ಬೆಂಗಳೂರು: 2023ರಲ್ಲಿ ಪರಾಭವಗೊಂಡಾಗಲೇ ಡಿ ಎನ್ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂ ಕೋರ್ಟ್ ವರೆಗೆ ಕೂಡ ಹೋಯಿತು. ಈಗ ಹೈಕೋರ್ಟ್ ಆದೇಶ ಪ್ರಕಾರ ಅಂಚೆಮತ ಮರು ಎಣಿಕೆ ಆಗಿದೆ. ಮಧ್ಯರಾತ್ರಿಯೇ ನಮಗೆ ಮಾಹಿತಿ ಸಿಕ್ಕಿತು, ಜೀವರಾಜ್ ಅವರು 56 ಮತಗಳಿಂಗ ಗೆದ್ದಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಅಧಿಕಾರಿಗಳ ಮೇಲೆ ಸಾಕಷ್ಟು ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ. ಚುನಾವಣಾ ಫಲಿತಾಂಶ ಘೋಷಣೆ ಮಾಡಬಾರದು ಎಂದು ಕೂಡ ಹೇಳುತ್ತಿದ್ದಾರೆ, ರಾಜೇಗೌಡರಿಗೆ ಹೈಕೋರ್ಟ್ ಮೊರೆ ಹೋಗಲು ಸಮಯ ಕೊಡಬೇಕೆಂದು ಕುತಂತ್ರ ನಡೆಸುತ್ತಿದ್ದಾರೆ ಎಂಬ ವಿಚಾರ ನಮಗೆ ಗೊತ್ತಾಗಿದೆ ಎಂದು ವಿಜಯೇಂದ್ರ ಆರೋಪಿಸಿದರು.
ಜೀವರಾಜ್ ಅವರು ಜನರ ಆಶೀರ್ವಾದದಿಂದ ಗೆದ್ದಿದ್ದಾರೆ, ಅವರಿಗೆ ಈಗಾಗಲೇ ಮೂರು ವರ್ಷ ಅನ್ಯಾಯವಾಗಿದೆ. ಇನ್ನು ಎರಡು ವರ್ಷವಾದರೂ ಗೌರವಯುತವಾಗಿ ಜನರ ಆಶೀರ್ವಾದದಂತೆ ಶಾಸಕರಾಗಿ ಕೆಲಸ ಮಾಡಲು ಅವಕಾಶ ನೀಡಬೇಕೆಂದು ಕೇಳಿಕೊಂಡರು.