ಬೆಂಗಳೂರು: ಅಧಿಕಾರ ಹಸ್ತಾಂತರ ಚರ್ಚೆ ಜೀವಂತವಾಗಿರುವ ಮಧ್ಯೆ ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಮೂರು ವರ್ಷಗಳ ಆಡಳಿತದ ಸಾಧನಾ ಸಮಾವೇಶವನ್ನು ಇಂದು ಕಲ್ಪತರು ನಾಡು ತುಮಕೂರಿನಲ್ಲಿ ಹಮ್ಮಿಕೊಂಡಿದ್ದು, ಈ ಸಂದರ್ಭದಲ್ಲಿ ಇಂದು ಬೆಳಗ್ಗೆಯೇ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಕರ್ನಾಟಕ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 3 ವರ್ಷಗಳಾದ ದಿನವೇ ಡಿಸಿಎಂ ದೇವರ ದರ್ಶನ ಪಡೆದರು. ಡಿಕೆಶಿ ಆಪ್ತ, ಕುಣಿಗಲ್ ಶಾಸಕ ರಂಗನಾಥ್ ಕೂಡ ಜತೆಗಿದ್ದರು.
ಆರು ವರ್ಷಗಳ ನಂತರ, ತಿರುಪತಿ ಬಾಲಾಜಿಯ ದರ್ಶನವನ್ನು ಡಿಸಿಎಂ ಪಡೆದಿದ್ದಾರೆ. ಈ ಸಮಾವೇಶ ಹಲವು ಕಾರಣಕ್ಕೆ ಕುತೂಹಲಕ್ಕೆ ಕಾರಣವಾಗಿದೆ.ಹತ್ತು ವರ್ಷಗಳ ನಂತರ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದಿತ್ತು.
ವಿಡಿ ಸತೀಶನ್ ನೇತೃತ್ವದ ನೂತನ ಸರ್ಕಾರದ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಲು, ಡಿಕೆ ಶಿವಕುಮಾರ್ ತಿರುವನಂತಪುರಂಗೆ ತೆರಳಿದ್ದರು. ಅಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಈ ಕಾರ್ಯಕ್ರಮದ ಬೆನ್ನಲ್ಲೇ, ಡಿಕೆ ಶಿವಕುಮಾರ್ ದಂಪತಿ ಸಮೇತ ತಿರುಪತಿಗೆ ಪ್ರಯಾಣಿಸಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ತಿರುಪತಿಯಲ್ಲಿ ಟಿಟಿಡಿ ವ್ಯವಸ್ಥಾಪಕರು ಉತ್ತಮ ಕೆಲಸ ಮಾಡುತ್ತಿದ್ದಾರೆ, ಅಧಿಕಾರಿಗಳು ಆಡಳಿತದಲ್ಲಿ ಯೋಜನೆ ಜಾರಿಗೆ ಸಾಕಷ್ಟು ಸಹಕಾರ ನೀಡಿದ್ದಾರೆ. ಅನೇಕ ಬೆಳವಣಿಗೆಗಳು ನಡೆದಿವೆ ಎಂದರು.