ಬೆಂಗಳೂರು: ಪರಮೇಶ್ವರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಿದ್ದು ಯಾರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗಾಂಧಿ ಭವನದಲ್ಲಿ ನಡೆದ ‘ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಕಾರ್ಯಕ್ರಮದಲ್ಲಿ ಸಭಿಕರೊಬ್ಬರು ದಲಿತ ಸಿಎಂ ವಿಚಾರವನ್ನು ಪ್ರಸ್ತಾಪಿಸಿದರು. ಇದರಿಂದ ಕೊಂಚ ಭಾವೋದ್ವೇಗಕ್ಕೊಳಗಾದ ಸಿದ್ದರಾಮಯ್ಯ, ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ಯಾರು? ಆರಂಭದಲ್ಲಿ ನಾಲ್ಕೈದು ಜನರನ್ನು ಡಿಸಿಎಂ ಮಾಡುವ ಯೋಜನೆಯಿತ್ತು. ಆದರೆ, ಒಬ್ಬರಿಗಷ್ಟೇ ಡಿಸಿಎಂ ಹುದ್ದೆ ನೀಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿ ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿಸಿದ್ದು ನಾನೇ ಎಂದು ನೇರವಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಾರ್ಯಕ್ರಮಕ್ಕೆ ಇಬ್ಬರು ಮಂತ್ರಿಗಳನ್ನು ಆಹ್ವಾನಿಸಿದ್ದೆ, ಅವರಿಬ್ಬರು ಬಂದಿಲ್ಲ ಎಂದು ಕೊಂಚ ಗರಂ ಆದರು. ಇನ್ನೂ ಕೆ.ಎಚ್ ಮುನಿಯಪ್ಪ ಅವರ ಬಳಿ ಸಮಾಜ ಕಲ್ಯಾಣ ಖಾತೆಯಿದೆ, ಆದರೆ ಅದನ್ನು ಅವರು ಹೋರಾಟ ಮಾಡಿ ತೆಗೆದುಕೊಂಡಿದ್ದಾರೆ. ಅವರಿಗೆಲ್ಲಾ ಶಕ್ತಿ ತುಂಬುವ ಕೆಲಸ ಮಾಡಬೇಕು. ಯಾರಿಗೂ ಅನ್ಯಾಯ ಆಗಬಾರದು. ಎಲ್ಲರಿಗೂ ನ್ಯಾಯ ಸಿಗಬೇಕು ಎಂದರು.
ನೀವು ಪಾರ್ಲಿಮೆಂಟ್ ನಲ್ಲಿ ಮಾತನಾಡಬೇಕು, ಮುುಂದಿನ ಪ್ರಧಾನಿಯಾಗಬೇಕು ಎಂದು ಅಭಿಮಾನಿಯೊಬ್ಬರು ಹೇಳಿದ ಮಾತಿಗೆ ಉತ್ತರಿಸಿದ ಸಿದ್ದರಾಮಯ್ಯ ನಾನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ, ಆದರೆ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದರು.