ಬೆಂಗಳೂರು: ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನಿವಾಸದ ಎದುರು ಕಾಂಗ್ರೆಸ್ ನಡೆಸಿದ ಧರಣಿ, ಬಳಿಕ ರಾಹುಲ್ ಗಾಂಧಿ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಬಂಧನದ ಪರಿಣಾಮ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡಿಕೆಯಾಗಿದೆ.
ಬುಧವಾರ ನಡೆಯಬೇಕಿದ್ದ ಸಚಿವರ ಪ್ರಮಾಣ ವಚನ ಸಮಾರಂಭವನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ನಡೆಯಬೇಕಿದ್ದ ಅಂತಿಮ ಚರ್ಚೆಯೂ ಮುಂದಕ್ಕೆ ಹೋಗಿದೆ. ಈ ಬೆಳವಣಿಗೆಯಿಂದ ಹೊಸ ಸಚಿವರ ನೇಮಕಾತಿಗೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ.
ಕಾಂಗ್ರೆಸ್ ನಾಯಕರು ನಡೆಸಿದ ಪ್ರತಿಭಟನೆ ಹಾಗೂ ಈ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ಬಂಧನದ ಪರಿಣಾಮ, ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಮತ್ತೆ ಮುಂದೂಡುವ ಸಾಧ್ಯತೆ ಎದುರಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರುಪ ಸುಳಿವು ನೀಡಿದ್ದಾರೆ.
ಮಂಗಳವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬುಧವಾರ ಬೆಂಗಳೂರಿಗೆ ಮರಳಲಿದ್ದು, ಅದಕ್ಕೂ ಮುನ್ನ ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಚರ್ಚೆ ನಡೆಯುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದರು.
ಇಂದು ಅವಕಾಶ ಸಿಕ್ಕರೆ ಇಂದೇ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ನಾನು ಸಿದ್ಧನಿದ್ದೆ. ಇದನ್ನು ಮುಂದೂಡಲು ನನಗೆ ಆಸಕ್ತಿ ಇರಲಿಲ್ಲ. ಸೋಮವಾರವೇ ದೆಹಲಿಗೆ ಬರಬೇಕಿತ್ತು. ಆದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣ ಮಂಗಳವಾರ ಬಂದೆ. ಇಂದು ರಾತ್ರಿ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ನಮ್ಮ ನಾಯಕರನ್ನೇ ಬಂಧಿಸಲಾಗಿದೆ ಎಂದು ಹೇಳಿದರು.
ಸಚಿವ ಸಂಪುಟ ವಿಸ್ತರಣೆ ಹಾಗೂ ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಬುಧವಾರ ನಡೆಸಲು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರ ಅನುಮತಿಯನ್ನೂ ಪಡೆದುಕೊಳ್ಳಲಾಗಿತ್ತು. ಪ್ರತಿಭಟನೆ ವೇಳೆ ಪೊಲೀಸರು ನನ್ನನ್ನೂ ಎಳೆದುಕೊಂಡು ಹೋಗಲು ಯತ್ನಿಸಿದಾಗ, 'ಮುಖ್ಯಮಂತ್ರಿಯನ್ನು ಮುಟ್ಟಬೇಡಿ' ಎಂದು ರಾಹುಲ್ ಗಾಂಧಿ ಪೊಲೀಸರಿಗೆ ಎಚ್ಚರಿಕೆ ನೀಡಿದರು. ಬಳಿಕ ಅವರು ನನಗೆ ಪಕ್ಕಕ್ಕೆ ಸರಿಯುವಂತೆ ಮನವಿ ಮಾಡಿದರು. ಅದಾದ ನಂತರ ನಾನು ಹಿಂದೆ ಸರಿದೆ," ಎಂದು ವಿವರ ನೀಡಿದರು.
20 ಸ್ಥಾನಗಳನ್ನೂ ಭರ್ತಿ ಮಾಡುವ ಉದ್ದೇಶ
ಸಚಿವರ ಆಯ್ಕೆಗೆ ರಾಹುಲ್ ಗಾಂಧಿ ಯಾವ ಮಾನದಂಡ ಅನುಸರಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಮಾಧ್ಯಮಗಳ ಮುಂದೆ ಯಾರು ಚರ್ಚೆ ಮಾಡುತ್ತಾರೆ? ಬೋಸರಾಜು ಅವರು ಶಾಸಕರಾಗದಿದ್ದರೂ ಸಚಿವರಾಗಿರಲಿಲ್ಲವೇ? ಕೃಷ್ಣ ಅವರ ಸರ್ಕಾರದಲ್ಲಿ ಚಂದ್ರಶೇಖರ್ ಆಯ್ಕೆಯಾಗಿರಲಿಲ್ಲವೇ? ಪತ್ರಕರ್ತರು ವಿಧಾನ ಪರಿಷತ್ ಸದಸ್ಯರು, ಸಂಸದರಾಗಿರಲಿಲ್ಲವೇ?" ಎಂದು ಮರು ಪ್ರಶ್ನೆ ಮಾಡಿದರು.
ರಾಜ್ಯ ಸಚಿವ ಸಂಪುಟದಲ್ಲಿರುವ 20 ಖಾಲಿ ಸ್ಥಾನಗಳನ್ನೂ ಭರ್ತಿ ಮಾಡುವ ಉದ್ದೇಶವಿದೆ ಎಂದು ಹೇಳಿದ ಅವರು, "ಖಾಲಿ ಸ್ಥಾನಗಳನ್ನು ಉಳಿಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಬುಧವಾರ ಮಧ್ಯಾಹ್ನ 2 ಗಂಟೆಗೆ ಲೋಕ್ ಭವನದ ಗ್ಲಾಸ್ ಹೌಸ್ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಸಲು ಸಿದ್ಧತೆ ಆರಂಭಿಸಿತ್ತು. ಆದರೆ, ನಂತರ ಮುಖ್ಯಮಂತ್ರಿ ಕಚೇರಿಯಿಂದ ರಾಜ್ಯಪಾಲರ ಕಚೇರಿಗೆ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಮಾಹಿತಿ ನೀಡಲಾಯಿತು.
ಹಿರಿಯರು-ಹೊಸ ಮುಖಗಳ ನಡುವೆ ಸಮತೋಲನ
ಪಕ್ಷದ ಮೂಲಗಳ ಪ್ರಕಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 20 ಹೊಸ ಸಚಿವರಲ್ಲಿ 10 ಮಂದಿ ಅನುಭವಿ ಹಿರಿಯ ಶಾಸಕರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದರು. ಆದರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಹುಲ್ ಗಾಂಧಿ ಸೂಚನೆಯಂತೆ ಕೇವಲ ಐದು ಹಿರಿಯರಿಗೆ ಮಾತ್ರ ಅವಕಾಶ ನೀಡಿ, ಉಳಿದ 15 ಸ್ಥಾನಗಳನ್ನು ಹೊಸ ಮುಖಗಳಿಗೆ ನೀಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ರಾಜ್ಯ ನಾಯಕರ ಶಿಫಾರಸುಗಳನ್ನು ಪರಿಶೀಲಿಸಲು ಎಐಸಿಸಿ ಸಂಸದ ಶಶಿಕಾಂತ್ ಸೆಂಥಿಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಸಮಿತಿ ಯುವ ಶಾಸಕರಿಗೆ ಹೆಚ್ಚಿನ ಅವಕಾಶ ನೀಡುವಂತೆ ವರದಿ ಸಲ್ಲಿಸಿದ್ದು, ಅಂತಿಮ ಪಟ್ಟಿಯನ್ನು ರಾಹುಲ್ ಗಾಂಧಿ ಅವರಿಗೆ ನೀಡಿದೆ. ನಂತರ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂರು ಮಹಿಳೆಯರಿಗೆ ಸಚಿವ ಸ್ಥಾನ?
ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೂರು ಮಹಿಳಾ ಸಚಿವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಆರತಿ ಕೃಷ್ಣ, ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್, ನಯನಾ ಮೊಟಮ್ಮ, ರೂಪಕಲಾ ಶಶಿಧರ್ ಹಾಗೂ ಕನೀಜ್ ಫಾತಿಮಾ ಅವರ ಹೆಸರುಗಳು ಸಚಿವ ಸ್ಥಾನಕ್ಕೆ ಪರಿಗಣನೆಯಲ್ಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.