ಮಂಡ್ಯ: ಡಿಕೆ ಶಿವಕುಮಾರ್ ಸಿಎಂ ಎನ್ನುತಿದ್ದಂತೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದು ಇದಕ್ಕೆ ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ತೀವ್ರವಾಗಿ ಕಿಡಿಕಾರಿದ್ದಾರೆ. ದೇವೇಗೌಡ್ರ ಮನೆಯಲ್ಲಿ ಯಾರ ಸಾವನ್ನು ಚಲುವರಾಯಸ್ವಾಮಿ ಬಯಸ್ತಿದ್ದಾರೆ? ಅಂತ ಪ್ರಶ್ನಿಸಿದ್ದಾರೆ. ಅಲ್ಲದೆ ಮತ್ತೊಮ್ಮೆ ದೇವೇಗೌಡ್ರು, ಕುಮಾರಸ್ವಾಮಿ ಬಗ್ಗೆ ನಾಲಿಗೆ ಹರಿಬಿಟ್ಟರೆ ಆ ನಾಲಿಗೆಯನ್ನು ಕತ್ತರಿಸ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
ಚಲುವರಾಯಸ್ವಾಮಿ ಹೇಳಿಕೆಗೆ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಸುರೇಶ್ ಗೌಡ, ಚಲುವರಾಯಸ್ವಾಮಿ ಅಧಿಕಾರ, ಹಣ ಮದದಿಂದ ತಪ್ಪು ಮಾಡುತ್ತಿದ್ದಾರೆ. ತುಂಬಾ ದಿನ ನಡೆಯುವುದಿಲ್ಲ. ಕಾಂಗ್ರೆಸ್ ಅನ್ನು ರಾಜ್ಯದ ಜನತೆ ಆಯ್ಕೆ ಮಾಡಿದ್ದು 5 ವರ್ಷ ಪೂರ್ಣಗೊಳಿಸಬೇಕು. ಅಭಿವೃದ್ಧಿ ಕುಂಠಿತದ ಬಗ್ಗೆ ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದರಿಂದ ಡಿಕೆಶಿ ಸಿಎಂ ಆಗುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳು ಯಾರನ್ನೋ ಮೆಚ್ಚಿಸಲು ನಮ್ಮ ನಾಯಕರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಅಂತ ಸುರೇಶ್ ಗೌಡ ಕಿಡಿಕಾರಿದರು.
ಚಲುವರಾಯಸ್ವಾಮಿ ಹೇಳಿದ್ದೇನು?
ಡಿಕೆಶಿ ಸಿಎಂ ಎನ್ನುತ್ತಿದ್ದಂತೆ ದೇವೆಗೌಡರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ ಅಂತ ಚಲುವರಾಯಸ್ವಾಮಿ ಹೇಳಿದ್ದರು. ಒಕ್ಕಲಿಗರಿಗೆ ನಾವೇ ನಾಯಕರು ಅಂದುಕೊಂಡಿದ್ದರು. ಆದರೆ ಒಕ್ಕಲಿಗ ಸಮುದಾಯ ಡಿಕೆಶಿಯವರನ್ನೂ ಬೆಂಬಲಿಸಿದೆ. ಡಿಕೆಶಿ ಒಕ್ಕಲಿಗ ಸಮುದಾಯ ಅಷ್ಟೇ ಅಲ್ಲ ಎಲ್ಲಾ ಸಮುದಾಯದ ವಿಶ್ವಾಸಗಳಿಸಿದ್ದಾರೆ ಅಂತ ಹೇಳಿದ್ದರು.