ನವದೆಹಲಿ: ಪೊದೆಯಲ್ಲಿರುವ ಎರಡಕ್ಕಿಂತ ಕೈಯಲ್ಲಿರುವ ಒಂದು ಮೇಲು ಎಂಬುದು ಗಾದೆ ಮಾತು. ದೇಶದಲ್ಲಿ ಕಪ್ಪು ಹಣ ಸಂಗ್ರಹ ಮತ್ತು ಭ್ರಷ್ಟಾಚಾರ ತಡೆಗಟ್ಟಲು ನೋಟುಗಳ ಅಮಾನ್ಯ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ.
ಆದರೆ ಸದ್ಯದ ಮಟ್ಟಿಗೆ ಎಟಿಎಂನಲ್ಲಿ ಕ್ಯೂ ನಿಲ್ಲುವುದರಿಂದಲೂ ಈ ವಿಷಯ ಮುಂದಕ್ಕೆ ಹೋಗಿದೆ. ಎಟಿಎಂಗಳಲ್ಲಿ ನಗದು ಕೊರತೆಯಿಂದ ಜನರು ನಗದು ರಹಿತ ಪೆಟಿಎಂನಂತಹ ವಹಿವಾಟು ಇ-ವ್ಯಾಲೆಟ್ ಮೂಲಕ ಹೆಚ್ಚೆಚ್ಚು ವಹಿವಾಟು ನಡೆಸುತ್ತಿದ್ದಾರೆ. ಆದರೆ ದಿನಗಳೆದಂತೆ ಡಿಜಿಟಲ್ ಸುರಕ್ಷತೆ ಸವಾಲಾಗುತ್ತಿದೆ. ಡಿಜಿಟಲ್ ಪಾವತಿ ಅಸುರಕ್ಷತೆಯಾಗಿ ಗ್ರಾಹಕರಿಗೆ ಕಾಡುತ್ತಿದೆ.
ಅಸ್ಸೊಚಮ್ ಮತ್ತು ಸಂಶೋಧನಾ ಸಂಸ್ಥೆ ಇವೈ ನಡೆಸಿದ ಜಂಟಿ ಅಧ್ಯಯನ ಪ್ರಕಾರ ಇತ್ತೀಚಿನ ದಿನಗಳಲ್ಲಿ ಶೇಕಡಾ 40ರಿಂದ 45ರಷ್ಟು ಹಣಕಾಸಿನ ವಹಿವಾಟು ಮೊಬೈಲ್ ಗಳ ಮೂಲಕ ಮಾಡುತ್ತಿರುವುದರಿಂದ ಮೊಬೈಲ್ ವಂಚನೆಗಳು ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಇದು ಶೇಕಡಾ 60ರಿಂದ 65ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತದೆ ಅಧ್ಯಯನ. ಸೈಬರ್ ಅಪರಾಧದ ವಿರುದ್ಧ ಹೋರಾಡಲು ರಾಷ್ಟ್ರೀಯ ಕ್ರಮಗಳ ಕಾರ್ಯತಂತ್ರ ಎಂಬ ಅಧ್ಯಯನವನ್ನು ಈ ಎರಡೂ ಸಂಸ್ಥೆಗಳು ನಡೆಸಿವೆ.
ಸುರಕ್ಷಿತ ಅಂತರ್ಜಾಲ ಮತ್ತು ಸೈಬರ್ ಅಪರಾಧ ತಡೆಗಟ್ಟಲು ಸರ್ಕಾರದ ಕ್ರಮಗಳು ಪ್ರಾಮುಖ್ಯವಾಗಿದ್ದು ಯಾವುದೇ ಪ್ರದೇಶದಲ್ಲಿ ವ್ಯವಹಾರ ಸ್ಥಾಪನೆಗೆ, ಕಾರ್ಯನಿರ್ವಹಣೆಗೆ ಅಗತ್ಯವಾಗಿದೆ.
ಸೈಬರ್ ಅಪರಾಧಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡುಗಳ ಮೋಸ ಉನ್ನತ ಸ್ಥಾನದಲ್ಲಿದ್ದು ಕಳೆದ ಮೂರು ವರ್ಷಗಳಲ್ಲಿ 6 ಪಟ್ಟು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಆನ್ ಲೈನ್ ವಹಿವಾಟು ಹೆಚ್ಚು ನಡೆಸುತ್ತಿರುವಾಗ ಮೊಬೈಲ್ ಅಪರಾಧಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತವೆ.
ಆನ್ ಲೈನ್ ಬ್ಯಾಂಕಿಂಗ್ ನ ಶೇಕಡಾ 46ರಷ್ಟು ದೂರುಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡುಗಳಿಗೆ ಸಂಬಂಧಪಟ್ಟ ದೂರುಗಳು ಹೆಚ್ಚಾಗಿವೆ. ನಂತರ ಶೇಕಡಾ 39ರಷ್ಟು ಫೇಸ್ ಬುಕ್ ಗೆ ಸಂಬಂಧಪಟ್ಟ ದೂರುಗಳು ಇವೆ. ಮೊಬೈಲ್ ಮೂಲಕ ಮೋಸ ಮಾಡುವವರ ಪ್ರಮಾಣ ಶೇಕಡಾ 21ರಷ್ಟು, ಇಮೇಲ್ ಹ್ಯಾಕಿಂಗ್ ಶೇಕಡಾ 18, ಅಶ್ಲೀಲಕರ, ನಿಂದನೆ ಕರೆಗಳು ಮತ್ತು ಎಸ್ಎಂಎಸ್ ಶೇಕಡಾ 12ರಷ್ಟಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.