ಬೆಂಗಳೂರು: ವಿಧಾನ ಪರಿಷತ್ ಸದಸ್ಯೆ (MLC) ಗಾಯತ್ರಿ ಶಾಂತೇಗೌಡ ಅವರು ಇಂದು ಶುಕ್ರವಾರ ಮಧ್ಯಾಹ್ನ 12.30ಕ್ಕೆ ವಿಧಾನ ಪರಿಷತ್ ಸಭಾಪತಿ ಕಚೇರಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಮಾಣವಚನ ಸ್ವೀಕಾರದ ಬಳಿಕ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ, ಗಾಯತ್ರಿ ಶಾಂತೇಗೌಡ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸುವ ಕುರಿತು ಕಾಂಗ್ರೆಸ್ನ ಹಿರಿಯ ನಾಯಕರು ಇಂದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಪ್ರಸ್ತುತ ಬೀದರ್ ಪ್ರವಾಸದಲ್ಲಿರುವ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ನಿರೀಕ್ಷೆಯಿದೆ. ಬಳಿಕ ಅವರು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೂ ಮಾತುಕತೆ ನಡೆಸಲಿದ್ದಾರೆ.
ಈ ಬೆಳವಣಿಗೆ ಕುರುಬ ಸಮುದಾಯದಲ್ಲಿ ಮೂಡಿರುವ ಅಸಮಾಧಾನದ ನಡುವೆಯೇ ನಡೆದಿದೆ. ಸಚಿವ ಸಂಪುಟ ವಿಸ್ತರಣೆಯ ವೇಳೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಸಮುದಾಯದ ಕೆಲ ಪ್ರಭಾವಿ ನಾಯಕರು ಅವರ ಸೇರ್ಪಡೆಗೆ ಅಡ್ಡಿಪಡಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು.
ಇದರಿಂದ ಕುರುಬ ಸಮುದಾಯದ ಹಲವು ಸಂಘಟನೆಗಳು, ವಿಶೇಷವಾಗಿ ಹಾಲುಮತ ಒಳಪಂಗಡಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಹಲವರು, ಪ್ರಭಾವಿ ಹಿತಾಸಕ್ತಿಗಳು ಅವರ ಸಚಿವ ಸಂಪುಟ ಸೇರ್ಪಡೆಗೆ ಅಡ್ಡಿಯಾಗಿವೆ ಎಂದು ಆರೋಪಿಸಿದ್ದು, ಹಿಂದುಳಿದ ವರ್ಗದ ಮಹಿಳೆಗೆ ಸಚಿವ ಸ್ಥಾನ ನಿರಾಕರಿಸಿರುವುದರ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗಿತ್ತು.
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ಪ್ರೆಸ್(The New Indian Express) ಪತ್ರಿಕೆ ಪ್ರತಿನಿಧಿ ಜೊತೆ ಮಾತನಾಡಿದ ಗಾಯತ್ರಿ ಶಾಂತೇಗೌಡ, ನಾನು ಸಿದ್ದರಾಮಯ್ಯ ಸರ್ ಅವರನ್ನು ಭೇಟಿಯಾಗಿದ್ದೆ. ಎಂಎಲ್ಸಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದೀರಾ ಎಂದು ಅವರು ಕೇಳಿದರು. ನಾಳೆ ಪ್ರಮಾಣವಚನ ಇರುವುದರಿಂದ ಅದರ ಬಳಿಕ ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದರು.
ಸಚಿವ ಸ್ಥಾನ ಕುರಿತ ಪ್ರಕ್ರಿಯೆ ಮುಕ್ತಾಯಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಸಂಬಂಧಿಸಿದ ಸಚಿವ ಸ್ಥಾನಕ್ಕೆ ಇದುವರೆಗೆ ಯಾರನ್ನೂ ನೇಮಕ ಮಾಡದಿರುವುದರಿಂದ, ಗಾಯತ್ರಿ ಶಾಂತೇಗೌಡ ಅವರಿಗೆ ಇನ್ನೂ ಅವಕಾಶ ಉಳಿದಿದೆ ಎಂದು ಹೇಳಲಾಗಿದೆ.
ಪಕ್ಷದ ವರಿಷ್ಠರಿಂದ ಅಂತಿಮ ಅನುಮೋದನೆ ದೊರೆತರೆ, ಅವರು ಒಂದು ಅಥವಾ ಎರಡು ದಿನಗಳಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಇದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ 34 ಸದಸ್ಯರ ಸಚಿವ ಸಂಪುಟವು, ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸುಮಾರು ಎರಡು ತಿಂಗಳ ಬಳಿಕ ಪೂರ್ಣಗೊಳ್ಳಲಿದೆ.
ಗಾಯತ್ರಿ ಅವರ ಬೆಂಬಲಿಗರೊಬ್ಬರು, ಪಕ್ಷವು ಅವರಿಗೆ ಖಂಡಿತ ಸಚಿವ ಸ್ಥಾನ ನೀಡುತ್ತದೆ ಎಂಬ ವಿಶ್ವಾಸವಿದೆ. ಇಷ್ಟೊಂದು ವಿಳಂಬವಾಗಿರುವುದು ನ್ಯಾಯಸಮ್ಮತವಲ್ಲ ಎಂದು ಹೇಳಿದರು.