ಬೆಂಗಳೂರು: ತುಮಕುರು ಜಿಲ್ಲೆ ತಿಪಟೂರಿನ ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳg, ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತರು. ಧಾರ್ಮಿಕತೆ, ದೇವರ ಮೇಲೆ ಅಪಾರ ನಂಬಿಕೆ ಇಟ್ಟಿರುವ ಡಿ ಕೆ ಶಿವಕುಮಾರ್ ಏನೇ ಶುಭಕಾರ್ಯ ಮಾಡುವುದಿದ್ದರೂ ಅವರ ಸಲಹೆ ಸೂಚನೆ ಕೇಳಿ ಅಭಿಪ್ರಾಯ ಪಡೆದು ಮುಂದುವರಿಯುತ್ತಾರೆ. ಅದೇ ರೀತಿ ಈಗ ಅವರು ಮುಖ್ಯಮಂತ್ರಿಯಾಗುತ್ತಿರುವ ಹೊತ್ತಿನಲ್ಲಿ ಶ್ರೀಗಳು ಕೆಲವೊಂದು ಜಾಗರೂಕತೆಯ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು, ಕಾಂಗ್ರೆಸ್ ಹೈಕಮಾಂಡ್ ದೆಹಲಿಗೆ ಕರೆಸಿದ್ದ ಸಂದರ್ಭದಲ್ಲಿ ಶಿವಯೋಗೀಶ್ವರ ಸ್ವಾಮೀಜಿಗಳು, ನೂರಕ್ಕೆ ನೂರು ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಪಕ್ಕಾ ಎಂದು ಹೇಳಿದ್ದರು. ಅವರ ಭವಿಷ್ಯ ನಿಜವಾಗುತ್ತಿದೆ, ಡಿ ಕೆ ಶಿವಕುಮಾರ್ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದಾರೆ. ಆದರೆ ಈಗ, ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಸಾಧ್ಯವಾದಷ್ಟು ಮೌನವಾಗಿ ಇರಬೇಕು, ಹೆಚ್ಚು ಮಾತನಾಡುವುದು ಬೇಡ ಎಂದು ಸಲಹೆ ನೀಡಿದ್ದಾರಂತೆ.
ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವವರೆಗೆ ಜಾಸ್ತಿ ಮಾತು ಬೇಡ
ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಯಾರ ಬಳಿಯೂ ಅವಶ್ಯಕತೆಗಿಂತ ಜಾಸ್ತಿ ಮಾತನಾಡದಂತೆ, ನೊಣವಿನಕೆರೆ ಶಿವಯೋಗೀಶ್ವರ ಶ್ರೀಗಳು ಸೂಚನೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಪದಗ್ರಹಣ ಆಗುವವರೆಗೆ ಹೆಚ್ಚು ಮಾತನಾಡಲು ಹೋಗಬೇಡಿ
ಸಿಎಂ ಪದಗ್ರಹಣ ಆಗುವವರೆಗೆ ಜಾಸ್ತಿ ಮಾತನಾಡಲು ಹೋಗಬೇಡಿ, ಕೆಲಸ ಕೆಡಲಿದೆ ಎನ್ನುವ ಎಚ್ಚರಿಕೆಯನ್ನು ನೊಣವಿನಕೆರೆ ಶಿವಯೋಗೀಶ್ವರ ಶ್ರೀಗಳು ನೀಡಿದ್ದಾರೆ. ಈ ಕಾರಣಕ್ಕಾಗಿ, ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್, ಬೆಂಬಲಿಗರಿಗೆ ಯಾವುದೇ ಹೇಳಿಕೆಯನ್ನು ನೀಡಬಾರದು ಎನ್ನುವ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದರು. ಸ್ವಾಮೀಜಿಗಳ ಎಚ್ಚರಿಕೆ ಬೆನ್ನಲ್ಲೇ, ಸಹೋದರರಿಬ್ಬರು ಸಾಧ್ಯವಾದಷ್ಟು ಮೌನಕ್ಕೆ ಶರಣಾಗಿದ್ದಾರಂತೆ.