ಬೆಂಗಳೂರು: ಬಿಜೆಪಿ ನಾಯಕರ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಿಜೆಪಿಗರ ಎದೆ ಸೀಳಿದರೆ ಭ್ರಷ್ಟಾಚಾರ ಮಾತ್ರ ಕಾಣುತ್ತದೆ, ಅಂತೆಯೇ ಎಲ್ಲಾ ಹಗರಣಗಳ ಮೂಲ ಕೆದಕಿದರೆ ಬಿಜೆಪಿಯ ಬಾಗಿಲಿಗೆ ಬಂದು ನಿಲ್ಲುತ್ತದೆ ಎಂದು ಆರೋಪಿಸಿದ್ದಾರೆ.
ಸಾಲು ಸಾಲು ನೇಮಕಾತಿ ಹಗರಣಗಳನ್ನು ನಡೆಸಿದ ಕೆಪಿಎಸ್ಸಿಯ ಅಧ್ಯಕ್ಷ ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕುಟುಂಬದ ಸಂಬಂಧಿಯಂತೆ. ಆತನ ಮನೆಯಲ್ಲಿ ಯಡಿಯೂರಪ್ಪನವರ ಹಾಗೂ ವಿಜಯೇಂದ್ರರವರ ಫೋಟೋಗಳನ್ನು ಭಕ್ತಿಪೂರ್ವಕವಾಗಿ ಹಾಕಿದ್ದಾನಂತೆ. ಇದನ್ನು ಹೇಳಿರುವುದು ಯಡಿಯೂರಪ್ಪನವರ ಕುಟುಂಬದ ಆಳ ಅಗಲಗಳನ್ನು ಚೆನ್ನಾಗಿ ಬಲ್ಲಂತಹ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರವೇ ನೇಮಿಸಿದ್ದ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪನ ಅಕ್ರಮಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೂ ಪಾಲುದಾರರೇ? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ.
ವಿಜಯೇಂದ್ರರವರೇ, ಕೆಪಿಎಸ್ಸಿ ವಿಚಾರದಲ್ಲಿ ನಿಮ್ಮ ಒಳಮರ್ಮಗಳು ಬಯಲಾಗುವ ಭಯದಿಂದ ಪ್ರತಿಭಟನೆ ಎಂಬ ನಾಟಕ ಶುರು ಮಾಡಿರುವಿರಾ?
ವಿಜಯೇಂದ್ರರವರೇ, ನಿಮ್ಮಲ್ಲಿ ಎಳ್ಳು ಕಾಳಷ್ಟು ನೈತಿಕತೆ ಇದ್ದರೆ ಯತ್ನಾಳ್ ಅವರು ಎತ್ತಿರುವ ವಿಷಯಗಳಿಗೆ ಉತ್ತರ ಹೇಳಿ,
ನಿಮಗೂ ಶಿವಶಂಕರಪ್ಪನಿಗೂ ಏನು ಸಂಬಂಧ? ಅಂತಹ ಭ್ರಷ್ಟನನ್ನು ನಿಮ್ಮ ಸರ್ಕಾರ ಕೆಪಿಎಸ್ಸಿಗೆ ನೇಮಿಸಿದ್ದೇಕೆ? ನಿಮ್ಮ ವ್ಯವಹಾರಗಳಿಗೆ ಆತ ಬೇನಾಮಿಯೇ? ನಿಮ್ಮ ಹಾಗೂ ನಿಮ್ಮ ಪೂಜ್ಯ ತಂದೆಯವರ ಮೇಲೆ ಆತನಿಗೆ ಫೋಟೋ ಇಟ್ಟುಕೊಳ್ಳುವಷ್ಟು ಕೃತಜ್ಞನಾಗಿರುವುದೇಕೆ? ತಾವು ಇದುವರೆಗೂ ಆತನ ವಿರುದ್ಧ ಒಂದೇ ಒಂದು ಪದ ಮಾತನಾಡದಿರುವುದೇಕೆ?
ಈ ಪ್ರಶ್ನೆಗಳಿಗೆ ಉತ್ತರ ನೀಡುವ ನೈತಿಕ ಧೈರ್ಯ ನಿಮ್ಮಲ್ಲಿದೆಯೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.