ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಅವರು ಭಾನುವಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆಯನ್ನು ಅಸಾಂವಿಧಾನಿಕ ರೀತಿಯಲ್ಲಿ ಹಾಗೂ ರಾಜಕೀಯ ಒತ್ತಡದ ಮೂಲಕ ಪಡೆಯಲಾಗಿದೆ ಎಂದು ಅವರು ಆರೋಪಿಸಿದರು.
ಕರ್ನಾಟಕದಲ್ಲಿ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಸಾಂವಿಧಾನಿಕ ನಿಯಮಗಳನ್ನು ದುರ್ಬಲಗೊಳಿಸಲಾಗಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್ ಮತ್ತು ಎಸ್. ರವಿ ಅವರು ಹೊರಟ್ಟಿ ಅವರ ಮೇಲೆ ರಾಜೀನಾಮೆ ನೀಡುವಂತೆ ಅನಗತ್ಯ ಒತ್ತಡ ಹೇರಿದ್ದಾರೆ ಎಂದು ದೂರಿದರು. ಈ ಘಟನೆ ವಿಧಾನಮಂಡಲದ ಘನತೆ ಮತ್ತು ಸಂವಿಧಾನದ ಪಾವಿತ್ರ್ಯದ ಮೇಲಿನ ಗಂಭೀರ ದಾಳಿ ಎಂದು ಬಣ್ಣಿಸಿದರು.ಛಲವಾದಿ ನಾರಾಯಣಸ್ವಾಮಿ, ಶರವಣ ನೇತೃತ್ವದಲ್ಲಿ ಲೋಕಭವನಕ್ಕೆ ತೆರಳಿದ ಬಿಜೆಪಿ-ಜೆಡಿಎಸ್ ನಿಯೋಗ, ಹೊರಟ್ಟಿ ಅವರ ರಾಜೀನಾಮೆ ಅಂಗೀಕರಿಸದಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಿದೆ.
ಛಲವಾದಿ ನಾರಾಯಣಸ್ವಾಮಿ ಎತ್ತಿದ ಪ್ರಮುಖ ಆರೋಪಗಳು
ಸಭಾಪತಿ ಮೇಲೆ ರಾಜಕೀಯ ಒತ್ತಡ: ಬಸವರಾಜ ಹೊರಟ್ಟಿ ಅವರು ಆಗಸ್ಟ್ 14ರಂದು ರಾಜೀನಾಮೆ ನೀಡಲು ನಿರ್ಧರಿಸಿದ್ದರು. ಆದರೆ ಆಡಳಿತ ಪಕ್ಷದ ನಾಯಕರು ಅವರ ಕಚೇರಿಗೆ ತೆರಳಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಒತ್ತಡ ಹೇರಿ ರಾಜೀನಾಮೆ ಸಲ್ಲಿಸುವಂತೆ ಮಾಡಿದರು ಎಂದು ನಾರಾಯಣಸ್ವಾಮಿ ಆರೋಪಿಸಿದರು.
ಬೆದರಿಕೆ ಹಾಗೂ ಅಧಿಕಾರ ದುರುಪಯೋಗದ ಆರೋಪ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹಚರರು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡು, ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ತಕ್ಕುದಲ್ಲದ ರೀತಿಯಲ್ಲಿ ವಿಧಾನ ಪರಿಷತ್ ಸಭಾಪತಿ ಮೇಲೆ ಒತ್ತಡ ಹೇರಿದ್ದಾರೆ ಎಂದು ಅವರು ದೂರಿದರು.
ಅಧಿಕೃತ ಲೆಟರ್ಹೆಡ್ ದುರುಪಯೋಗದ ಆರೋಪ: ಸಭಾಪತಿಯ ವೈಯಕ್ತಿಕ ಕಾರ್ಯದರ್ಶಿಗೆ ಅಧಿಕೃತ ಲೆಟರ್ಹೆಡ್ ನೀಡುವಂತೆ ಸೂಚಿಸಲಾಗಿತ್ತು. ಅದನ್ನು ರಾಜೀನಾಮೆ ಪತ್ರ ಸಿದ್ಧಪಡಿಸಲು ಬಳಸಲಾಗಿದೆ ಎಂದು ನಾರಾಯಣಸ್ವಾಮಿ ಆರೋಪಿಸಿದರು.
ಒತ್ತಡದಿಂದ ರಾಜೀನಾಮೆ ಪತ್ರಕ್ಕೆ ಸಹಿ: ಆಡಳಿತ ಪಕ್ಷದ ನಾಯಕರು ಅಧಿಕೃತ ಲೆಟರ್ಹೆಡ್ನಲ್ಲಿ ರಾಜೀನಾಮೆ ಪತ್ರ ಸಿದ್ಧಪಡಿಸಿ, ಒತ್ತಡ ಹೇರಿ ಹೊರಟ್ಟಿ ಅವರ ಸಹಿ ಪಡೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ವಿಧಾನಮಂಡಲದ ಸ್ವಾಯತ್ತತೆಗೆ ಧಕ್ಕೆ: ಈ ಘಟನೆಯನ್ನು ಸಾಂವಿಧಾನಿಕ ಆಡಳಿತದ ಪಾಲಿಗೆ “ಕರಾಳ ದಿನ” ಎಂದು ಬಣ್ಣಿಸಿದ ನಾರಾಯಣಸ್ವಾಮಿ, ಇದು ವಿಧಾನ ಪರಿಷತ್ತಿನ ಸ್ವಾತಂತ್ರ್ಯ ಮತ್ತು ಘನತೆಗೆ ಹಸ್ತಕ್ಷೇಪವಾಗಿದೆ ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಸಲ್ಲಿಸಿದ ಪ್ರಮುಖ ಬೇಡಿಕೆಗಳು
ಅಸಾಂವಿಧಾನಿಕ ರೀತಿಯಲ್ಲಿ ಪಡೆಯಲಾಗಿದೆ ಎಂದು ಆರೋಪಿಸಲಾದ ಬಸವರಾಜ ಹೊರಟ್ಟಿ ಅವರ ರಾಜೀನಾಮೆಯನ್ನು ರಾಜ್ಯಪಾಲರು ತಿರಸ್ಕರಿಸಬೇಕು.
ವಿಧಾನ ಪರಿಷತ್ ಸಭಾಪತಿ ಮೇಲೆ ಒತ್ತಡ ಹೇರಿದ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿ.ಕೆ. ಹರಿಪ್ರಸಾದ್, ಸಲೀಂ ಅಹ್ಮದ್, ಎಸ್. ರವಿ ಸೇರಿದಂತೆ ಇತರರ ವಿರುದ್ಧ ಸಾಂವಿಧಾನಿಕ ಹಾಗೂ ಕಾನೂನುಬದ್ಧ ತನಿಖೆ ಆರಂಭಿಸಬೇಕು.
ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸಿದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
ಕರ್ನಾಟಕದಲ್ಲಿ ಕಾನೂನು ಆಳ್ವಿಕೆಯನ್ನು ಎತ್ತಿಹಿಡಿಯಲು ಹಾಗೂ ವಿಧಾನಮಂಡಲದ ಸಂಸ್ಥೆಗಳ ಸ್ವಾಯತ್ತತೆಯನ್ನು ರಕ್ಷಿಸಲು ರಾಜ್ಯಪಾಲರು ಮಧ್ಯಪ್ರವೇಶಿಸಬೇಕು.
ರಾಜ್ಯಪಾಲರಿಗೆ ಹಂಗಾಮಿ ಸಭಾಪತಿ ಹೊರಟ್ಟಿ ಪತ್ರ
ಆಗಸ್ಟ್ 7 ರಂದು ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಬಿ.ಕೆ.ಹರಿಪ್ರಸಾದ್ ನೇತೃತ್ವದಲ್ಲಿ ತಮ್ಮ ಕೊಠಡಿಗೆ ಬಂದಿದ್ದ ನಾಯಕರು, ಇವತ್ತೇ ರಾಜೀನಾಮೆ ಕೊಡಬೇಕೆಂದು ಒತ್ತಡ ಹಾಕಿ ರಾಜೀನಾಮೆ ಪಡೆದರು ಎಂದು ರಾಜ್ಯಪಾಲರಿಗೆ ಪತ್ರ ಬರೆದು ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.