ಬೆಂಗಳೂರು: ವಿಧಾನಸಭೆಯಲ್ಲಿ ಅಸಭ್ಯ ಪದಪ್ರಯೋಗದ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವೆ ಗುರುವಾರ ತೀವ್ರ ವಾಗ್ವಾದ ನಡೆಯಿತು.
ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಹಾಗೂ ಬಿಜೆಪಿ ಶಾಸಕ ಮುನಿರತ್ನ ನಡುವಿನ ಮಾತಿನ ಚಕಮಕಿ ಸದನದಲ್ಲಿ ಗದ್ದಲಕ್ಕೆ ಕಾರಣವಾಯಿತು.
ಬೆಂಗಳೂರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ವೇಳೆ ವೈಯಕ್ತಿಕ ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿಬಂದವು.
ಮುನಿರತ್ನ ಮಾಡಿದ ಆರೋಪಕ್ಕೆ ಉತ್ತರ ನೀಡಲು ಮುಂದಾದ ಡಿಕೆ.ಶಿವಕುಮಾರ್ ಅವರು ತೀವ್ರವಾಗಿ ಕಿಡಿಕಾರಿದರು.
ಅಶೋಕ್ ಗೆ ಹೇಗೆ ಏಡ್ಸ್ ಚುಚ್ಚುಮದ್ದು ಚುಚ್ಚಿದ್ರು ಎಂದು ಎಫ್ಐಆರ್ ಇದೆ. ಅದರ ಬಗ್ಗೆ ಚರ್ಚೆ ಮಾಡಬೇಕು ಅಂದರೆ ಮಾಡ್ತೀನಿ ಎಂದರು.
ಡಿಕೆಶಿ ಮಾತಿನಿಂದ ರೊಚ್ಚಿಗೆದ್ದ ಮುನಿರತ್ನ, 'ಈ ವೇಳೆ ಎಲ್ಲವನ್ನೂ ಹೇಳಿ' ಎಂದು ಸವಾಲು ಹಾಕಿದರು. ಆಯ್ತಣ್ಣ ಮುನಿರತ್ನ ಕೂತ್ಕೊಳಣ್ಣಾ ಎಂದು ಡಿಕೆಶಿ ಸಿಟ್ಟಾದರು. ಈ ವೇಳೆ, ಡಿಕೆಶಿ ಮಾತಿಗೆ ಅಶೋಕ್, ಅಶ್ವಥ್ ನಾರಾಯಣ್ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಮುನಿರತ್ನ ಚರ್ಚೆಗೆ ಪಟ್ಟು ಹಿಡಿದರು. ಹೀಗಾಗಿ ಸದನದಲ್ಲಿ ಭಾರಿ ಗದ್ದಲ ಉಂಟಾಯಿತು.
"ನನಗೆ ಮಾತನಾಡಲು ಅವಕಾಶ ಕೊಡಬೇಕು. ನಾನು ಉತ್ತರ ಕೊಡುತ್ತೇನೆ. ಇವರು ಮಾಡಿರುವಂತಹ ಪಾಪದ ಕೆಲಸ. ಅಧಿಕಾರ ದುರ್ಬಳಕೆ ಮಾಡಿ ನನ್ನ ವಿರುದ್ಧ ಎಫ್ ಐ ಆರ್ ಮಾಡಿಸಿದ್ದಾರೆ. 'ಇವರಿಗೆ ಮೂರು ಮಕ್ಕಳಿವೆ ಅದನ್ನು ಮರೆಯಬೇಡಿ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ "ಹೇ ರೇಪಿಸ್ಟ್ ಕೂತ್ಕೋ" ಎಂದು ಡಿಕೆಶಿ ತಿರುಗೇಟು ನೀಡಿದರು.
ಈ ವೇಳೆ ವೈಯಕ್ತಿಕ ನಿಂದನೆ ಸರಿಯಲ್ಲ ಅಂತ ಡಿಕೆಶಿ ಪರವಾಗಿ ಕಾಂಗ್ರೆಸ್ ಸದಸ್ಯ ನಿಂತರು. ಎಲ್ಲರಿಗೂ ಮಕ್ಕಳಿವೆ ಎಂದು ತಿರುಗೇಟು ನೀಡಿದರು. ಮಧ್ಯಪ್ರವೇಶಿಸಿದ ಬಿಜೆಪಿ ನಾಯಕರು, "ಸದನದಲ್ಲಿ ಮುನಿರತ್ನ ಅವರು ಕೇಳಿದ ಪ್ರಶ್ನೆಗೆ ಡಿಕೆಶಿ ಉತ್ತರ ಕೊಡಬೇಕು. ಅದು ಬಿಟ್ಟು ರೇಪಿಸ್ಟ್, ಏಡ್ಸ್ ಇಂಜೆಕ್ಷನ್ ಅಂತ ವೈಯಕ್ತಿಕ ಹೇಳಿಕೆ ಸರಿಯಲ್ಲ ಎಂದರು.
ಬಳಿಕ ಮುನಿರತ್ನ ಅವರು ಅಸಭ್ಯ ಪದಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿ, ಕಾಂಗ್ರೆಸ್ ಶಾಸಕರು ಅವರಿಗೆ ಮನವಿ ಮಾಡಿ ಅವರನ್ನು ಸದನದಿಂದ ಅಮಾನತು ಮಾಡುವಂತೆ ಒತ್ತಾಯಿಸಿದರು. ನಂತರ ಸದನದ ಮಧ್ಯಭಾಗಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದರು.
ಇನ್ನೊಂದೆಡೆ, ಬಿಜೆಪಿ ಸದಸ್ಯರು ಡಿ.ಕೆ. ಶಿವಕುಮಾರ್ ಬಳಸಿದ ಪದಗಳನ್ನು ದಾಖಲೆಗಳಿಂದ ತೆಗೆದುಹಾಕುವಂತೆ ಆಗ್ರಹಿಸಿದರು.
ಸಮಸ್ಯೆ ಗಂಭೀರವಾಗುತ್ತಿದ್ದಂತೆ, ಸ್ಪೀಕರ್ ಯು.ಟಿ. ಖಾದರ್ ಮಧ್ಯಪ್ರವೇಶಿಸಿ, ಉಭಯಪಕ್ಷದ ನಾಯಕರಿಂದ ಬಳಸಲ್ಪಟ್ಟ ಅಸಭ್ಯ ಪದಗಳನ್ನು ವಿಧಾನಸಭಾ ದಾಖಲೆಗಳಿಂದ ತೆಗೆದುಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.