ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಡಿ.ಕೆ ಶಿವಕುಮಾರ್ ಅವರ ನಿವಾಸಕ್ಕೆ ಮಾಜಿ ಸಚಿವರು, ಶಾಸಕರು ಮತ್ತು ಕಾರ್ಯಕರ್ತರ ದಂಡೇ ಹರಿದು ಬರುತ್ತಿದ್ದು, ಅವರಿಗೆ ಹೂವಿನ ಹಾರ ಹಾಕಿ ವಿಶ್ ಮಾಡುತ್ತಿದ್ದಾರೆ.
ಆದರೆ ನನಗೆ ಯಾರೂ ಹೂವಿನ ಹಾರ ಹಾಕ್ಬೇಡಿ ಎಂದು ನಿಯೋಜಿತ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ ಡಿಕೆ ಶಿವಕುಮಾರ್ ಅವರು, ಕಾರ್ಯಕರ್ತರ ಉತ್ಸಾಹ ಗೊತ್ತಾಗುತ್ತದೆ. ಬೇರೆ ಬೇರೆ ವಿಷಯಗಳು ಇರೋದ್ರಿಂದ ಹೆಚ್ಚು ಜನರನ್ನು ಪ್ರಮಾಣ ವಚನದ ವೇಳೆ ಕರೆಸಲು ಆಗತ್ತಿಲ್ಲ. ಹೊರಗಡೆ ಬಂದು ನೋಡಿದ್ರೂ ಅಭ್ಯಂತರ ಇಲ್ಲ. ಯಾರೂ ನನಗೆ ಹೂವಿನ ಹಾರ ಹಾಕ್ಬೇಡಿ ಎಂದು ಮನವಿ ಮಾಡಿದರು.
ನನಗೆ ಅಲರ್ಜಿ ಇದೆ. ಬೇರೆ ಹೂವಿನ ಹಾರ ಸುಂಗಧರಾಜ ಹೂವಿನ ಹಾರಕ್ಕೆ ತಾಗಿರುತ್ತದೆ. ಇದರಿಂದ ಕಡಿತ ಉಂಟಾಗುತ್ತದೆ. ಯಾವ ಹೂವಿನ ಹಾರವನ್ನೂ ತರಬೇಡಿ. ಅದನ್ನೆಲ್ಲ ನಿಷೇಧ ಮಾಡಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಸಿಎಂ ಆಗುತ್ತಿರೋದು ನಾನಲ್ಲ. ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಸಿಎಂ ಆಗ್ತಿರೋದು. ವಿದ್ಯಾರ್ಥಿ ದೇಸೆಯಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ ಎಂದರು.
ಇದೇ ವೇಳೆ, ನಾನು ಸಿದ್ದರಾಮಯ್ಯ ಇಬ್ಬರೂ ನಾಳೆ ದೆಹಲಿಗೆ ಹೋಗುತ್ತಿದ್ದೇವೆ ಎಂದು ಮಾಹಿತಿ ನೀಡಿದರು.