ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ತೀವ್ರ ಚರ್ಚೆಯಾಗುತ್ತಿರುವಂತೆಯೇ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಹಿರಿಯ ಮುಖಂಡರೂ, ಹರಿಯಾಣ ಉಸ್ತುವಾರಿ ಆಗಿರುವ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ಪ್ರಸ್ತಕ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದಾರೆ.
ಬಳಿಕ ಸುದ್ದಿಸಂಸ್ಥೆ ANI ಜೊತೆಗೆ ಬಿಕೆ. ಹರಿಪ್ರಸಾದ್ ಮಾತನಾಡಿದ್ದು, ಇದೊಂದು ಸೌಜನ್ಯಯುತ ಭೇಟಿಯಾಗಿತ್ತು. ಇದರಲ್ಲಿ ಯಾವುದೇ ಕುತೂಹಲವಿಲ್ಲ. ಪಶ್ಚಿಮ ಬಂಗಾಳ ಚುನಾವಣೆ ಮತ್ತು ಹರಿಯಾಣ ರಾಜ್ಯಸಭಾ ಚುನಾವಣೆಗಳಲ್ಲಿ ನಿರತನಾಗಿದ್ದರಿಂದ 3 ತಿಂಗಳಿನಿಂದ ಸಿಎಂ ಭೇಟಿಯಾಗಿರಲಿಲ್ಲ. ಇದೊಂದು ಕೇವಲ ಸೌಜನ್ಯದ ಭೇಟಿ ಹೊರತು ಬೇರೇನೂ ಅಲ್ಲ ಎಂದು ಹೇಳಿದರು.
ಇದೇ ವೇಳೆ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ ಅವರೇ ಹೈಕಮಾಂಡ್, ಅವರು ನೀಡಿದ ಹೇಳಿಕೆಯೇ ಅಂತಿಮ. ಅವರು ಹೇಳಿದ್ದನ್ನು ಯಾರೂ ಅರ್ಥೈಸುವ ಅಗತ್ಯವಿಲ್ಲ. ಕಾಂಗ್ರೆಸ್ ಅಧ್ಯಕ್ಷರು ಹೇಳಿಕೆ ನೀಡಿದಾಗ, ನಾಯಕತ್ವ ಬದಲಾವಣೆ ವಿಷಯದ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. ರಾಜ್ಯ ಸಚಿವ ಸಂಪುಟ ಪುನರ್ ರಚನೆ ಬೇಡಿಕೆ ಕುರಿತು ಮಾತನಾಡಿದ ಹರಿಪ್ರಸಾದ್, ಇದು ಇದು ಮುಖ್ಯಮಂತ್ರಿ ಮತ್ತು ಹೈಕಮಾಂಡ್ನ ವಿಶೇಷಾಧಿಕಾರ. ಅವರು ನಿರ್ಧರಿಸಬೇಕು ಎಂದರು.
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಗಳ ನಂತರ, ಎಲ್ ಪಿಜಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದ್ದರು. ಹೆಚ್ಚಿನ ಬಿಜೆಪಿ ನಾಯಕರು ಅವರ ಹೇಳಿಕೆಯನ್ನು ಅಪಹಾಸ್ಯ ಮಾಡಿದ್ದರು. ಆದರೆ ಈಗ ಅವರು ಸರಿಯಾಗಿಯೇ ಹೇಳಿದ್ದಾರೆ ಎಂದು ಸಾಬೀತಾಗಿದೆ ಎಂದು ಹೇಳಿದರು.
ಇನ್ನೂ 5 ರಾಜ್ಯಗಳ ಚುನಾವಣೆಗಳ ಎಕ್ಸಿಟ್ ಪೋಲ್ ಬಗ್ಗೆ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಬಿಜೆಪಿ ಮುಕ್ತ ದಕ್ಷಿಣ ಭಾರತವಾಗಿರುತ್ತದೆ. ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಯಾವುದೇ ಪಾತ್ರವಿರುವುದಿಲ್ಲ. 2 ವರ್ಷಗಳ ನಂತರ, ಕರ್ನಾಟಕದಿಂದ ಕೂಡ, ಅವರು ಬೇರು ಸಹಿತ ನಿರ್ಗಮಿಸುತ್ತಾರೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಷಯಕ್ಕೆ ಬಂದರೆ, ನೋಡೋಣ. ಹೋರಾಟ ಬಹಳ ಮುಖ್ಯ. ಬಲವಾದ ಹೋರಾಟವಿದೆ. ಫಲಿತಾಂಶ ಏನೆಂದು ನಾವು ನೋಡುತ್ತೇವೆ ಎಂದರು.
ಈ ಹಿಂದೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ಕಾರ್ಯವೈಖರಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.ಈ ಭೇಟಿಯು ಕಾಂಗ್ರೆಸ್ ಒಳಗೆ, ವಿಶೇಷವಾಗಿ ಸುರ್ಜೇವಾಲಾ ವಿರುದ್ಧದ ರಾಜಕೀಯ ಚರ್ಚೆಗಳ ನಡುವೆ ಪ್ರಾಮುಖ್ಯತೆ ಪಡೆದುಕೊಂಡಿದೆ.