ಆರ್. ಅಶೋಕ್ 
ರಾಜಕೀಯ

ವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿ ಈಗ ಎಲ್ಲಿದ್ದಾರೆ? ಆರ್. ಅಶೋಕ್ ಕಿಡಿ!

ಕಾಂಗ್ರೆಸ್‌ ಸರ್ಕಾರ ಚುನಾವಣಾಧಿಕಾರಿಯ ಮೇಲೆ ಒತ್ತಡ ಹೇರಿ ಫಲಿತಾಂಶವನ್ನು ತಡೆಹಿಡಿದಿದೆ. ಈ ಮೂಲಕ ಕೋರ್ಟ್‌ ಆದೇಶ ಉಲ್ಲಂಘಿಸಲಾಗಿದೆ. ಇದು ರಾಜ್ಯದ ಜನತೆಗೆ ಬಗೆದ ದ್ರೋಹ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಚುನಾವಣಾಧಿಕಾರಿ ಪ್ರಕಟಿಸದಂತೆ ಕಾಂಗ್ರೆಸ್‌ ಸರ್ಕಾರ ಒತ್ತಡ ಹೇರಿದೆ. ಚುನಾವಣಾಧಿಕಾರಿಗಳು ಕೂಡಲೇ ಫಲಿತಾಂಶ ಪ್ರಕಟಿಸಿ ಹೈಕೋರ್ಟ್‌ ಆದೇಶ ಪಾಲಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ 52 ಅಂಚೆ ಮತಗಳು ಬಿಜೆಪಿ ಅಭ್ಯರ್ಥಿ ಡಿ.ಎನ್‌.ಜೀವರಾಜ್‌ ಅವರಿಗೆ ದೊರೆತಿದೆ. ಮತ ಎಣಿಕೆಯಲ್ಲಿ ಯಾರಿಗೆ ಹೆಚ್ಚು ಮತ ಬರುತ್ತದೋ ಅದನ್ನು ಘೋಷಿಸಬೇಕೆಂದು ಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಕೇಳಿದಾಗ, ಹೈಕೋರ್ಟ್‌ಗೆ ಮಾಹಿತಿ ನೀಡುತ್ತೇವೆ ಎಂದು ಸಬೂಬು ಹೇಳಿದ್ದಾರೆ. ಕಾಂಗ್ರೆಸ್‌ ಸರ್ಕಾರ ಚುನಾವಣಾಧಿಕಾರಿಯ ಮೇಲೆ ಒತ್ತಡ ಹೇರಿ ಫಲಿತಾಂಶವನ್ನು ತಡೆಹಿಡಿದಿದೆ. ಈ ಮೂಲಕ ಕೋರ್ಟ್‌ ಆದೇಶ ಉಲ್ಲಂಘಿಸಲಾಗಿದೆ. ಇದು ರಾಜ್ಯದ ಜನತೆಗೆ ಬಗೆದ ದ್ರೋಹ ಎಂದರು.

ವೋಟ್‌ ಚೋರಿ ಎನ್ನುವ ರಾಹುಲ್‌ ಗಾಂಧಿ ಈಗ ಎಲ್ಲಿದ್ದಾರೆ? ಬಿಜೆಪಿ ಪರವಾಗಿ ಫಲಿತಾಂಶ ಬರಲಿದೆ ಎಂದು ತಿಳಿದಾಕ್ಷಣ ಅಧಿಕಾರಿಗಳು ಉಲ್ಟಾ ಹೊಡೆದಿದ್ದಾರೆ. ಪ್ರತಿ ಬಾರಿ ಅಂಚೆ ಮತಗಳನ್ನು ಮೊದಲು ಎಣಿಸುತ್ತಾರೆ. ಬಳಿಕ ಮತಯಂತ್ರದಲ್ಲಿ ಮತಗಳನ್ನು ಎಣಿಸಲಾಗುತ್ತದೆ. ಆದರೆ ಶೃಂಗೇರಿಯಲ್ಲಿ ಎಲ್ಲವನ್ನೂ ಉಲ್ಟಾ ಪಲ್ಟಾ ಮಾಡಲಾಗಿದೆ. ಈ ಬಗ್ಗೆ ಕೋರ್ಟ್‌ ಮೊರೆ ಹೋಗಲಾಗಿತ್ತು. ರಾಜ್ಯ ಸರ್ಕಾರ ಫಲಿತಾಂಶವನ್ನು ತಡೆಹಿಡಿದಿರುವುದು ಅಧಿಕಾರದ ದುರುಪಯೋಗವಾಗಿದೆ. ಚುನಾವಣಾಧಿಕಾರಿ ಕೂಡಲೇ ಫಲಿತಾಂಶ ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಯಾರು? ಮೇ 15 ಕ್ಕೆ ಸಿದ್ದರಾಮಯ್ಯನವರ ಕಥೆ ಮುಗಿಯಿತು ಎಂದು ಡಿ.ಕೆ.ಶಿವಕುಮಾರ್‌ ತಂಡ ಹೇಳುತ್ತಿದೆ. ಆದರೆ ಮೂರು ವರ್ಷಗಳ ಸಂಭ್ರಮಾಚರಣೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ಹೇಳುತ್ತಿದ್ದಾರೆ. ಇದು ಮುಕ್ತಾಯದ ಸಮಾರಂಭವೂ ಆಗಿರಬಹುದು. ಇನ್ನೂ ಯಾರು ಸಿಎಂ ಎಂದು ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್‌ ಪಕ್ಷ ಒಡೆದು ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಮಲ್ಲಿಕಾರ್ಜುನ ಖರ್ಗೆ ಹೊಸ ಬಾಗಿಲು ತೆರೆದಿದ್ದಾರೆ. ಸಮಾವೇಶ ಮಾಡುವ ಮುನ್ನ ಯಾರ ನೇತೃತ್ವದಲ್ಲಿ ಮಾಡುತ್ತೇವೆಂದು ತಿಳಿಸಬೇಕಾಗುತ್ತದೆ ಎಂದರು.

ನೌಕರರಿಗೆ ಸಂಬಳವಿಲ್ಲದೆ ಮುಷ್ಕರ ನಡೆಯುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಗೃಹಲಕ್ಷ್ಮಿಯ 5,000 ಕೋಟಿ ರೂ. ಇನ್ನೂ ಕೊಟ್ಟಿಲ್ಲ. ಅನ್ನಭಾಗ್ಯದ 750 ಕೋಟಿ ರೂ. ಬಾಕಿ ಇದೆ. ಎಲ್ಲ ಕಡೆ ಬರಗಾಲವಿದ್ದು, ನೀರಿನ ಹಾಹಾಕಾರ ಕೇಳಿಬಂದಿದೆ. ಬೆಂಗಳೂರಿನಲ್ಲಿ ರಸ್ತೆಯ ಒಂದು ಗುಂಡಿ ಮುಚ್ಚಲು ಒಂದು ಲಕ್ಷ ರೂ. ಖರ್ಚು ಮಾಡಿದ್ದಾರೆ. ಬಿದ್ದಿರುವ ಮರ ಕೊಂಬೆಗಳನ್ನು ಇನ್ನೂ ತೆರವು ಮಾಡಿಲ್ಲ. ಬೌರಿಂಗ್‌ ಆಸ್ಪತ್ರೆಯ ಗೋಡೆ ಬಿದ್ದು ಏಳು ಮಂದಿಯ ಸಾವಾಗಿದೆ. ಅಂದಮೇಲೆ ಮೂರು ವರ್ಷದ ಸಾಧನೆ ಏನು? ಪಕ್ಷ ಮೂರು ಬಾಗಿಲು ಆಗಿರುವುದೇ ಮೂರು ವರ್ಷದ ಸಾಧನೆಯಾಗಿದೆ ಎಂದರು.

ಕ್ರೀಡಾಂಗಣವನ್ನು ಯುವಜನ ಸಬಲೀಕರಣ ಇಲಾಖೆ ನಿರ್ಮಿಸುತ್ತದೆ. ಬಿಡಿಎ ಮಾತ್ರ ನಿವೇಶನ ನಿರ್ಮಿಸುತ್ತದೆ. ಗೃಹಮಂಡಳಿ ಮನೆಗಳನ್ನು ನಿರ್ಮಿಸಬೇಕು. ಬಹುಶಃ ಕಮಿಶನ್‌ ಹೊಡೆಯಲು ಗೃಹಮಂಡಳಿ ಕ್ರೀಡಾಂಗಣ ನಿರ್ಮಿಸುತ್ತಿರಬಹುದು. ವಿಧಾನಸೌಧಕ್ಕೆ ಯಾವುದೇ ಸಚಿವರು ಬರುತ್ತಿಲ್ಲ. ಆದ್ದರಿಂದ 86 ಸಾವಿತ ಕಡತಗಳು ಬಾಕಿ ಉಳಿದಿವೆ. ಸಂಭ್ರಮಾಚರಣೆಯ ಸಮಾವೇಶದಲ್ಲಿ ಈ ಕಡತಗಳನ್ನು ಜೋಡಿಸಿ ಪ್ರದರ್ಶನ ಮಾಡಲಿ ಎಂದರು.

ಎಲ್ಲ ರಾಜ್ಯಗಳಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದೆ. ಕೇರಳಂನಲ್ಲಿ ಬಿಜೆಪಿ ಖಾತೆ ತೆರೆಯಲಿದೆ. ತಮಿಳುನಾಡಲ್ಲೂ ಹೆಜ್ಜೆ ಗುರುತು ಮೂಡಲಿದೆ. ಚುನಾವಣಾ ಸಮೀಕ್ಷೆಗಳಲ್ಲಿ ಬಿಜೆಪಿ ಪರ ಫಲಿತಾಂಶ ಬಂದಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Monsoon 2026: ಸಿಹಿಸುದ್ದಿ.. ಅವಧಿಗಿಂತ ಮೊದಲೇ ಅಪ್ಪಳಿಸಲಿದೆ ಮುಂಗಾರು ಮಳೆ; ಅಂಡಮಾನ್ ಮತ್ತು ಕೇರಳಕ್ಕೆ ಶೀಘ್ರ ಆಗಮನ: IMD

ಸಾಮೂಹಿಕ ವಿವಾಹ ಕಾರ್ಯಕ್ರಮದ ವೇದಿಕೆ ಬಳಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ: ಡಿಸಿಎಂ ಡಿಕೆ ಶಿವಕುಮಾರ್ ಪಾರು

ಜೈಲಿನಲ್ಲಿ ಸಹ-ಕೈದಿಗಳಿಂದ ಬೆದರಿಕೆ, ಬೈಗುಳ, ಕಿರುಕುಳ: ಸುಪ್ರೀಂ ಬಳಿ ಕಷ್ಟ ಹೇಳಿಕೊಂಡ Actor Darshan

IPL 2026: ವೈಭವ್ ಸೂರ್ಯವಂಶಿ Unprofessional, ವಿವಾದಾತ್ಮಕ ಹೇಳಿಕೆ ಕುರಿತು ಸ್ಪಷ್ಟನೆ ಕೊಟ್ಟ RCB ಸ್ಟಾರ್ ಆಟಗಾರ Jitesh Sharma

ಅಕ್ಕನ ಮಗನೊಂದಿಗೆ ಪತ್ನಿ ಅಕ್ರಮ ಸಂಬಂಧ; ಬೇಸತ್ತ ಪತಿ ಮಕ್ಕಳ ಕೊಂದು ತಾನೂ ಆತ್ಮಹತ್ಯೆಗೆ ಶರಣು!

SCROLL FOR NEXT