ಬೆಂಗಳೂರು: ಆದಾಯ ಸಂಗ್ರಹ ಹೆಚ್ಚಳಕ್ಕಾಗಿ ಸರ್ಕಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಗುರಿ ನೀಡುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಮದ್ಯದ ಚಟ ಹೆಚ್ಚಳವಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ವಾಗ್ದಾಳಿ ನಡೆಸಿದೆ.
ಕಾಂಗ್ರೆಸ್ನ ಮಹಾಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. 2024–25ರಲ್ಲಿ ಈ ಸಂಬಂಧ 17,390 ಪ್ರಕರಣಗಳನ್ನು ದಾಖಲಿಸಿ, 18,253 ಮಂದಿಯನ್ನು ಬಂಧಿಸಲಾಗಿದೆ. ಜಾಗೃತಿ ಮೂಡಿಸಲು ಗ್ರಾಮ ಸಭೆಗಳಿಗೆ ಸುತ್ತೋಲೆ ಹೊರಡಿಸುವುದಾಗಿ ಹೇಳಿದರು.
ಸಚಿವರ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ, ಜೆಡಿಎಸ್ ನಾಯಕರು, ಅಬಕಾರಿ ಇಲಾಖೆಯವರು ಪ್ರತಿ ಮದ್ಯದಂಗಡಿಗೂ ಮಾರಾಟದ ಗುರಿ ನಿಗದಿಪಡಿಸಿದೆ. ಗುರಿ ತಲುಪುವುದಕ್ಕಾಗಿ ಹಳ್ಳಿ, ಹಳ್ಳಿಗೂ ಬೈಕ್ಗಳಲ್ಲಿ ಮದ್ಯ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತಿದೆ’ ಎಂದು ಹೇಳಿದರು.
ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಅಬಕಾರಿ ಇಲಾಖೆ ಅಧಿಕಾರಿಗಳು, ಪೊಲೀಸರಿಗೆ ಗೊತ್ತಿಲ್ಲದೇ ಹಳ್ಳಿಗಳಲ್ಲಿ ಮದ್ಯ ಮಾರಾಟ ಆಗುವುದಿಲ್ಲ. ಮಾಮೂಲಿ ತೆಗೆದುಕೊಂಡು ಮದ್ಯದ ಅಕ್ರಮ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಾರೆ. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ಅಧಿಕೃತ ಪರವಾನಗಿ ಕೊಡಿ. ಸರ್ಕಾರಕ್ಕೂ ತೆರಿಗೆ ಬರುತ್ತದೆ ಎಂದು ಹೇಳಿದರು.
ಕಳಪೆ ಗುಣಮಟ್ಟದ ಮದ್ಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೊನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಆ ಕಾಲೋನಿಗಳಲ್ಲಿ 35ರಿಂದ 40 ವರ್ಷದೊಳಗಿನ ಯುವಕರೂ ಸಾಯುತ್ತಿದ್ದಾರೆಂದು ಹೇಳಿದರು.
ಆರಗ ಜ್ಞಾನೇಂದ್ರ ಅವರ ಮಾತಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ನ ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ ಅವರು, ‘ಪರಿಶಿಷ್ಟರು ಮಾತ್ರ ಮದ್ಯ ಸೇವಿಸುತ್ತಾರಾ? ನೀವು ಮದ್ಯ ಸೇವಿಸುವುದಿಲ್ಲವೆ? ಪ್ರಮಾಣ ಮಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರು. ಆಗ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎಷ್ಟು ಅಂಗಡಿಗಳನ್ನು ಬಂದ್ ಮಾಡಿಸಿದ್ದರು ಎಂಬುದನ್ನು ಹೇಳಲಿ’ ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಸ್ಪೀಕರ್ ಖಾದರ್ ಅವರು, ಅಕ್ರಮವಾಗಿ ಮದ್ಯ ಮಾರಾಟವಾಗುವ ಪಟ್ಟಿಯನ್ನು ತಯಾರಿಸಿ, ಅಬಕಾರಿ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು ಶಾಸಕರಿಗೆ ತಿಳಿಸಿದರು.