ಮಂಡ್ಯ: ಕುಮಾರಣ್ಣ ಕೇಂದ್ರ ಸಚಿವರಾಗಿದ್ದು ಸಾಕು, ರಾಜೀನಾಮೆ ಕೊಟ್ಟು ರಾಜ್ಯಕ್ಕೆ ಬನ್ನಿ. ರಾಜ್ಯಕ್ಕೆ ನೀವು ಬಂದ್ರೆ ಮಾತ್ರ ರೈತರು, ಬಡವರು, ಜನಸಾಮಾನ್ಯರು ಉಳಿಯೋದಕ್ಕೆ ಸಾಧ್ಯ. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಕ್ಕೆ ಬನ್ನಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಆಹ್ವಾನ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಪರಿಸ್ಥಿತಿ ಕೆಟ್ಟಿದೆ. ಜನಪ್ರತಿನಿಧಿಗಳು ಎಲ್ಲಿದ್ದಾರೆ? ಶ್ರೀರಂಗಪಟ್ಟಣ ಕ್ಷೇತ್ರದ ಪರಿಸ್ಥಿತಿ ಅದ್ವಾನವಾಗಿದೆ. ಸರ್ಕಾರಕ್ಕೆ ಕಣ್ಣು ಕಾಣ್ತಿಲ್ಲ. ಕನ್ನಂಬಾಡಿ ಕಟ್ಟೆಯಲ್ಲಿ ನೀರಿದ್ದರೂ ರೈತರಿಗೆ ಅನ್ಯಾಯ ಮಾಡ್ತಿದೆ. ಸಾಲ ಮನ್ನ ಎಷ್ಟು ಮಾಡ್ತಿರಿ? ರೈತರ ಬಗ್ಗೆ, ವ್ಯವಸಾಯದ ಬಗ್ಗೆ ಜ್ಞಾನ ಇಲ್ಲ.
ಕೃಷಿ ಸಚಿವ ಅಂತ ಹೆಸರು ಪಡೆದು ಚಲುವರಾಯಸ್ವಾಮಿ ಏನು ನೋಡ್ತಿಲ್ಲ. ಕೃಷಿ ವಿವಿಯನ್ನ ಮಂಡ್ಯ ರೈತರು ಉಪ್ಪಿನಕಾಯಿ ಹಾಕಿ ನೆಕ್ಕಬೇಕಾ? ಯಾವ ಕ್ಷೇತ್ರಕ್ಕೆ ಭೇಟಿ ಕೊಟ್ಟು ರೈತರ ಪರಿಸ್ಥಿತಿ ನೋಡಿದ್ದಿರಾ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮುಖ್ಯಮಂತ್ರಿಯವರು ₹25 ಸಾವಿರ ಅಥವಾ ₹50 ಸಾವಿರ ಸಾಲ ಮನ್ನಾ ಮಾಡಿದರೆ ರೈತರಿಗೆ ಸಾಲುವುದಿಲ್ಲ. ಬೆಳೆದಿರುವ ಬೆಳೆಗೆ ಮೊದಲು ನೀರು ಕೊಡಿ. ಕೃಷಿ ಸಚಿವರಾಗಿ ಕೆಲಸ ಮಾಡಿರುವ ಎನ್.ಚಲುವರಾಯಸ್ವಾಮಿ ಅವರು ಹಳ್ಳಿ– ಹಳ್ಳಿಯಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಬೇಕಲ್ಲವೆ? ಎಂದು ಪ್ರಶ್ನಿಸಿದರು.
ಜೂನ್ ತಿಂಗಳಲ್ಲಿ ಎಂಜಿನಿಯರ್ ಅವರು ಕಾಲಹರಣ ಮಾಡಿ, ಜುಲೈ 1ರಿಂದ ಅಣೆಕಟ್ಟೆ ಬಳಿ ಕಾಮಗಾರಿ ನಡೆಸುತ್ತಿದ್ದಾರೆ. ನೀರು ಬಿಡುವ ಸಮಯದಲ್ಲಿ ಕಾಮಗಾರಿ ನೆಪ ಹೇಳುವುದು ಸರಿಯೇ? ಸರ್ಕಾರಕ್ಕೆ ರೈತರಿಗಿಂತ ಗುತ್ತಿಗೆದಾರರ ಹಿತವೇ ಮುಖ್ಯವಾಗಿದೆ ಎಂದು ದೂರಿದರು.
ಅಧಿಕಾರಿಗಳು ಗುತ್ತಿಗೆದಾರರ ಜೊತೆ ಬೇಳೆ ಬೇಯಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ನಮ್ಮ ಶಾಸಕರು ಮೈಸೂರಿನ ಹೋಟೆಲ್ನಲ್ಲಿ ರಿಯಲ್ ಎಸ್ಟೇಟ್ ಕೆಲಸದಲ್ಲಿ ಮಗ್ನರಾಗಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಒಂದು ಶಾಸಕರ ಕಚೇರಿ ಇಲ್ಲ. ಅದೆಲ್ಲೋ ಹೊಳೆ ಪಕ್ಕದಲ್ಲಿ ಕಚೇರಿ ಮಾಡಿ ವರ್ಷದಿಂದ ಬೀಗ ಹಾಕಲಾಗಿದೆ ಎಂದು ಆರೋಪಿಸಿದರು.