ಷ ಸಂಖ್ಯೆಯ ನಗರ ಮತ್ತು ಗ್ರಾಮೀಣ ಮತದಾರರ ಮಿಶ್ರಣವಾಗಿದ್ದು, ಬೆಂಗಳೂರು ಉತ್ತರದ ನಂತರ ರಾಜ್ಯದಲ್ಲಿ ಎರಡನೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದೆ. 2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಚನೆಯಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ 1.3 ಲಕ್ಷ ಮತಗಳಿಂದ ಗೆದ್ದಿದ್ದರು.

2013 ರ ಉಪಚುನಾವಣೆಯಲ್ಲಿ ಡಿ ಕೆ ಸುರೇಶ್ 1.37 ಲಕ್ಷ ಮತಗಳಿಂದ ಗೆದ್ದಿದ್ದರು; 2014 ರಲ್ಲಿ ಅವರು 2.31 ಲಕ್ಷ ಮತಗಳಿಂದ ಮತ್ತು 2019 ರಲ್ಲಿ 2.06 ಲಕ್ಷ ಮತಗಳಿಂದ ಗೆದ್ದರು. ಈ ಎಲ್ಲಾ ದಾಖಲೆಗಳನ್ನು ಮುರಿದ ಮಂಜುನಾಥ್ 2.69 ಲಕ್ಷ ಮತಗಳಿಂದ ಗೆದ್ದು, 11 ಲಕ್ಷ ಮತಗಳನ್ನು ಗಳಿಸಿದರು.

ದೆಹಲಿಯ ಬಿಜೆಪಿ ನಾಯಕರು ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದತ್ತ ಗಮನ ಹರಿಸಿದ್ದರು. ವಾಸ್ತವವಾಗಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಬಾರಿ ಕರ್ನಾಟಕದಲ್ಲಿ ಚನ್ನಪಟ್ಟಣದಿಂದ ತಮ್ಮ ಪ್ರಚಾರವನ್ನು ಮಂಜುನಾಥ್‌ ಪರವಾಗಿ ರೋಡ್‌ಶೋ ಮೂಲಕ ಪ್ರಾರಂಭಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಕೂಡ ಈ ಕ್ಷೇತ್ರ ಮೇಲೆ ಹೆಚ್ಚು ಉತ್ಸುಕವಾಗಿದ್ದರು.

ಬೆಂಗಳೂರು ಗ್ರಾಮಾಂತರ ರಚನೆಯಾದಾಗಿನಿಂದ ಬಿಜೆಪಿ ಈ ಸ್ಥಾನವನ್ನು ಗೆದ್ದಿರಲಿಲ್ಲ. ವಾಸ್ತವವಾಗಿ, 1952 ರಿಂದ ಕನಕಪುರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದ ರಾಮನಗರ, ಕನಕಪುರ, ಮಾಗಡಿ, ಚನ್ನಪಟ್ಟಣ ಮತ್ತು ಬೆಂಗಳೂರು ನಗರದ ಕೆಲವು ಭಾಗಗಳನ್ನು ಒಳಗೊಂಡಿರುವ ಕರ್ನಾಟಕದ ದೊಡ್ಡ ಭಾಗವು 1998 ರಲ್ಲಿ ಎಂ ಶ್ರೀನಿವಾಸ್ ಗೆದ್ದು ಸಂಸದರಾಗಿದ್ದನ್ನು ಹೊರತುಪಡಿಸಿ ಎಂದಿಗೂ ಬಿಜೆಪಿಗೆ ಮತ ಹಾಕಲಿಲ್ಲ.

ತಮ್ಮ ಗೆಲುವಿನ ಬಗ್ಗೆ ನಿನ್ನೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದ ಡಾ.ಮಂಜುನಾಥ್ ಅವರು ಇದು ಜನರ ಗೆಲುವು ಎಂದು ಕರೆದಿದ್ದಾರೆ. ನಾವು ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡುವಾಗ, ನನಗೆ ದೊರೆತ ಬೆಂಬಲ ಮತ್ತು ಪ್ರೋತ್ಸಾಹವು ನನಗೆ ಎರಡು ಒಳನೋಟಗಳನ್ನು ನೀಡಿತು. ನಾನು ಈ ಬಾರಿ 50,000 ಮತಗಳಿಂದ ಸುಮಾರು 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ ಎಂದು ಅಂದಾಜಿಸಿದ್ದೆ. ಜನರೊಂದಿಗೆ ಮಾತನಾಡುವಾಗ ಅನೇಕರು ನನ್ನನ್ನು ಆಯ್ಕೆ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಅದು ನಿಜವಾಗಿದೆ. ಈ ಕ್ಷೇತ್ರದಲ್ಲಿ ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯಗಳು ಮತ್ತು ಕೃಷಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.

ಮಂತ್ರಿ ಸ್ಥಾನ ಬಗ್ಗೆ ಯೋಚಿಸಿಲ್ಲ: ಇಂದು ಬೆಳಗ್ಗೆ ತಮ್ಮ ಮಾವ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ಅವರ ಆಶೀರ್ವಾದ ಪಡೆದು ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ತಮ್ಮ ಅಭೂತಪೂರ್ವ ಗೆಲುವನ್ನು ಅವರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಕ್ಷೇತ್ರದ ಜನತೆಗೆ ಸಮರ್ಪಿಸಿದರು.

ತಮ್ಮ ಮುಂದಿನ ಯೋಜನೆಗಳ ಬಗ್ಗೆ ಮಾತಾಡಿದ ಅವರು ಪ್ರಮುಖ ಕ್ಷೇತ್ರಗಳಾದ ಅರೋಗ್ಯ, ಶಿಕ್ಷಣ ಮತ್ತು ಕೃಷಿ ಮೊದಲಾದವುಗಳಲ್ಲಿ ಮೂಲಭೂತ ಸಮಸ್ಯೆಗಳಿವೆ, ಅವುಗಳನ್ನು ಬಗೆಹರಿಸಲು ಒಬ್ಬ ಸಂಸದನಾಗಿ ಪ್ರಾಮಾಣಿಕ ಪ್ರಯತ್ನ ಮಾಡೋದಾಗಿ ಹೇಳಿದರು. ತಮ್ಮ ಗೆಲುವಿಗೆ ಬೇರೆ ಬೇರೆ ಕಾರಣಗಳಿವೆ, ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟಟ್ಟಿನಿಂದ ಕೆಲಸ ಮಾಡಿದ್ದು ಪ್ರಮುಖ ಕಾರಣವಾದರೆ ಜನ ಬದಲಾವಣೆ ಬಯಸಿದ್ದು ಮತ್ತೊಂದು ಬಲವಾದ ಕಾರಣ. ಕೇಂದ್ರದಲ್ಲಿ ಮಂತ್ರಿಯಾಗುವ ಬಗ್ಗೆ ತಾನು ಯೋಚನೆ ಮಾಡಿಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT