ಬೆಂಗಳೂರು: ನನ್ನ ಮಗನನ್ನು ನೋಡಿಕೊಳ್ಳಿ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಬಾ ಸಾಹೇಬ್ ಅಂಬೇಡ್ಕರ್ ತತ್ತ್ವಕ್ಕೆ ತಿಲಾಂಜಲಿ ನೀಡಿದ್ದಾರೆ. ಇದು ಪ್ರಜಾಪ್ರಭುತ್ವವೇ ಹೊರತು ರಾಜಪ್ರಭುತ್ವ ಅಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ಸಮಾಜವಾದಿ, ಕುಟುಂಬವಾದಿ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಜನರ ಮುಂದೆ ಹೋಗಿ ಮಗನನ್ನು ನೋಡಿಕೊಳ್ಳಿ ಎಂದಿದ್ದಾರೆ. ಇನ್ನು 6 ತಿಂಗಳು ಕಳೆದರೆ ಮೊಮ್ಮಗನನ್ನೂ ನೋಡಿಕೊಳ್ಳಿ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.
ಇದು ಪ್ರಜಾಪ್ರಭುತ್ವವೇ ಹೊರತು ರಾಜಪ್ರಭುತ್ವ ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಬಾ ಸಾಹೇಬ್ ಅಂಬೇಡ್ಕರ್ ತತ್ತ್ವಕ್ಕೆ ತಿಲಾಂಜಲಿ ನೀಡಿದ್ದಾರೆ. ಯಾವುದೇ ಅಭ್ಯರ್ಥಿ ಮತದಾನದ ಮೂಲಕ ಗೆದ್ದು ಬರಬೇಕು. ಈ ರೀತಿ ಹೇಳಿಕೆ ನೀಡಿದರೆ ಅಂಬೇಡ್ಕರ್ಗೆ ಅಪಚಾರ ಮಾಡಿದಂತಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅಭಿಪ್ರಾಯಪಟ್ಟರು.
ಎಲ್ಪಿಜಿ ಮಾರಾಟಕ್ಕೆ ಸಂಬಂಧಿಸಿದಂತೆ ವಂಚನೆ ನಡೆಯದಿರಲು ಎಸ್ಮಾ ಜಾರಿಯಲ್ಲಿದೆ. ಇಂತಹ ಸಮಯದಲ್ಲಿ ಸಿಎಂ ಸಿದ್ದರಾಮಯ್ಯ ಬಂದ್ ಮಾಡಲಿ ಎಂದು ಹೇಳಿಕೆ ನೀಡಬಾರದು. ಕಾಳಸಂತೆಯನ್ನು ತಡೆಯಲು ಕ್ರಮ ವಹಿಸಬೇಕು.
ಯುದ್ಧ ನಡೆಯುತ್ತಿರುವ ಸಮಯದಲ್ಲಿ ಎಲ್ಪಿಜಿ ಕೊರತೆಯಾಗಿದ್ದು, ಇಂತಹ ಸಮಯದಲ್ಲಿ ತಾಳ್ಮೆಯಿಂದ ಸಹಕಾರ ನೀಡಬೇಕಾಗುತ್ತದೆ. ಎಲ್ಲದರಲ್ಲೂ ರಾಜಕೀಯ ಮಾಡಬಾರದು. ಇದರಲ್ಲೂ ರಾಜಕೀಯ ಮಾಡಿದರೆ ಕಾಂಗ್ರೆಸ್ಗೆ ಗೌರವ ಇರುವುದಿಲ್ಲ ಎಂದರು.
ಎಸ್ಐಆರ್ಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೇನೆ. ರಾಜ್ಯದಲ್ಲಿ ಬಾಂಗ್ಲಾ ಹಾಗೂ ಪಾಕಿಸ್ತಾನದ ಪ್ರಜೆಗಳು ಕೂಡ ಇದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆಯ ವೇಳೆ ಇವರೆಲ್ಲರನ್ನೂ ಪಟ್ಟಿಯಿಂದ ಹೊರಗಿಡಲು ಕ್ರಮ ವಹಿಸಬೇಕೆಂದು ಚರ್ಚೆಯಾಗಿದೆ. ಈ ಕುರಿತು ಚುನಾವಣಾ ಆಯೋಗದಿಂದ ಹೆಚ್ಚು ಕ್ರಮ ಕೈಗೊಳ್ಳಬೇಕಿದೆ ಎಂದರು.