ಯು ಟಿ ಖಾದರ್ 
ರಾಜಕೀಯ

ಪಕ್ಷಾಂತರ ಮಾಡಿದರೆ ಸಚಿವ ಸ್ಥಾನ, ಮತದಾನ ಹಕ್ಕು ಕೂಡ ನಿರಾಕರಣೆ? ಕಠಿಣ ನಿಯಮ ಜಾರಿಗೆ ಪಕ್ಷಾಂತರ ವಿರೋಧಿ ಸಮಿತಿ ಚಿಂತನೆ

ಈ ಸಮಿತಿಗೆ ರಾಹುಲ್ ನರ್ವೇಕರ್ ಅಧ್ಯಕ್ಷತೆ ವಹಿಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಫೆಬ್ರವರಿಯಲ್ಲಿ ರಚಿಸಲಾಗಿತ್ತು. ಯು ಟಿ ಖಾದರ್ ಅವರೊಂದಿಗೆ ಸುರಮ ಪಾದಿ ಹಾಗೂ ಶರಿಂಗೈನ್ ಲಾಂಗ್ ಕುಮೆರ್ ಸಮಿತಿಯ ಸದಸ್ಯರಾಗಿದ್ದಾರೆ.

ಬೆಂಗಳೂರು: ಪಕ್ಷಗಳಿಂದ ಹೊರಹೋಗುವ ಅಥವಾ ಪಕ್ಷಾಂತರ ಮಾಡುವ ಶಾಸಕರ ವಿರುದ್ಧ ಶೀಘ್ರದಲ್ಲೇ ಇನ್ನಷ್ಟು ಕಠಿಣ ಕ್ರಮಗಳು ಜಾರಿಯಾಗುವ ಸಾಧ್ಯತೆ ಇದೆ. ಅವಿಶ್ವಾಸ ನಿರ್ಣಯದ ವೇಳೆ ಮತದಾನದ ಹಕ್ಕು ಕಳೆದುಕೊಳ್ಳುವುದು ಹಾಗೂ ಸಚಿವ ಸ್ಥಾನ ಸೇರಿದಂತೆ ಲಾಭದಾಯಕ ಸರ್ಕಾರಿ ಹುದ್ದೆಗಳನ್ನು ವಹಿಸುವುದರಿಂದ ಅನರ್ಹಗೊಳ್ಳುವಂತಹ ಶಿಕ್ಷೆಗಳು ವಿಧಿಸುವ ಬಗ್ಗೆ ರಾಷ್ಟ್ರೀಯ ಮಟ್ಟದ ಸಮಿತಿ ಚರ್ಚೆ ನಡೆಸುತ್ತಿದೆ.

ಸಂವಿಧಾನದ 10ನೇ ಅನುಸೂಚನೆ (ಪಕ್ಷಾಂತರ ನಿಷೇಧ ಕಾನೂನು) ಕುರಿತ ಸುಧಾರಣೆಗಳನ್ನು ಪರಿಶೀಲಿಸುತ್ತಿರುವ ಸಮಿತಿ ಜೂನ್‌ ತಿಂಗಳಲ್ಲಿ ರಾಜ್ಯದಲ್ಲಿ ಅಂತಿಮ ಸಭೆ ನಡೆಸಿ ತನ್ನ ವರದಿಯನ್ನು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರಿಗೆ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.

ಈ ಸಮಿತಿಗೆ ರಾಹುಲ್ ನರ್ವೇಕರ್ ಅಧ್ಯಕ್ಷತೆ ವಹಿಸಿದ್ದು, ಪಕ್ಷಾಂತರ ನಿಷೇಧ ಕಾಯ್ದೆಯನ್ನು ಬಲಪಡಿಸಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ಫೆಬ್ರವರಿಯಲ್ಲಿ ರಚಿಸಲಾಗಿತ್ತು. ಯು ಟಿ ಖಾದರ್ ಅವರೊಂದಿಗೆ ಸುರಮ ಪಾದಿ ಹಾಗೂ ಶರಿಂಗೈನ್ ಲಾಂಗ್ ಕುಮೆರ್ ಸಮಿತಿಯ ಸದಸ್ಯರಾಗಿದ್ದಾರೆ.

ಈ ಹಿಂದೆ ಮುಂಬೈ ಮತ್ತು ಪುರಿಯಲ್ಲಿ ನಡೆದ ಸಭೆಗಳಲ್ಲಿ ಪ್ರಮುಖವಾಗಿ ಚರ್ಚಿಸಲಾದ ಪ್ರಸ್ತಾವನೆಗಳಲ್ಲಿ, ಪಕ್ಷಾಂತರ ಮಾಡಿದ ಶಾಸಕರಿಗೆ ಅವಿಶ್ವಾಸ ನಿರ್ಣಯದ ವೇಳೆ ಮತದಾನದ ಹಕ್ಕು ನಿರಾಕರಿಸುವುದು ಪ್ರಮುಖವಾಗಿದೆ. ರಾಜಕೀಯ ಪಕ್ಷಾಂತರಗಳ ಮೂಲಕ ಸರ್ಕಾರಗಳನ್ನು ಉರುಳಿಸುವ ಪ್ರಯತ್ನಗಳನ್ನು ತಡೆಯುವ ಉದ್ದೇಶ ಇದಾಗಿದೆ.

ಇದರ ಜೊತೆಗೆ, ಪಕ್ಷಾಂತರ ಮಾಡಿದವರು ಹೊಸ ಸರ್ಕಾರದಲ್ಲಿ ಸಚಿವರಾಗುವುದು, ಮಂಡಳಿ ಮತ್ತು ನಿಗಮಗಳ ಅಧ್ಯಕ್ಷರಾಗುವುದು ಅಥವಾ ಯಾವುದೇ ಲಾಭದಾಯಕ ಹುದ್ದೆ ವಹಿಸುವುದನ್ನು ನಿಷೇಧಿಸುವ ಪ್ರಸ್ತಾವನೆಯೂ ಪರಿಗಣನೆಯಲ್ಲಿದೆ.

ಇನ್ನೊಂದು ಮಹತ್ವದ ಸುಧಾರಣೆಯಾಗಿ, ಪಕ್ಷ ವಿಭಜನೆಯ ಸಂದರ್ಭದಲ್ಲಿ ನಿಜವಾದ ರಾಜಕೀಯ ಪಕ್ಷ ಯಾವುದು ಎಂಬ ವಿವಾದಗಳನ್ನು ತೀರ್ಮಾನಿಸಲು ಪ್ರತ್ಯೇಕ ನ್ಯಾಯಮಂಡಳಿ ರಚಿಸುವ ಕುರಿತು ಚರ್ಚೆ ನಡೆಯುತ್ತಿದೆ. ಇದರಿಂದ ವಿಧಾನಸಭಾಧ್ಯಕ್ಷರ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಶಾಸಕರಿಗೆ ಬಾದ್ಯತೆಯ ನಿರ್ದೇಶನ ನೀಡುವಲ್ಲಿ ಪಕ್ಷದ ವಿಪ್ ಮತ್ತು ವಿಧಾನಮಂಡಲ ಪಕ್ಷದ ಮುಖ್ಯ ವಿಪ್‌ಗಳ ಅಧಿಕಾರದ ಬಗ್ಗೆ ಸ್ಪಷ್ಟತೆ ತರಬೇಕೆಂಬ ವಿಚಾರವನ್ನೂ ಸಮಿತಿ ಪರಿಶೀಲಿಸುತ್ತಿದೆ.

ಅನರ್ಹತಾ ಅರ್ಜಿಗಳ ತೀರ್ಮಾನದಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸಲು, ಪಕ್ಷಾಂತರ ಮಾಡಿದ ಸದಸ್ಯರ ವಿರುದ್ಧದ ಅರ್ಜಿಗಳನ್ನು ತೀರ್ಮಾನಿಸಲು ಕಾನೂನುಬದ್ಧ ಸಮಯ ಮಿತಿಯನ್ನು ನಿಗದಿಪಡಿಸುವ ಸಾಧ್ಯತೆಯನ್ನೂ ಸಮಿತಿ ಪರಿಶೀಲಿಸುತ್ತಿದೆ.

ಈ ಪ್ರಕ್ರಿಯೆ ವರ್ಷಗಳ ಕಾಲ ಸಾಗುತ್ತದೆ. ಇದನ್ನು ಮೂರರಿಂದ ಆರು ತಿಂಗಳೊಳಗೆ ಮುಗಿಸುವಂತೆ ನಿಗದಿ ಮಾಡಲು ಆಶಿಸುತ್ತಿದ್ದೇವೆ ಎಂದು ಯು ಟಿ ಖಾದರ್ ಹೇಳಿದರು.

ಉತ್ತರ ಪ್ರದೇಶ ವಿಧಾನಸಭಾಧ್ಯಕ್ಷರ ನೇತೃತ್ವದ ‘ನಿಯಮಗಳು ಮತ್ತು ವಿಧಾನಗಳು’ ಕುರಿತ ಮತ್ತೊಂದು ಸಮಿತಿ ಮೇ 12 ಮತ್ತು 13ರಂದು ಮೈಸೂರಿನಲ್ಲಿ ಸಭೆ ನಡೆಸಲಿದೆ. ವಿವಿಧ ರಾಜ್ಯ ವಿಧಾನಸಭೆಗಳಲ್ಲಿ ಏಕರೂಪ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಈ ಸಮಿತಿ ಪರಿಶೀಲಿಸಲಿದೆ.

ಈ ಸಮಿತಿಯಲ್ಲಿ ಹಿಮಾಚಲ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ನಾಗಾಲ್ಯಾಂಡ್ ಮತ್ತು ದೆಹಲಿ ವಿಧಾನಸಭಾಧ್ಯಕ್ಷರು ಸದಸ್ಯರಾಗಿದ್ದಾರೆ.

ಪ್ರತಿ ರಾಜ್ಯದಲ್ಲೂ ವಿಭಿನ್ನ ನಿಯಮಗಳು ಮತ್ತು ವಿಧಾನಗಳಿದ್ದರೂ, ಸುಮಾರು 80 ಶೇಕಡಾ ನಿಯಮಗಳು ಒಂದೇ ರೀತಿಯವಾಗಿವೆ. ಉತ್ತಮ ಪದ್ಧತಿಗಳನ್ನು ಪರಿಶೀಲಿಸಿ ಸಾಮಾನ್ಯ ನಿಯಮಗಳು ಮತ್ತು ವಿಧಾನಗಳನ್ನು ಶಿಫಾರಸು ಮಾಡುತ್ತೇವೆ. ಆ ವರದಿಯನ್ನು ಆರು ತಿಂಗಳೊಳಗೆ ಸಲ್ಲಿಸಲಾಗುವುದು ಎಂದು ಯು ಟಿ ಖಾದರ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

TVK ಸರ್ಕಾರ ರಚನೆಯ ಕಸರತ್ತು: ಇಂದು ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್; ಗವರ್ನರ್ ಹೇಳಿದ್ದೇನು?

ಸುವೇಂದು ಅಧಿಕಾರಿ ಆಪ್ತನ ಹತ್ಯೆ ಬೆನ್ನಲ್ಲೇ ಆರ್ ಜಿ ಕರ್ ಸಂತ್ರಸ್ತೆ ತಾಯಿ ಮನೆ ಬಳಿ ಬಾಂಬ್ ದಾಳಿ; 5 ಬಿಜೆಪಿ ಕಾರ್ಯಕರ್ತರಿಗೆ ಗಾಯ

ಬೆಂಕಿಗೆ ತುಪ್ಪ ಸುರಿದ ಬಾಂಗ್ಲಾ ನಾಯಕ; ಬಂಗಾಳ ಪ್ರತ್ಯೇಕ ರಾಷ್ಟ್ರವೆಂದು ಘೋಷಿಸಿ, 17 ಕೋಟಿ ಮುಸ್ಲಿಮರು ನಿಮ್ಮ ಜತೆ ಇದ್ದಾರೆ: ಮಮತಾಗೆ ಆಗ್ರಹ

ಗುಂಡಿಟ್ಟು ಸುವೇಂದು ಅಧಿಕಾರಿ ಆಪ್ತನ ಹತ್ಯೆ: CCTV ಪರಿಶೀಲನೆ; ಆರೋಪಿಗಳಿಗಾಗಿ ಪೊಲೀಸರ ತೀವ್ರ ಶೋಧ, ಉತ್ತರ 24 ಪರಗಣದಲ್ಲಿ ಪರಿಸ್ಥಿತಿ ಉದ್ವಿಗ್ನತೆ

ಆಪರೇಷನ್ ಸಿಂದೂರ್‌ಗೆ ಒಂದು ವರ್ಷ; ಪ್ರಧಾನಿ ಮೋದಿಯ ಸಾಮಾಜಿಕ ಮಾಧ್ಯಮ ಖಾತೆಯ DP ಚೇಂಜ್

SCROLL FOR NEXT