ಬೆಂಗಳೂರು: ಬಿಡದಿ ಟೌನ್ ಶಿಪ್ ವಿವಾದ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಮಾಗಡಿ ಕಾಂಗ್ರೆಸ್ ಶಾಸಕ ಹೆಚ್.ಸಿ. ಬಾಲಕೃಷ್ಣ ಮಂಗಳವಾರ ಕಿಡಿಕಾರಿದ್ದಾರೆ.
ಬಸವೇಶ್ವರ ನಗರದ ತಮ್ಮ ನಿವಾಸದಲ್ಲಿಂದು ಯೋಜನೆ ಬೆಂಬಲಿಸುವ ಶಾಸಕರಿಗೆ ನಿವೇಶನ ನೀಡುವ ಭರವಸೆ ನೀಡಲಾಗಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತ ಸುದ್ದಿಗಾರರ ಪ್ರಶ್ನೆಯಿಂದ ಕೆರಳಿದ ಬಾಲಕೃಷ್ಣ, ಅವ್ರರಿಗೆ ಮಾನ, ಮಾರ್ಯಾದೆ ಇದ್ದರೆ ಹೇಳಬೇಕು. ಒಬ್ಬ ಲೀಡರ್ ಆಗಿ, ಕೇಂದ್ರದ ಮಂತ್ರಿಯಾಗಿ ಇಂತಹ ಕ್ಷುಲ್ಲಕ ಹೇಳಿಕೆ ನೀಡುವುದನ್ನು ಕೈಬಿಡಬೇಕು ಎಂದರು.
ಯಾರೀ, ಸೈಟ್ ಕೊಡ್ತಿದ್ದಾರೆ. ಅಸಹ್ಯ ಆಗಲ್ವಾ, ಇಂತಹ ಸ್ಟೇಟ್ ಮೆಂಟ್ ಕೊಡುವುದಕ್ಕೆ. ನಿಖಿಲ್ ಕುಮಾರಸ್ವಾಮಿ ತರಹ ಹೇಳಿಕೆ ನೀಡುತ್ತಿದ್ದಾರೆ. ಇದೆಲ್ಲಾ ಚಿಲ್ಲರೆ ರಾಜಕಾರಣ. ಹೇಳಿಕೆಗೆ ಆಧಾರ ತೋರಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇವೆ, ಇಲ್ಲವಾದರೆ ಅವರೇ ರಾಜಕಾರಣದಿಂದ ನಿವೃತ್ತಿ ಹೊಂದುತ್ತಾರಾ? ಎಂದು ಸವಾಲು ಹಾಕಿದರು.
ಅಸಹ್ಯ, ಥೂ, ಇವೆಲ್ಲಾ ಚಿಲ್ಲರೆ ಸ್ಟೇಟ್ ಮೆಂಟ್ : ಅಸಹ್ಯ,ಥೂ,ಇವೆಲ್ಲಾ ಚಿಲ್ಲರೆ ಸ್ಟೇಟ್ ಮೆಂಟ್. ಕುಮಾರಸ್ವಾಮಿ ಕೇಂದ್ರ ಮಂತ್ರಿ ಅನ್ನೋದನ್ನು ಮರೆತು ಇಂಥ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ. ರಾಮನಗರದ ಚಾಮುಂಡೇಶ್ವರಿ ದೇವಾಲಯದ ಮುಂದೆ ಪ್ರಮಾಣ ಮಾಡಿ ಅಂದ್ರೂ ಕೇಳುತ್ತಿಲ್ಲ. ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂಬ ಅವರ ಆರೋಪದಲ್ಲಿ ಹುರುಳಿಲ್ಲ. ಸರ್ಕಾರ ರೈತರಿಗೆ ಅನುಕೂಲ ಮಾಡಿಕೊಡುತ್ತಿದೆ. ಕೇಂದ್ರ ಮಂತ್ರಿಯಾಗಿ ಇಂತಹ ಕ್ಷುಲಕ್ಕ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.
ರಾಜ್ಯದ ಅಭಿವೃದ್ಧಿ ಮಾಡ್ತಿಲ್ಲ, ಅವರ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಕುಮಾರಸ್ವಾಮಿ ಆರೋಪ ಕುರಿತು ಪ್ರತಿಕ್ರಿಯಿಸಿದ ಬಾಲಕೃಷ್ಣ ಈ ಕುರಿತು ಸಿಬಿಐ ತನಿಖೆ ನಡೆಸಲಿ ಎಂದು ಸವಾಲು ಹಾಕಿದರು.
ಸರ್ಜಾಪುರ, ಚಿಕ್ಕಬಳ್ಳಾಪುರ, ಜಂಗಮಕೋಟೆ, ದೊಡ್ಡಬಳ್ಳಾಪುರದಲ್ಲಿ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಹಾಸನದಲ್ಲಿ ಕೇಂದ್ರದಿಂದ ಮಂಜೂರಾಗುವ ಮುನ್ನವೇ ಐಐಟಿ ಕಾಲೇಜಿಗಾಗಿ 1800 ಎಕರೆ ಭೂಸ್ವಾಧೀನ ಮಾಡಿದ್ದಾರೆ. ಕುಮಾರಸ್ವಾಮಿ ಹಾಗೂ ನಿಖಿಲ್ ಅವರು ಇಲ್ಲೆಲ್ಲೂ ಮಾಡದ ಹೋರಾಟವನ್ನು ಬಿಡದಿಯಲ್ಲಿ ಮಾತ್ರ ಯಾಕೆ ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.
ಧರ್ಮಸ್ಥಳದಲ್ಲಿ ಆಣೆ ಮಾಡಿಸಬೇಕಿದೆ: ಅಡ್ಡಮತದಾನದ ಬಗ್ಗೆ ಧರ್ಮಸ್ಥಳದಲ್ಲಿ ಆಣೆಪ್ರಮಾಣ ಮಾಡುವ ಚರ್ಚೆ ನಡೆಯುತ್ತಿದೆ ಎಂದು ಕೇಳಿದಾಗ, ನಾವು ಈಗ ಬಿಡದಿ ಟೌನ್ ಶಿಪ್ ನನ್ನ ಕನಸಿನ ಕೂಸು ಎಂದು ಕುಮಾರಸ್ವಾಮಿ ಹೇಳಿದ್ದಾರೋ ಇಲ್ಲವೋ ಎಂದು ಕುಮಾರಸ್ವಾಮಿ ಅವರಿಂದ ಧರ್ಮಸ್ಥಳದಲ್ಲಿ ಆಣೆ ಮಾಡಿಸಬೇಕಿದೆ. ಅಡ್ಡಮತದಾನಕ್ಕೆ ಅವರು ಇದನ್ನು ಮಾಡಿರುವಾಗ, ಈ ವಿಚಾರದಲ್ಲೂ ನಾವು ಕರೆಯಬೇಕಿದೆ. ಬಿಜೆಪಿ ಆಂತರಿಕ ವಿಚಾರ ಅವರು ಏದರೂ ಮಾಡಿಕೊಳ್ಳಲಿ” ಎಂದರು.
ಆಣೆ ಪ್ರಮಾಣ ಈ ಹಿಂದೆಯೂ ನಡೆದಿತ್ತು ಎಂದಾಗ “ಕುಮಾರಸ್ವಾಮಿ ಜೊತೆಗೆ ನಾನು ಬೆಳೆದವನು. ಅವರು ಬೇರೆ ಯಾರು ಸಿಎಂ ಆಗುವುದನ್ನು ಸಹಿಸುವುದಿಲ್ಲ. ಈ ರಾಜ್ಯಕ್ಕೆ ಈ ಮುಖ್ಯಮಂತ್ರಿಯಾಗಿ ಒಳ್ಳೆಯದಾಗುವುದಾದರೆ ನನ್ನಿಂದ ಮಾತ್ರ ಎಂಬ ಮನೋಭಾವವಿದೆ. ಅವರ ಭಾವನೆ, ರೀತಿ ನೀತಿ ಸರಿಯಾಗಿದ್ದರೆ ಇಷ್ಟು ಹೊತ್ತಿಗೆ 124 ಶಾಸಕರನ್ನು ಗೆಲ್ಲಿಸುತ್ತಿದ್ದರು. ಶಿವಕುಮಾರಸ್ವಾಮಿಜಿ ಮೇಲೆ ಆಣೆ ಮಾಡಿ ಯಡಿಯೂರಪ್ಪಗೆ ಅಧಿಕಾರ ನೀಡುತ್ತೇನೆ ಎಂದು ಆಣೆ ಮಾಡಿದವರು, ನಂತರ ಅಧಿಕಾರ ಹಸ್ತಾಂತರ ಮಾಡಲಿಲ್ಲ. ನಂತರ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಅಧಿಕಾರದಿಂದ ಇಳಿಸಿದರು. ಅವರಿಗೆ ಶಿವಕುಮಾರ್ ಸಿಎಂ ಆದ ಬಳಿಕ ನಿದ್ದೆ ಬರುತ್ತಿಲ್ಲ. ರಾತ್ರಿ ಶಿವಕುಮಾರ್ ಅವರೇ ಯೋಚನೆಯಲ್ಲಿ ಇರುತ್ತಾರೆ. ಹೀಗಾಗಿ ದೆಹಲಿ ಬಿಟ್ಟು ಇಲ್ಲಿಗೆ ಬಂದಿದ್ದಾರೆ. ” ಎಂದು ತಿರುಗೇಟು ನೀಡಿದರು.
ಬಿಡದಿ ಯೋಜನೆ ಕೈಬಿಟ್ಟರೆ ಅವರ 5 ಎಕರೆಯನ್ನು ಜನರಿಗೆ ನೀಡುವುದಾಗಿ ನಿಖಿಲ್ ಹೇಳಿದ್ದಾರೆ ಎಂದು ಕೇಳಿದಾಗ, “ಅವರ ತಂದೆಯೇ ಯೋಜನೆ ಕೈಬಿಡಲಿಲ್ಲ, ನಾವು ಬಿಡಲು ಹೇಗೆ ಸಾಧ್ಯ? ಅವರು ತಮ್ಮ ಜಮೀನು ಕೊಟ್ಟರೆ ಹೋರಾಟ ಮಾಡುತ್ತಿರುವ ರೈತರಿಗೆ ಒಂದೊಂದು ನಿವೇಶನ ನೀಡುತ್ತೇವೆ. ಬೇಕಾದರೆ ಅವರ ಹೆಸರನ್ನೇ ಆ ಬಡಾವಣೆಗೆ ಇಡುತ್ತೇವೆ. ಅವರು ಬೇನಾಮಿಯಲ್ಲಿ ಜಮೀನು ಮಾಡಿ, ಬೇನಾಮಿಗೆ ಹಣ ಹೋಗುತ್ತದೆ ಎಂದು ಜಿಬಿಐಟಿಗೆ ಪತ್ರ ಬರೆದರು. ಜನರಿಗೆ ಕೊಡುವವರು, ಜಿಬಿಐಟಿಗೆ ಪತ್ರ ಯಾಕೆ ಬರೆದರು?. 10 ಲಕ್ಷಕ್ಕೆ ಖರೀದಿ ಮಾಡಿದ ಜಮೀನು 2 ಕೋಟಿಗೆ ಹೋಗುತ್ತಿದೆ” ಎಂದು ಪ್ರಶ್ನಿಸಿದರು.
ಪಂಚಾಯಿತಿ ಮಟ್ಟದಲ್ಲಿ ಸಮಿತಿ ಮಾಡಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡಿದರೆ ಹೊರೆಯಾಗುವುದಿಲ್ಲವೇ ಎಂದು ಕೇಳಿದಾಗ, “ಪಕ್ಷ ಬೆಳೆಯಬೇಕಾದರೆ ಕಾರ್ಯಕರ್ತರು ಮುಖ್ಯ. ಹೊರೆ ಸರಿದೂಗಿಸುವ ಸಾಮರ್ಥ್ಯ ನಮ್ಮ ನಾಯಕರಿಗೆ ಇದೆ. ನಮ್ಮನ್ನು ಈ ಸ್ಥಾನದಲ್ಲಿ ಕೂರಿಸಿದವರಿಗೆ ಅನುಕೂಲ ಮಾಡಿಕೊಡಲಾಗುವುದು” ಎಂದು ತಿಳಿಸಿದರು.