ಶಿವಕುಮಾರ್-ಕುಮಾರಸ್ವಾಮಿ
ಶಿವಕುಮಾರ್-ಕುಮಾರಸ್ವಾಮಿ 
ರಾಜಕೀಯ

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಕುಟುಂಬಗಳ ಪ್ರತಿಷ್ಠೆಯ ಕಾದಾಟ; ವೈದ್ಯರ ಪರ ಅಮಿತ್ ಶಾ ರಂಗಪ್ರವೇಶ?

Shilpa D

ಬೆಂಗಳೂರು: ರಾಜ್ಯದಲ್ಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆ ಭಾರಿ ರಂಗು ಪಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಾರಿ ಹೇಗಾದರೂ ಡಿ.ಕೆ. ಸುರೇಶ್ ಅವರನ್ನ ಸೋಲಿಸಲೇಬೇಕೆಂದು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಡಾ. ಸಿ.ಎನ್ ಮಂಜುನಾಥ್ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸ್ಪರ್ಧೆಯು ರಾಜಕೀಯದ ಪೈಪೋಟಿಯಾಗಿ ಪರಿಣಮಿಸುತ್ತಿದ್ದು, ಬಿಜೆಪಿ ಅಭ್ಯರ್ಥಿಯಾಗಿರುವ ರಾಜಕೀಯ ಅನನುಭವಿ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೈಲೆಂಟ್ ಆಗಿ ರಂಗ ಪ್ರವೇಶಿಸುವ ಸಾಧ್ಯತೆಯಿದೆ.

ಜೆಡಿಎಸ್ ಸರ್ವೋಚ್ಛ ನಾಯಕ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್, ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಿಶ್ರಣವಾಗಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಸೆಣೆಸಾಡಲಿದ್ದಾರೆ.

ಕ್ಷೇತ್ರದಿಂದ ಡಾ.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಅಮಿತ್ ಶಾ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕ್ಷೇತ್ರದ 17 ಲಕ್ಷ ನಗರ ಮತದಾರರನ್ನು ಒಲಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಮಂಜುನಾಥ್ ಅವರ ಹೆಸರನ್ನು ಶಾ ಪ್ರಸ್ತಾಪಿಸಿದರು. ಬಿಜೆಪಿಯ ಮೈತ್ರಿಕೂಟದ ಪಾಲುದಾರ ಜೆಡಿಎಸ್ ಉಳಿದ 10 ಲಕ್ಷ ಗ್ರಾಮೀಣ ಮತದಾರರನ್ನು ಓಲೈಸಬಹುದು ಎಂದು ಜೆಡಿಎಸ್ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಮಂಜುನಾಥ್ ಅವರು ಇತ್ತೀಚೆಗೆ ನವದೆಹಲಿಯಲ್ಲಿ ರಾಜ್ಯ ಜೆಡಿಎಸ್ ಮುಖ್ಯಸ್ಥ ಮತ್ತು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರೊಂದಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದರು ಮತ್ತು ಅವರು ಕ್ಷೇತ್ರದ ಬಗ್ಗೆ ವಿವರವಾಗಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರ ಕಿರಿಯ ಸಹೋದರರಾಗಿರುವ ಕಾರಣ ಹಾಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಅಮಿತ್ ಶಾ ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ತೆರಿಗೆ ಹಂಚಿಕೆ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸಿದರೆ ದಕ್ಷಿಣದ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಡಬಹುದು ಎಂದು ಸುರೇಶ್ ಇತ್ತೀಚೆಗೆ ಹೇಳಿಕೆ ನೀಡಿ ವಿವಾದ ಹುಟ್ಟು ಹಾಕಿದ್ದರು.

ಏತನ್ಮಧ್ಯೆ, ಚುನಾವಣಾ ಘೋಷಣೆಯೊಂದಿಗೆ ಸುರೇಶ್ ಮತ್ತು ಕುಮಾರಸ್ವಾಮಿ ನಡುವೆ ರಾಜಕೀಯ ಜಗಳ ಪ್ರಾರಂಭವಾಯಿತು, ಹಾಲಿ ಸಂಸದರು ಮತದಾರರಿಗೆ ಸೀರೆ ಮತ್ತು ಕುಕ್ಕರ್‌ಗಳನ್ನು ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದರು. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ರಾಮನಗರ ಡಿಸಿ ಮತ್ತು ಎಸ್ಪಿ ಅವರನ್ನು ವರ್ಗಾವಣೆ ಮಾಡುವಂತೆ ಕುಮಾರಸ್ವಾಮಿ ಒತ್ತಾಯಿಸಿದ್ದರು.

ಆರೋಪವನ್ನು ತಳ್ಳಿಹಾಕಿದ ಸುರೇಶ್, ವಶಪಡಿಸಿಕೊಂಡ ಸೀರೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ನಾವು (ಕಾಂಗ್ರೆಸ್) ಎಚ್‌ಡಿ ದೇವೇಗೌಡರನ್ನು ರಾಷ್ಟ್ರದ ಪ್ರಧಾನಿ ಮತ್ತು ಅವರ ಪುತ್ರ ಎಚ್‌ಡಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದೇವೆ. ಕಾಂಗ್ರೆಸ್ ಅವರನ್ನು ಪ್ರಧಾನಿಯನ್ನಾಗಿ ಮಾಡದಿದ್ದರೆ ಈ ದೇಶ ಅವರನ್ನು ನೆನಪಿಸಿಕೊಳ್ಳುತ್ತಿರಲಿಲ್ಲ ಮತ್ತು ಅವರು ರಾಜ್ಯದ ಇತರ ಸಿಎಂಗಳಂತೆ ಇರುತ್ತಿದ್ದರು ಎಂದು ಸುರೇಶ್ ಲೇವಡಿ ಮಾಡಿದರು.

ಹೃದಯ ಶಸ್ತ್ರಚಿಕಿತ್ಸೆಗಾಗಿ ಚೆನ್ನೈನಲ್ಲಿರುವ ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಬಿರುಸಿನ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ರಾಜಕೀಯದಲ್ಲಿ ಎದುರಾಳಿ ಎಷ್ಟು ಬಲಶಾಲಿಯೋ ಅಷ್ಟು ಚೆನ್ನಾಗಿ ಕೆಲಸ ಮಾಡಬಹುದು ಎಂದು ಸುರೇಶ್ ಹೇಳಿದರು. 2019ರಲ್ಲಿ ಮೋದಿ ಗೆದ್ದರೆ ದೇಶ ತೊರೆಯುವುದಾಗಿ ದೇವೇಗೌಡರು ಹೇಳಿದ್ದರು ಎಂದು ಟೀಕಿಸಿದ ಅವರು, ಮಾಧ್ಯಮಗಳು ಇದನ್ನೇ ಹೈಲೈಟ್ ಮಾಡಲು ಸೂಚಿಸಿದರು. "ನಾನು ಮಾಡಿದ ಕೆಲಸಕ್ಕೆ (ವೇತನ) ನನ್ನ ಕ್ಷೇತ್ರದ ಜನರ ಬಳಿ ಕೂಲಿ ಕೇಳುತ್ತಿದ್ದೇನೆ ಎಂದು ಸುರೇಶ್ ಹೇಳಿದರು.

SCROLL FOR NEXT