ಕೊಪ್ಪಳ: ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ನಾಯಕರ ವಿರುದ್ಧ ತೀವ್ರ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದು ಸುದ್ದಿಯಾಗಿದೆ. ತಮ್ಮ ಎರಡು ಸೋಲುಗಳಿಗೆ ಕೊಪ್ಪಳ, ಕನಕಗಿರಿ ಮತ್ತು ಯಲಬುರ್ಗಾ ಭಾಗದ ಸ್ಥಳೀಯ ಕಾಂಗ್ರೆಸ್ ನಾಯಕರೇ ಕಾರಣ ಎಂದು ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನಾನು ನಂಬಿ ಕಾಂಗ್ರೆಸ್ ಸೇರಿರುವುದಾಗಿ ಸ್ಪಷ್ಟಪಡಿಸಿದ ಅನ್ಸಾರಿ, ಎರಡು ಬಾರಿ ಟಿಕೆಟ್ ನೀಡಿದರೂ, ಸ್ಥಳೀಯ ನಾಯಕರ ಪಿತೂರಿಯಿಂದ ನಾನು ಸೋಲಬೇಕಾಯಿತು ಎಂದು ಆರೋಪಿಸಿದ್ದಾರೆ.
ಇಕ್ಬಾಲ್ ಅನ್ಸಾರಿ ಬಿಜೆಪಿಗೆ ಸೇರುತ್ತಾರೆ ಎಂದು ಗಾಳಿ ಸುದ್ದಿ ಹಬ್ಬಿಸಿದರು. ಗಾಳಿ ಸುದ್ದಿಯನ್ನು ನಂಬಿ ಜನರು ಅದನ್ನು ನಂಬಿದರೆ ಅವರಷ್ಟು ಹುಚ್ಚರು ಬೇರೊಬ್ಬರಿಲ್ಲ. ಸತ್ಯತೆ ಏನಿದೆ ಎಂದು ಪ್ರಯತ್ನ ಮಾಡಬೇಕು. ಕಾಂಗ್ರೆಸ್ ನಲ್ಲಿ ನನ್ನ ಬಗ್ಗೆ ಮಾತನಾಡಿ ನನ್ನ ಬಗ್ಗೆ ಅನುಮಾನ ಮೂಡುವಂತೆ ಮಾಡಿ ಹೊರಗೆ ದಬ್ಬುವಂತೆ ಮಾಡಿದರು. ನಾನು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುತ್ತೇನೆ ಎಂದು ಎಂದಾದರೂ ಹೇಳಿದ್ದೆನಾ ಎಂದು ಪ್ರಶ್ನಿಸಿದರು.
ನನಗೆ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಸೋಲಿಸೋಕೆ ಎರಡು ನಿಮಿಷ ಅಲ್ಲ, ಎರಡು ಸೆಕೆಂಡ್ ಸಾಕು. ಶುಕ್ರವಾರ ಮಸೀದಿಗೆ ಒಂದು ಪತ್ರ ಬರೆದು ನನ್ನನ್ನು ಈ ರೀತಿ ಸೋಲಿಸಿದರು, ಇವರಿಗೆ ಮತ ಹಾಕಬೇಡಿ, ನಿಮ್ಮ ಕೆಲಸ ಯಾರು ಮಾಡುತ್ತಾರೋ ಅವರಿಗೆ ಮತ ಹಾಕಿ ಎಂದು ಮನವಿ ಮಾಡಿದರೆ ಸಾಕು ಕಾಂಗ್ರೆಸ್ಸನ್ನು ಸೋಲಿಸಬಹುದು. ಆದರೆ ತಾನು ದೈವ ಭಕ್ತನಾಗಿರುವುದರಿಂದ ಯಾರಿಗೂ ಮೋಸ ಮಾಡಲು ಇಚ್ಛಿಸುವುದಿಲ್ಲ ಎಂದಿದ್ದಾರೆ. ತಾವು ಈಗಲೂ ಕಾಂಗ್ರೆಸ್ನಲ್ಲಿಯೇ ಇದ್ದು, ಸತ್ಯಾಸತ್ಯತೆಯನ್ನು ಜನರು ತಿಳಿದುಕೊಳ್ಳಬೇಕು ಎಂದು ಅನ್ಸಾರಿ ಮನವಿ ಮಾಡಿಕೊಂಡರು.