ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬುಲಾವ್ ಹಿನ್ನೆಲೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ದಿಢೀರ್ ಹರಿಯಾಣಗೆ ತೆರಳಿ ಸಮಾಲೋಚನೆ ನಡೆಸಿದ್ದು, ಈ ಮಾತುಕತೆ ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಹುಬ್ಬಳ್ಳಿಯಲ್ಲಿದ್ದ ಜಮೀರ್ ಅವರು ಸುರ್ಜೇವಾಲಾ ಕರೆ ಬಂದ ಕೂಡಲೇ ಅಲ್ಲಿಂದಲೇ ಶನಿವಾರ ಸಂಜೆಯೇ ದೆಹಲಿಗೆ ತೆರಳಿದರು ಎಂದು ಹೇಳಲಾಗುತ್ತಿದೆ.
ಭಾನುವಾರ ಮುಂಜಾನೆ ದೆಹಲಿಯಿಂದ ಹರಿಯಾಣಕ್ಕೆ ತೆರಳಿ ಕೈತಾಲ್ ನಲ್ಲಿದ್ದ ಸುರ್ಜೇವಾಲಾ ಅವರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆನ್ನಲಾಗಿದ್ದು, ಈ ಮಾತುಕತೆ ಕುತೂಹಲವನ್ನು ಹುಟ್ಟುಹಾಕಿಸಿದೆ.
ಸುರ್ಜೇವಾಲಾ ಭೇಟಿ ನಂತರ ಜಮೀರ್ ಅಹ್ಮದ್ ಖಾನ್ ಅವರು ಮತ್ತೆ ದೆಹಲಿ ಮಾರ್ಗವಾಗಿ ಹುಬ್ಬಳ್ಳಿಗೆ ವಾಪಸ್ಸಾಗಿದ್ದಾರೆ.
ಈ ನಡುವೆ ಭೇಟಿ ವೇಳೆ ಜಮೀರ್ ಅವರು, ಜನವರಿ 24ರಂದು ಹುಬ್ಬಳ್ಳಿಯಲ್ಲಿ ನಡೆಯುವ ವಸತಿ ಇಲಾಖೆಯ ಮನೆ ಹಂಚಿಕೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆಂದು ತಿಳಿದುಬಂದಿದೆ.