ರಾಮನಗರ: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ಟೂರಿಂಗ್ ಟಾಕೀಸ್ ಎಂದು ಟೀಕಿಸಿದ್ದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಮರಳವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೌರಾಡಳಿತ ಸಚಿವ ಹೆಚ್. ಸಿ. ಬಾಲಕೃಷ್ಣ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಸರಿಯಾಗಿ ಕೆಲಸ ಕೊಟ್ಟಿಲ್ಲ. ಹಾಗಾಗಿ ಇಲ್ಲಿಗೆ ಬಂದು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ. ಬೆಂಗಳೂರಿನಲ್ಲಿ ವಿಧಾನಸೌಧ ವಿದ್ದರೂ ಮತ್ತೆ ಬೆಳಗಾವಿಯಲ್ಲಿ ಯಾಕೆ ಸುವರ್ಣ ಸೌಧ ನಿರ್ಮಿಸಿದರು? ಅವರು ಮಾಡಿದೆಲ್ಲಾ ಸರಿಯಾಗಿ ಕಾಣಿಸುತ್ತೆ. ನಾವೇನಾದರೂ ಮಾಡಿದರೆ ಅವರು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಸ್ತಿಯಲ್ಲಿ ರೈತರ ಸಾಲ ಮನ್ನಾ ಮಾಡಲಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಅದರೊಂದಿಗೆ ಕುಮಾರಸ್ವಾಮಿ, ಅವರ ಪುತ್ರ ಹಾಗೂ ಅಣ್ಣನ ಆಸ್ತಿಯನ್ನು ಸೇರಿಸಿ ರೈತರ ಸಾಲ ಮನ್ನಾ ಮಾಡೋಣ ಎಂದರು.
ಜೆಡಿಎಸ್ ನವರೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಇನ್ನೂ ಸೆಪ್ಟೆಂಬರ್ 21 ರಿಂದ ಬಿಡದಿ ರೈತರ ಉಪವಾಸ ಸತ್ಯಾಗ್ರಹ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ರೈತರನ್ನು ಕರೆದು ಮಾತನಾಡಿ ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತೇನೆ. ಭೂ ಸ್ವಾಧೀನ ಪರಿಹಾರಕ್ಕೆ ನಕಲಿ ದಾಖಲೆ ಸೃಷ್ಟಿಸಿರುವ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಗೂ ಕೊಡೋಣ. ಜೆಡಿಎಸ್ ನವರೇ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದಾರೆ. ಅದರಲ್ಲಿ ನಮ್ಮ ಕಾಂಗ್ರೆಸ್ ಪಕ್ಷದವರು ಯಾರು ಇಲ್ಲ ಎಂದು ಹೇಳಿದರು.
ಅಶೋಕಣ್ಣ ಯೂಸ್ ಲೆಸ್ ಸ್ಟಾರ್ : ಇನ್ನೂ ಬಾಲಕೃಷ್ಣ ಜಂಪಿಂಗ್ ಸ್ಟಾರ್ ಎಂಬ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಅಭಿವೃದ್ಧಿಗಾಗಿ ಜಂಪ್ ಮಾಡಿದ್ದೇನೆ. ಅದರಲ್ಲಿ ತಪ್ಪೇನಿದೆ? ಅಶೋಕಣ್ಣನ ರೀತಿ ಲೇಜಿ ಸ್ಟಾರ್ ಮತ್ತು ಯೂಸ್ ಲೆಸ್ ಸ್ಟಾರ್ ಅಲ್ಲ ಎಂದು ವ್ಯಂಗ್ಯವಾಡಿದರು.