ಬೆಳಗಾವಿ: ಭಾರತದ ವಿವಿಧ ರಾಜಕೀಯ ಪಕ್ಷಗಳಲ್ಲಿ ವಂಶಪಾರಂಪರ್ಯ ಅಥವಾ ಕುಟುಂಬಾಧಾರಿತ ರಾಜಕೀಯವು ಕೇವಲ ಒಂದು ಅಪವಾದವಾಗಿ ಉಳಿದಿಲ್ಲ ಅದು ನಿಧಾನವಾಗಿ ಒಂದು ಸಾಮಾನ್ಯ ಪದ್ಧತಿಯಾಗಿ ರೂಪುಗೊಳ್ಳುತ್ತಿದೆ.
ಅನೇಕ ಸಂದರ್ಭಗಳಲ್ಲಿ, ರಾಜಕೀಯ ಅವಕಾಶವು ಕುಟುಂಬದ ಉತ್ತರಾಧಿಕಾರದ ಮೂಲಕ ನಿರ್ಧಾರವಾಗುತ್ತಿರುವಂತೆ ಕಾಣುತ್ತಿದೆ. ಕರ್ನಾಟಕ ಸಚಿವ ಸಂಪುಟದ ಇತ್ತೀಚಿನ ವಿಸ್ತರಣೆಯು ಮತ್ತೊಮ್ಮೆ ಕಾಂಗ್ರೆಸ್ ಪಕ್ಷವು ರಾಜಕೀಯ ಕುಟುಂಬಗಳ ಮೇಲಿನ ಅವಲಂಬನೆಯನ್ನು ಎತ್ತಿ ತೋರಿಸಿದೆ.
ಡಿ ಕೆ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿರುವ ಹಲವಾರು ಸಚಿವರು ಹಿರಿಯ ಕಾಂಗ್ರೆಸ್ ನಾಯಕರ ಪುತ್ರರಾಗಿದ್ದು, ಪಕ್ಷದ ನಾಯಕತ್ವ ರಚನೆಯಲ್ಲಿ ವಂಶ ರಾಜಕೀಯ ಪರಂಪರೆಯು ಮಹತ್ವದ ಪಾತ್ರ ವಹಿಸುತ್ತಿದೆ ಎಂಬ ಅಭಿಪ್ರಾಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.
ಶಿವಕುಮಾರ್ ಸಂಪುಟದಲ್ಲಿರುವ ಎರಡನೇ ತಲೆಮಾರಿನ ಪ್ರಮುಖ ನಾಯಕರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ಎನ್ ಧರಂ ಸಿಂಗ್ ಅವರ ಪುತ್ರ ಅಜಯ್ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ, ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಹಿರಿಯ ನಾಯಕ ದಿವಂಗತ ಸಿ. ಬೈರೇಗೌಡ ಅವರ ಪುತ್ರ ಕೃಷ್ಣ ಬೈರೇಗೌಡ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಎಸ್. ಆರ್ ಕಾಶಪ್ಪನವರ್ ಅವರ ಪುತ್ರ ವಿಜಯಾನಂದ ಕಾಶಪ್ಪನವರ್ ಸೇರಿದ್ದಾರೆ.
ಹಲವಾರು ಕಾಂಗ್ರೆಸ್ ನಾಯಕರು ಈ ಸಚಿವರು ತಮ್ಮ ಸ್ಥಾನಗಳನ್ನು ಕುಟುಂಬದ ಹಿನ್ನೆಲೆಗಿಂತ ಹೆಚ್ಚಾಗಿ ಚುನಾವಣಾ ಯಶಸ್ಸು, ಸಂಘಟನಾ ಕೆಲಸ ಮತ್ತು ಸಾರ್ವಜನಿಕರ ಬೆಂಬಲದ ಮೂಲಕ ಗಳಿಸಿದ್ದಾರೆ ಎಂದು ವಾದಿಸುತ್ತಾರೆ.
ಅವರಲ್ಲಿ ಹೆಚ್ಚಿನವರು ಚುನಾಯಿತ ಹುದ್ದೆಗಳನ್ನು ಅಲಂಕರಿಸಿರಬಹುದು ಮತ್ತು ತಮ್ಮದೇ ಆದ ರಾಜಕೀಯ ಗುರುತನ್ನು ನಿರ್ಮಿಸಿಕೊಂಡಿರಬಹುದು, ಆದರೂ, ಪ್ರಭಾವಿ ರಾಜಕೀಯ ಕುಟುಂಬಗಳಿಂದ ಬಂದ ನಾಯಕರ ಪುನರಾವರ್ತಿತ ಅವಕಾಶ ಪಕ್ಷವನ್ನು ನಿರ್ಮಿಸಲು ದಶಕಗಳಿಂದ ಕೆಲಸ ಮಾಡುತ್ತಿರುವ ತಳಮಟ್ಟದ ಕಾರ್ಯಕರ್ತರಿಗೆ ಅವಕಾಶಗಳನ್ನು ಮಿತಿಗೊಳಿಸುತ್ತದೆ ಎಂದು ವಿಮರ್ಶಕರು ವಾದಿಸುತ್ತಾರೆ.
ಇದರಿಂದ ಮಹತ್ವಾಕಾಂಕ್ಷಿ ನಾಯಕರನ್ನು ನಿರಾಶೆಗೊಳಿಸುತ್ತದೆ ಮತ್ತು ಕುಟುಂಬ ರಾಜಕೀಯ ಪ್ರಾಬಲ್ಯವೇ ಅರ್ಹತೆಗಿಂತ ಮುಖ್ಯ ಎಂಬ ನಂಬಿಕೆಯನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬೆರಳೆಣಿಕೆಯಷ್ಟು ಕುಟುಂಬಗಳ ಮೇಲೆ ಅತಿಯಾದ ಅವಲಂಬನೆಯು ಆಂತರಿಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಬಹುದು ಎಂದು ಹಲವಾರು ಕಾಂಗ್ರೆಸ್ಸಿಗರು ಭಾವಿಸುತ್ತಾರೆ. ರಾಜಕೀಯ ವಂಶಾವಳಿಯಿಲ್ಲದ ಪ್ರತಿಭಾನ್ವಿತ ಯುವ ನಾಯಕರು ಕಡಿಮೆ ಅವಕಾಶಗಳನ್ನು ಕಂಡುಕೊಂಡರೆ, ಪಕ್ಷವು ದೀರ್ಘಾವಧಿಯಲ್ಲಿ ತನ್ನ ನಾಯಕತ್ವದ ನೆಲೆಯನ್ನು ವಿಸ್ತರಿಸಲು ಹೆಣಗಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇಂತಹ ಪ್ರವೃತ್ತಿಯು ಕಾಂಗ್ರೆಸ್ ಪಕ್ಷವನ್ನು ಪ್ರತಿಸ್ಪರ್ಧಿಗಳಿಂದ, ವಿಶೇಷವಾಗಿ ಬಿಜೆಪಿ ಟೀಕೆಗೆ ಆಹಾರವಾಗಬಹುದು, ಕರ್ನಾಟಕ ಮುಂದಿನ ಚುನಾವಣಾ ಚಕ್ರದತ್ತ ಸಾಗುತ್ತಿರುವಾಗ, ಈ ಎರಡನೇ ತಲೆಮಾರಿನ ಮಂತ್ರಿಗಳ ಯಶಸ್ಸು ಅಥವಾ ವೈಫಲ್ಯವು ವಂಶ ವಾಹಿ ರಾಜಕೀಯವು ಆಸ್ತಿಯಾಗಿ ಉಳಿಯುತ್ತದೆಯೇ ಅಥವಾ ಹಳೆಯ ಪಕ್ಷಕ್ಕೆ ಹೊರೆಯಾಗುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.
ಪಕ್ಷವು ತಳಮಟ್ಟದ ಕಾರ್ಯಕರ್ತರನ್ನು ಬಲಿಕೊಟ್ಟು ರಾಜಕೀಯ ಉತ್ತರಾಧಿಕಾರಿಗಳಿಗೆ ಒಲವು ತೋರುತ್ತಿದೆ ಎಂದು ಕಂಡುಬಂದರೆ, ಅದು ದೀರ್ಘಾವಧಿಯ ಸಾಂಸ್ಥಿಕ ಸವಾಲುಗಳನ್ನು ಮತ್ತು ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.