ದಾವಣಗೆರೆ: ಪ್ರದೇಶ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿರುವ ಬೆನ್ನಲ್ಲೇ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲಾ ವಿಭಾಗದ ಪದಾಧಿಕಾರಿಗಳು ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಸಿರಾಜ್, ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಕೆ. ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದರಿಂದ ಮನನೊಂದು ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಮಟ್ಟದ ಐವರು ರಾಜೀನಾಮೆ ನೀಡುತ್ತಿದ್ದೇವೆ ಎಂದಿದ್ದಾರೆ.
ಕೆಪಿಸಿಸಿ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಪಕ್ಷದ ಸಾಮಾನ್ಯ, ಶಿಸ್ತಿನ ಕಾರ್ಯಕರ್ತರಾಗಿ ಮುಂದುವರೆಯುತ್ತೇವೆ. ಪಕ್ಷದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರವನ್ನು ಇ-ಮೇಲ್ ಮೂಲಕ ಕಳಿಸಿ ಕೊಡುತ್ತೇವೆ ಎಂದು ತಿಳಿಸಿದರು.
ರಾಜ್ಯ ಉಪಾಧ್ಯಕ್ಷನಾದ ನನ್ನ ಜೊತೆಗೆ ಕಾರ್ಯದರ್ಶಿಗಳಾದ ಅಬ್ದುಲ್ ಘನಿ ತಾಹೀರ್, ಹುಸೇನ್ ಉಕ್ಕಡಗಾತ್ರಿ, ಉಬೇದುಲ್ಲ ಸಾಮಾಜಿಕವಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಮನುಷ್ಯ ಒಂದು ಚಹಾ ಕುಡಿದರೆ ಋಣ ಇಟ್ಟುಕೊಳ್ಳಬೇಕು. ಆದರೆ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರನ್ನು 3 ಬಾರಿ ಎಂಎಲ್ಸಿ ಮಾಡಿದ್ದು ನಾವು. ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಯಾರೂ ಕರೆ ಮಾಡಿಲ್ಲ. ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದು ಕೂಡ ನನಗೆ ಮಾಹಿತಿ ಇಲ್ಲ. ಶಾಮನೂರು ಕುಟುಂಬ ಬುದ್ಧಿವಂತರನ್ನು ಹತ್ತಿರ ಸೇರಿಸಲ್ಲ, ದಡ್ಡರನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ ಎಂದು ಜಬ್ಬಾರ್ ಹೇಳಿದ್ದಾರೆ. ಅವನೇನು ಬುದ್ಧಿವಂತನಾ? ನಾನು 1994ರಿಂದ ಚುನಾವಣೆ ಮಾಡಿದ್ದೇನೆ. ನನಗೆ ಇದು 16ನೇ ಚುನಾವಣೆ. ಸಚಿವ ಜಮೀರ್ ಬಂದು ನನಗೆ ಸಪೋರ್ಟ್ ಮಾಡಿದ್ದಾರೆ. ಆದರೆ ಎಸ್ಡಿಪಿಐಗೆ ಫಂಡಿಂಗ್ ಮಾಡಿದ್ದಾರೆ ಅಂತಾ ನನಗೆ ಅನ್ನಿಸಲ್ಲ. ನಮಗೆ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.