ಬೆಂಗಳೂರು: ಸಾಕಷ್ಟು ರಾಜಕೀಯ ಬೆಳವಣಿಗಳ ಬಳಿಕ ಕೊನೆಗೂ ಕರ್ನಾಟಕ ವಿಧಾನ ಪರಿಷತ್ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರ ಸುದೀರ್ಘ ಮನವೊಲಿಕೆ ಬಳಿಕ ಅವರು ಹುದ್ದೆ ತೊರೆದಿದ್ದು, ಸ್ವಇಚ್ಛೆಯಿಂದ ರಾಜೀನಾಮೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಹೊರಟ್ಟಿಯವರ ರಾಜೀನಾಮೆಯನ್ನು ಕ್ಷಣದಲ್ಲಿಯೇ ಅಂಗೀಕರಿಸಲಾಗಿದ್ದು ನೂತನ ಸಭಾಪತಿಗಳನ್ನು ಆಯ್ಕೆ ಮಾಡುವವರೆಗೆ ಅವರೇ ಹಂಗಾಮಿ ಸಭಾಪತಿಯಾಗಿ ಮುಂದುವರಿಯಬೇಕೆಂದು ಮನವಿ ಮಾಡಿಕೊಳ್ಳುವುದಾಗಿ ಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಅತ್ಯಂತ ಘನತೆಯಿಂದ ನಿಭಾಯಿಸಿಕೊಂಡು ಬಂದಿದ್ದಾರೆ. ಆ ಹುದ್ದೆಗೆ ಅವರು ನೀಡಿದಷ್ಟು ಗೌರವವನ್ನು ಬೇರೆ ಯಾರೂ ನೀಡಿಲ್ಲ. ಹಾಗಾಗಿ, ನಾವು ಸಹ ಅವರಿಗೆ ಅಷ್ಟೇ ಆದರದಿಂದ ಬೀಳ್ಕೊಡುಗೆ ನೀಡಲಿದ್ದೇವೆ. ಎಲ್ಲಾ ಪರಿಷತ್ ಸದಸ್ಯರಿಗೂ ಕೃತಜ್ಞತೆ ಸಲ್ಲಿಸಿ, ಸೌಹಾರ್ದಯುತವಾಗಿ ರಾಜೀನಾಮೆ ನೀಡುವುದು ಅವರ ಆಸೆಯಾಗಿದೆ. ಅವರ ಈ ಭಾವನೆಯನ್ನು ನಾವು ಸಂಪೂರ್ಣ ಗೌರವಿಸುತ್ತೇವೆ ಎಂದು ಹೇಳಿದ್ದಾರೆ.
ಆಗಸ್ಟ್ 14ರಂದು ಬೆಳಗ್ಗೆ ಉಪ ಸಭಾಪತಿಗಳ ಆಯ್ಕೆ ಹಾಗೂ ಸಾಯಂಕಾಲ ವಿಧಾನಪರಿಷತ್ ಸಭಾಪತಿಗಳ ಆಯ್ಕೆ ನಡೆಯಲಿದೆ ಎಂದರು.