ಬೆಂಗಳೂರು: ಕರ್ನಾಟಕದಲ್ಲಿ ಜನರ ಭಾವನೆಗಳನ್ನು ಗುರುತಿಸಲಾಗದಷ್ಟು ಬಿಜೆಪಿ ಹೈಕಮಾಂಡ್ ದುರ್ಬಲವಾಗಿದೆ ಎಂದು ನನಗನ್ನಿಸುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿ ವೈ ವಿಜಯೇಂದ್ರ ಅವರನ್ನು ತೆಗೆದುಹಾಕಿ ಹಿಂದುತ್ವ, ಅಭಿವೃದ್ಧಿಪರ ಕೆಲಸ ಮಾಡುವ ಬೇರೆ ನಾಯಕರಿಗೆ ನಾಯಕತ್ವ ನೀಡಿದರೆ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ, ಇದೇ ಯಡಿಯೂರಪ್ಪ, ವಿಜಯೇಂದ್ರ ಅವರೇ ಮುಂದುವರಿದರೆ ಬಿಜೆಪಿ ಕರ್ನಾಟಕದಲ್ಲಿ ಮತ್ತೆ ಮಣ್ಣುಮುಕ್ಕುತ್ತದೆ ಎಂದರು.
ಯಡಿಯೂರಪ್ಪನವರ ಕುಟುಂಬದಲ್ಲಿ ಮತ್ತೆ ಮೂವರು ರಾಜಕೀಯಕ್ಕೆ ಬರಲು ತಯಾರಾಗಿದ್ದಾರೆ, ಬಿ ವೈ ರಾಘವೇಂದ್ರ ಪುತ್ರ ಯುವ ಮೋರ್ಚಾ ಅಧ್ಯಕ್ಷರಾಗಿದ್ದಾರೆ. ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಆಗಿದ್ದಾರೆ. ಇವರ ಕೊಡುಗೆ ರಾಜ್ಯಕ್ಕೆ ಏನಿದೆ ಎಂದು ಕೇಳಿದರು.
ಚಿತ್ರದುರ್ಗದಲ್ಲಿ ಬಿಜೆಪಿ ಅಭಿಮಾನೋತ್ಸವದ ಅವಶ್ಯಕತೆ ಏನಿತ್ತು, ಪಕ್ಷದ ಹಿರಿಯ ನಾಯಕರಾದ ಎ ಹೆಚ್ ವಿಶ್ವನಾಥ್ ಅಂಥವರೇ ಹೇಳಿದ್ದಾರೆ,ಅವರು ಒಂದು ಸಮುದಾಯದ ಪ್ರಮುಖ ನಾಯಕರು ಇಂಥದ್ದನ್ನೆಲ್ಲಾ ಕೇಂದ್ರ ನಾಯಕರು ತಿಳಿದುಕೊಳ್ಳಬೇಕು, ಮೋದಿಯವರು ವಂಶ ರಾಜಕಾರಣ ಬೇಡ, ಕುಟುಂಬ ರಾಜಕಾರಣ ನಮ್ಮಲ್ಲಿ ಇಲ್ಲ, ಭ್ರಷ್ಟಾಚಾರ ಇಲ್ಲ ಎನ್ನುತ್ತಾರೆ, ಹಾಗಾದರೆ ಕರ್ನಾಟಕ ಬಿಜೆಪಿಯೊಳಗೆ ನಡೆಯುತ್ತಿರುವುದೇನು ಎಂದರು.
ಕರ್ನಾಟಕದಲ್ಲಿ ಭ್ರಷ್ಟ ಕುಟುಂಬವನ್ನು ಮುಕ್ತ ಮಾಡಿದರೆ ಬಿಜೆಪಿ 350 ಸೀಟು ಬರುತ್ತದೆ, ಯಡಿಯೂರಪ್ಪ ಆಪರೇಷನ್ ಕಮಲ ಮಾಡಿದರು, 30-50 ಕೋಟಿ ಕೊಟ್ಟರು, ಉಪ ಚುನಾವಣೆ ಆಯಿತು, ಬಾಗಲಕೋಟೆ, ಎಲೆಕ್ಷನ್ ಜನರ ತೀರ್ಪು ಅಲ್ಲ, ಬಾಗಲಕೋಟೆಯಲ್ಲಿ ಜಾತಿ ಆಧಾರ ಮೇಲೆ ಲಿಂಗಾಯಿತರಿಗೆ, ಬ್ರಾಹ್ಮಣರಿಗೆ 10 ಸಾವಿರ ಕೊಟ್ಟರು. ಹಿಂದುಳಿದ ವರ್ಗದವರಿಗೆ 5 ಸಾವಿರ ಕೊಟ್ಟರು, ಒಂದು ಬೂತ್ ಗೆ 25 ಲಕ್ಷ ಹಂಚಿದ್ದಾರೆ ಎಂದು ಆರೋಪಿಸಿದರು.
ಅಪ್ಪ-ಮಗನಿಗೆ ಮಲ್ಲಿಕಾರ್ಜುನ ಖರ್ಗೆ-ಪ್ರಿಯಾಂಕ್ ಖರ್ಗೆ ಅಪ್ಪ-ಮಗನ ವಿರುದ್ಧ ಮಾತನಾಡುವ ಧೈರ್ಯವಿಲ್ಲ, ಉಪ ಚುನಾವಣೆಯಲ್ಲಿ ಸೋತರೂ ಸ್ವಲ್ಪವೂ ದುಃಖಪಡದೆ ಬಿಜೆಪಿ ಆಫೀಸಲ್ಲಿ ಪಶ್ಚಿಮ ಬಂಗಾಳ ಎಲೆಕ್ಷನ್ ಗೆದ್ದ ಸಂಭ್ರಮಾಚರಣೆ ಮಾಡಿದರು.
ಬೇರೆ ರಾಜ್ಯಗಳಲ್ಲಿ ಹಲವು ಬಿಜೆಪಿ ಮುಖ್ಯಮಂತ್ರಿಗಳಿದ್ದಾರೆ, ಯಾರಾದರೂ ಈ ರೀತಿ ಸಂಭ್ರಮಾಚರಣೆ ಮಾಡುತ್ತಾರೆ ಹೇಳಿ, ರಾಜ್ಯಾಧ್ಯಕ್ಷ ಬದಲಾವಣೆ ಆಗುತ್ತದೆ ಎಂದು ಅವರಿಗೆ ಖಚಿತವಾಗಿದೆ, ಹೀಗಾಗಿ ಯಡಿಯೂರಪ್ಪ ಸಂಭ್ರಮಾಚರಣೆ ಮಾಡುತ್ತಾರೆ, ನಮ್ಮ ಹಿಂದೆ ಲಿಂಗಾಯತರಿದ್ದಾರೆ ಎಂದು ತೋರಿಸಿಕೊಳ್ಳಲು ಹೈಕಮಾಂಡ್ ಮುಂದೆ ಬ್ಲಾಕ್ ಮೇಲ್ ಮಾಡಲು ಈ ಅಭಿಮಾನೋತ್ಸವ ಮಾಡುತ್ತಿದ್ದಾರೆ ವಿಜಯೇಂದ್ರಗೆ ಧಮ್ ಇಲ್ಲ, ವಿಧಾನಸೌಧದೊಳಗೆ ರೈತರ ಬಗ್ಗೆ, ರಾಜ್ಯದ ಜನತೆ ಬಗ್ಗೆ ಮಾತನಾಡಿದ್ದಾರೆಯೇ ಎಂದು ಟೀಕಿಸಿದರು.
ಕರ್ನಾಟಕದಲ್ಲಿ ಡಿ ಕೆ ಶಿವಕುಮಾರ್ ಸಿಎಂ ಆದರೆ 10 ಸಲ ಮಾರಾಟ ಮಾಡುತ್ತಾರೆ, ಡಿ ಕೆ ಶಿವಕುಮಾರ್ ದೊಡ್ಡ ರಾಕ್ಷಸ ಇದ್ದಂತೆ ಎಂದರು.