ವಿಶೇಷ

ಛತ್ತೀಸ್ ಗಢದ ಈ ಶಾಲೆಯಲ್ಲಿ ಮಧ್ಯಾಹ್ನದ ಊಟಕ್ಕೆ ಮಕ್ಕಳ ಅಪ್ಪಂದಿರಿಂದ ಕೃಷಿ ಉತ್ಪನ್ನ, ಅಮ್ಮಂದಿರಿಂದ ಅಡುಗೆ!

Lingaraj Badiger

ರಾಯಪುರ್: ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟಕ್ಕೆ ಮಕ್ಕಳಿಗೆ ಕಳಪೆ ಗುಣಮಟ್ಟದ ಆಹಾರ ನೀಡುವುದು ಸಾಮಾನ್ಯ. ಆದರೆ ಛತ್ತೀಸ್ ಗಢದ ಬುಡಕಟ್ಟು ಪ್ರದೇಶದ ಈ ಖಾಸಗಿ ಶಾಲೆಯಲ್ಲಿ ಮಕ್ಕಳ ಅಪ್ಪಂದಿರೇ ಬಿಸಿ ಊಟಕ್ಕೆ ತಾಜಾ ಕೃಷಿ ಉತ್ನನ್ನಗಳನ್ನು ಪೂರೈಸಿದರೆ ಅವರ ಅಮ್ಮಂದಿರೆ ಅಡುಗೆ ಮಾಡಿ ಬಡಿಸುತ್ತಾರೆ.

ಅಂಬಿಕಾಪುರ್ ಜಿಲ್ಲಾ ಕೇಂದ್ರದಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಸಲಹಿ ಗ್ರಾಮದಲ್ಲಿ ಪೋಷಕರೇ ಶಾಲೆಯಲ್ಲಿ ಓದುತ್ತಿರುವ ತಮ್ಮ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಸಿದ್ಧಪಡಿಸುತ್ತಾರೆ.

ಅದಾನಿ ವಿದ್ಯಾಮಂದಿರ ಶಾಲೆಯಲ್ಲಿ ಸಿಬ್ಬಂದಿ ಸೇರಿದಂತೆ ಒಟ್ಟು 750 ಜನರಿಗೆ ಮಧ್ಯಾಹ್ನದ ಬಿಸಿ ಊಟ ಸಿದ್ಧಪಡಿಸಲಾಗುತ್ತಿದ್ದು, ಅಡಿಗೆ ಮಾಡುವುದಕ್ಕೆ ಅದಕ್ಕೆ ಆಹಾರ ಪದಾರ್ಥಗಳನ್ನು ಪೂರೈಸುವುದಕ್ಕೆ ಯಾವುದೇ ವ್ಯಾಪಾರಿ ಅಥವಾ ಗುತ್ತಿಗೆದಾರರಿಗೆ ನೀಡಿಲ್ಲ. ಅದಕ್ಕಾಗಿ ಗ್ರಾಮದ ಮಹಿಳೆಯರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯ 12 ಮಹಿಳೆಯರು ಆಹಾರ ಪದರ್ಥಗಳನ್ನು ಸಂಗ್ರಹಿಸಿ, ತಯಾರಿಸಿ, ಬಡಿಸುತ್ತಾರೆ.

ಈ ತಾಯಂದಿರು ಸಿದ್ಧಪಡಿಸುವ ಆಹಾರ ಮನೆ ಊಟದಂತೆ ಇರುತ್ತದೆ. ಸಾವಯವ ಕೃಷಿಯಲ್ಲಿ ತೊಡಗಿರುವ ಮಕ್ಕಳ ಅಪ್ಪಂದಿರು ಮಧ್ಯಾಹ್ನದ ಬಿಸಿ ಊಟಕ್ಕೆ ಅಕ್ಕಿ, ಗೋದಿ ಹಾಗೂ ತರಕಾರಿಗಳನ್ನು ಪೂರೈಸುತ್ತಾರೆ. ಮಸಾಲೆ ಪದಾರ್ಥಗಳನ್ನು  ಸ್ಥಳೀಯ ಸ್ವ-ಸಹಾಯ ಸಂಘ, ಮಹಿಳಾ ಉದ್ಯಮಿ ಬಹುದ್ದೇಶಿ ಸಹಕಾರಿ ಸಮಿತಿಯಿಂದ ಖರೀದಿಸಲಾಗುತ್ತದೆ. ಈ ಮೂಲಕ ಮಹಿಳಾ ಸಬಲೀಕರಣಕ್ಕೂ ಉತ್ತೇಜನ ನೀಡಲಾಗುತ್ತಿದೆ ಎಂದು ಗ್ರಾಮದ ನಿವಾಸಿ ವೇದಮತಿ ಅವರು ಹೇಳುತ್ತಾರೆ.

ಈ ಶಾಲೆಯಲ್ಲಿ ಮಕ್ಕಳಿಗೆ ಬೆಳಗಿನ ಉಪಹಾರವನ್ನು ನೀಡಲಾಗುತ್ತಿದೆ. ಉಪಹಾರಕ್ಕೆ ಅಲ್ವಾ, ಪೋಹಾ, ಉಪ್ಪಿಟ್ಟು ಮತ್ತು ಹಾಲನ್ನು ನೀಡಲಾಗುತ್ತದೆ. ವಿಶೇಷ ದಿನಗಳಲ್ಲಿ ಮಕ್ಕಳು ಕೇಳಿದನ್ನು ಮಾಡಿಕೊಡಲಾಗುತ್ತದೆ.

2013ರಿಂದ ಈ ಬಿಸಿ ಊಟ ನೀಡಲಾಗುತ್ತಿದ್ದು, ಗುಣಮಟ್ಟ ಮತ್ತು ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಗುಣಮಟ್ಟದ ಮತ್ತು ಪೌಷ್ಟಿಕ ಆಹಾರ ನೀಡುತ್ತಿರುವುದರಿಂದ ಮಕ್ಕಳ ಆರೋಗ್ಯವು ಉತ್ತಮಗೊಳ್ಳುತ್ತಿದೆ. ಅಲ್ಲದೆ ಪೌಷ್ಠಿಕ ಆಹಾರದ ಬಗ್ಗೆ ಗ್ರಾಮಸ್ಥರಲ್ಲಿ ಜಾಗೃತಿ ಕೂಡ ವೇಗವಾಗಿ ಹರಡುತ್ತಿದೆ ”ಎಂದು ಶಾಲೆಯ ಪ್ರಾಂಶುಪಾಲರಾದ ರಜನಿಕಾಂತ್ ಶರ್ಮಾ ಹೇಳಿದ್ದಾರೆ.
 

SCROLL FOR NEXT