ಬೆಳಗಾವಿ: ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಹೆಚ್ಚುತ್ತಿರುವ ಒತ್ತಡ ಮತ್ತು ಪ್ರಾದೇಶಿಕ ಪೈಪೋಟಿಯಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಸೂಕ್ಷ್ಮವಾದ ಸಮತೋಲನ ಕಾಯ್ದುಕೊಳ್ಳುವ ಕಾರ್ಯಕ್ಕೆ ಇಳಿದಿದೆ, ಇದು ಬಹುನಿರೀಕ್ಷಿತ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯನ್ನು ಮತ್ತಷ್ಟು ವಿಳಂಬಗೊಳಿಸಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಆದಷ್ಟು ಬೇಗ ಸಂಪುಟ ವಿಸ್ತರಣೆ ಪೂರ್ಣಗೊಳಿಸಲು ಒಲವು ತೋರುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿಯು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸಿದೆ.
ಹೊಸ ಸಂಪುಟರಚನೆ ಮಾಡುವ ಮೊದಲು ವಿಶಾಲವಾದ ಒಮ್ಮತವನ್ನು ರೂಪಿಸಲು ನಾಯಕತ್ವವು ಉತ್ಸುಕವಾಗಿದೆ ಎಂದು ಕಾಂಗ್ರೆಸ್ ಒಳಗಿನವರು ಹೇಳಿದ್ದಾರೆ. ಸಂಪುಟ ರಚನೆಯನ್ನು ಅಂತಿಮಗೊಳಿಸಲು ಹೈಕಮಾಂಡ್ ಕನಿಷ್ಠ ಒಂದು ವಾರ ತೆಗೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಪ್ರಾದೇಶಿಕ ಪ್ರಾತಿನಿಧ್ಯ, ಜಾತಿ ಸಮೀಕರಣಗಳು, ರಾಜಕೀಯ ಸಮತೋಲನ ಮತ್ತು ಅನುಭವಿ ಶಾಸಕರಿಗೆ ಅವಕಾಶ ಕಲ್ಪಿಸುವ ಕುರಿತು ಪಕ್ಷದ ಹಿರಿಯ ನಾಯಕರೊಂದಿಗೆ ವ್ಯಾಪಕವಾದ ಸಮಾಲೋಚನೆಗಳು ವಿಳಂಬಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಮುಂದಿನ ನಿರ್ಧಾರ ತೆಗೆದುಕೊಳ್ಳುನ ಮೊದಲು ಖರ್ಗೆ ನವದೆಹಲಿಗೆ ಬರುವುದನ್ನು ಕಾಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
"ಮಲ್ಲಿಕಾರ್ಜುನ ಖರ್ಗೆ ಅವರು ಸಂಪುಟ ವಿಸ್ತರಣೆಯ ಬಗ್ಗೆ ನಿರ್ಧರಿಸುವವರೆಗೆ ನಾವೆಲ್ಲರೂ ಕಾಯುತ್ತಿದ್ದೇವೆ. ಈ ಪ್ರಕ್ರಿಯೆಯು ಹೆಚ್ಚು ಸಮಯ ವಿಳಂಬವಾಗದಿರಬಹುದು, ಆದರೆ ಕನಿಷ್ಠ ಇನ್ನೊಂದು ವಾರ ಬೇಕಾಗುತ್ತದೆ" ಎಂದು ಅವರು ಹೇಳಿದರು, ಅಂತಿಮ ನಿರ್ಧಾರಕ್ಕೆ ಬರುವ ಮೊದಲು ನಾಯಕತ್ವವು ಹಲವಾರು ಸುತ್ತಿನ ಚರ್ಚೆಗಳನ್ನು ನಡೆಸಲಿದೆ ಎಂದು ಹೇಳಿದರು.
ಹರಿಪ್ರಸಾದ್ ಎಷ್ಟು ಶಾಸಕರನ್ನು ಸೇರಿಸಿಕೊಳ್ಳಲಾಗುವುದು ಎಂಬುದನ್ನು ತಿಳಿಸಲು ನಿರಾಕರಿಸಿದರೂ, ಸುಮಾರು 30 ಕಾಂಗ್ರೆಸ್ ಶಾಸಕರು ನವದೆಹಲಿಯಲ್ಲಿ ಬೀಡುಬಿಟ್ಟು ಸಚಿವ ಸ್ಥಾನಗಳಿಗಾಗಿ ಆಕ್ರಮಣಕಾರಿ ಲಾಬಿ ನಡೆಸುತ್ತಿರುವುದರಿಂದ ವಿಸ್ತರಣೆ ಕಸರತ್ತು ಹೆಚ್ಚು ಜಟಿಲವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಶಾಸಕರುಗಳ ಆತುರ ನಾಯಕತ್ವದ ಮೇಲೆ ಒತ್ತಡವನ್ನು ಹೆಚ್ಚಿಸಿದೆ, ಶಾಸಕರು ಹಿರಿಯ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಒತ್ತಾಯ ಮಾಡುತ್ತಿದ್ದಾರೆ.
ಸಂಪುಟ ವಿಸ್ತರಣೆಗೆ ಹೊಸ ಮುಖಗಳನ್ನು ಸೇರಿಸಿಕೊಳ್ಳುವುದು ಮಾತ್ರವಲ್ಲದೆ, ಹೊರಗುಳಿದ ಹಿರಿಯ ನಾಯಕರಿಗೆ ದಾರಿ ಮಾಡಿಕೊಡಲು ಕೆಲವು ಸಚಿವರನ್ನು ಕೈಬಿಡುವ ಸಾಧ್ಯತೆಯಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಹಲವಾರು ಹೆಸರುಗಳು ಚರ್ಚೆಯಲ್ಲಿವೆ, ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರ ಮುಂದುವರಿಕೆ ಬಗ್ಗೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ನಡುವೆ ಅವರ ರಾಜಕೀಯ ಭವಿಷ್ಯ ಅನಿಶ್ಚಿತವಾಗಿದೆ ಎಂದು ವರದಿಯಾಗಿದೆ.
ವಿಶಾಲ ಸಾಮಾಜಿಕ ಮತ್ತು ಪ್ರಾದೇಶಿಕ ಸಮೀಕರಣಕ್ಕಾಗಿ ಬೆಳಗಾವಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಕಲಬುರಗಿ ಶಾಸಕಿ ಕನೀಜ್ ಫಾತಿಮಾ ಅಥವಾ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರನ್ನು ಸೇರಿಸಿಕೊಳ್ಳಬೇಕೆ ಎಂಬುದರ ಬಗ್ಗೆ ನಾಯಕರು ಚರ್ಚಿಸುತ್ತಿದ್ದಾರೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಿದ್ದರಾಮಯ್ಯ ಸೂಚಿಸಿದ ಹೆಸರುಗಳ ಪಟ್ಟಿಯ ಬಗ್ಗೆಯೂ ಹೈಕಮಾಂಡ್ ಚರ್ಚಿಸುವ ನಿರೀಕ್ಷೆಯಿದೆ.
ಶಿವಕುಮಾರ್ ಪೂರ್ಣ ಪ್ರಮಾಣದ ಸಚಿವ ಸಂಪುಟವನ್ನು ಬೆಂಬಲಿಸುತ್ತಾರೆಂದು ನಂಬಲಾಗಿದ್ದರೂ, ಭವಿಷ್ಯದ ರಾಜಕೀಯ ಹೊಂದಾಣಿಕೆಗಳು ಮತ್ತು ಮುಂಬರುವ ಚುನಾವಣೆಗಳಿಗಾಗಿ ಕಾಂಗ್ರೆಸ್ ನಾಯಕತ್ವವು ಎರಡು ಅಥವಾ ಮೂರು ಸ್ಥಾನಗಳನ್ನು ಖಾಲಿ ಇಡಲು ಒಲವು ತೋರುತ್ತಿದೆ ಎಂದು ವರದಿಯಾಗಿದೆ. ತೀವ್ರ ಲಾಬಿಯ ನಡುವೆ, ಹೆಚ್ಚಿನ ಪ್ರಾತಿನಿಧ್ಯಕ್ಕಾಗಿ ಬೆಳಗಾವಿ ನಾಯಕರು ಒತ್ತಾಯಿಸುತ್ತಿದ್ದಾರೆ.
ಕರ್ನಾಟಕದ ಅತಿದೊಡ್ಡ ಜಿಲ್ಲೆಗೆ ಹೆಚ್ಚುವರಿ ಸಚಿವ ಸ್ಥಾನದ ಅರ್ಹತೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಾದಿಸಿದ್ದಾರೆ. ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದೆ ಮತ್ತು ಇನ್ನೂ ಒಂದು ಸಚಿವ ಸ್ಥಾನಕ್ಕೆ ಅರ್ಹವಾಗಿದೆ. ಹೊಸಬರಿಗೆ ಅವಕಾಶ ನೀಡಿದರೆ ಉತ್ತಮ, ಏಕೆಂದರೆ ಹೊಸ ಮುಖಗಳಿಗೆ ಜವಾಬ್ದಾರಿ ವಹಿಸುವುದರಿಂದ ದೀರ್ಘಾವಧಿಯಲ್ಲಿ ಪಕ್ಷ ಬಲಗೊಳ್ಳುತ್ತದೆ" ಎಂದು ಜಾರಕಿಹೊಳಿ ಹೇಳಿದರು. ಇಲ್ಲಿಯವರೆಗೆ ಕೇವಲ ಪ್ರಾಥಮಿಕ ಚರ್ಚೆಗಳು ಮಾತ್ರ ನಡೆದಿವೆ ಎಂದು ಹೇಳಿದ ಅವರು, ಅಂತಿಮ ನಿರ್ಧಾರವು ಸಂಪೂರ್ಣವಾಗಿ ಹೈಕಮಾಂಡ್ಗೆ ಬಿಟ್ಟದ್ದು ಎಂದು ಪುನರುಚ್ಚರಿಸಿದರು.
ಜಿಲ್ಲಾವಾರು ಪ್ರಾತಿನಿಧ್ಯಕ್ಕೆ ಸೂಕ್ತ ಪರಿಗಣನೆ ಸಿಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಜಾರಕಿಹೊಳಿ ಅವರ ಹೇಳಿಕೆಗಳು, ಇತರ ಹಲವಾರು ಜಿಲ್ಲೆಗಳು ಇದೇ ರೀತಿಯ ಬೇಡಿಕೆಗಳನ್ನು ಮುಂದಿಡುತ್ತಿರುವ ಸಮಯದಲ್ಲಿಈ ಹೇಳಿಕೆಗೆ ಹೆಚ್ಚಿನ ಮಹತ್ವ ನೀಡಿವೆ.