ಚನ್ನಪಟ್ಟಣ: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಾಗಿ ಇನ್ನೊಂದು ವಾರದಲ್ಲಿ ದಿನಾಂಕ ಘೋಷಣೆ ಆಗಲಿದೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಉಪಚುನಾವಣೆ ಹಿನ್ನೆಲೆಯಲ್ಲಿ ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು, ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬೇಕು. ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಬಿಜೆಪಿ ವರಿಷ್ಠರ ಜೊತೆ ಚರ್ಚೆ ಮಾಡಿ ಅಭ್ಯರ್ಥಿ ಯಾರಾಗಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾವು ಕಳೆದ ಎರಡು ಚುನಾವಣೆಯನ್ನ ನಿರಂತರವಾಗಿ ಈ ಕ್ಷೇತ್ರದಿಂದ ಗೆದ್ದಿದ್ದೇವೆ. ಈ ಕ್ಷೇತ್ರದ ಕಾರ್ಯಕರ್ತರ ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಾನು ಯಾವುದೇ ನಿರ್ಣಯ ಮಾಡುವುದಿಲ್ಲ. 2013ರಲ್ಲೂ ಕೇವಲ 3 ಸಾವಿರ ಮತಗಳಲ್ಲಿ ಸೋತಿದ್ದೇವೆ. 2018 ಹಾಗೂ 2023ರಲ್ಲಿ ನಿರಂತರವಾಗಿ ಗೆದ್ದಿದ್ದೇವೆ. ಮೊದಲಿನಿಂದಲೂ ಇದು ಜನತಾದಳದ ಭದ್ರಕೋಟೆ ಎಂದಿದ್ದಾರೆ.
ನಮ್ಮಲ್ಲಿನ ಕೆಲವೊಂದಷ್ಟು ತಿಕ್ಕಾಟಕ್ಕೆ ಸಂಘಟನೆ ಸ್ವಲ್ಪ ವೀಕ್ ಆಗಿದೆ. ಈಗ ಕಾರ್ಯಕರ್ತರು ಬಲಾಡ್ಯವಾಗಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅದರಿಂದ ಅವರ ವಿಶ್ವಾಸ ಇಲ್ಲದೇ ಏನು ತೀರ್ಮಾನ ಮಾಡಲ್ಲ. ಅವರ ಪಕ್ಷದಲ್ಲಿ ಅವರು ಏನೇ ಚರ್ಚೆ ಮಾಡಿಕೊಂಡರೂ ಅದು ಅವರ ಸಂಘಟನೆ ವಿಚಾರ. ಅದನ್ನ ತಪ್ಪು ಅಂತ ನಾವು ಹೇಳುವುದಿಲ್ಲ ಎಂದರು.
ಕೋವಿಡ್ ಹಗರಣ ತನಿಖೆಗೆ ಎಸ್ಐಟಿ ರಚನೆಯ ಭಜನೆ ಒಂದುವರೆ ವರ್ಷದಿಂದ ನಡೆಯುತ್ತಿದೆ. ಇವರುಗಳು ವಿರೋಧ ಪಕ್ಷದಲ್ಲಿ ಕೆಲಸ ಮಾಡುವಾಗ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದರು. ಪಿಎಸಿಎಲ್ ಚೇರ್ಮನ್ ಅವರ ಪಕ್ಷದವರೇ ಇದ್ದಾರೆ. ಇಲ್ಲಿಯವರೆಗೆ ಯಾವುದೇ ರೀತಿಯ ತನಿಖೆ ಮಾಡಿಲ್ಲ. ಈಗ ಏಕೆ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.