ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ರಕ್ಷಣೆ
ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ರಕ್ಷಣೆ 
ವಿಶೇಷ

ಕೊಳವೆ ಬಾವಿಗೆ ಬಿದ್ದಿದ್ದ ಸಾತ್ವಿಕ್ ಜೀವ ಉಳಿಸಿದ್ದು ಈ ನಾಲ್ಕು 'ನಿರ್ಣಾಯಕ ಅಂಶಗಳು': ವೈದ್ಯರ ಅಚ್ಚರಿಯ ವಿವರಣೆ

Srinivasamurthy VN

ವಿಜಯಪುರ: ಕೊಳವೆ ಬಾವಿಗೆ ಬಿದ್ದು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದ 15 ತಿಂಗಳ ಮಗು ಸಾತ್ವಿಕ್ ಮುಜಗೊಂಡ ಜೀವ ಉಳಿಸಿದ್ದು 4 ವೈದ್ಯಕೀಯ ಅಂಶಗಳು ಎಂದು ವೈದ್ಯರು ಹೇಳಿದ್ದಾರೆ.

ಬೋರ್ವೆಲ್ ಗೆ ಬಿದ್ದಿದ್ದ 15 ತಿಂಗಳ ಮಗು ಸಾತ್ವಿಕ್ ಮುಜಗೊಂಡ್ ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿದ್ದರೂ, ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಗು ಬದುಕಲು ಬೇಕಾದ ಎಲ್ಲ ಅಂಶಗಳನ್ನು ಪೂರೈಸಿದ ರೀತಿ ಅಚ್ಚರಿ ಮೂಡಿಸಿದೆ ಎಂದು ವೈದ್ಯರು ಒಪ್ಪಿಕೊಂಡಿದ್ದಾರೆ.

2 ದಿನಗಳ ಹಿಂದಷ್ಟೇ ಕೊರೆಸಲಾಗಿದ್ದ ಕೊಳವೆ ಬಾವಿಯಲ್ಲಿ 15 ತಿಂಗಳ ಮಗು ಸಾತ್ವಿಕ್ ಆಟವಾಡುತ್ತಾ ಹೋಗಿ ತಲೆ ಕೆಳಗಾಗಿ ಬಿದ್ದಿತ್ತು. ಬಳಿಕ ಸತತ 21 ಗಂಟೆಗಳ ನಿರಂತರ ಕಾರ್ಯಾಚರಣೆ ಬಳಿಕ ರಕ್ಷಿಸಲಾಯಿತು. ಅದಾಗ್ಯೂ ಈ 21 ಗಂಟೆಗಳ ಕಾಲ ಈ ಪುಟ್ಟ ಮಗು ಬದುಕುಳಿದ ಪರಿಸ್ಥಿತಿಗಳ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಹೆಸರಾಂತ ಮಕ್ಕಳ ವೈದ್ಯರಾದ ಡಾ ಮಲ್ಲನಗೌಡ ಪಾಟೀಲ್ ಮತ್ತು ಡಾ ಮುಜಾಹಿದ್ ಬಗ್ವಾನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ವೈದ್ಯಕೀಯ ಲೋಕದ ಪ್ರಕಾರ ಈ ಪ್ರಕರಣದಲ್ಲಿ ಮಗುವನ್ನು ಉಳಿಸಲು ನಾಲ್ಕು ನಿರ್ಣಾಯಕ ಅಂಶಗಳು ನೆರವಾಗಿವೆ. ಅವುಗಳೆಂದರೆ...

  • ಸಾಕಷ್ಟು ಮತ್ತು ಸಮಯೋಚಿತ ಆಮ್ಲಜನಕ ಪೂರೈಕೆ

  • ಬಿದ್ದ ನಂತರ ಬಾಲಕನ ಸ್ಥಾನ

  • ಬಾಲಕನ ತಲೆ ಅಥವಾ ಪಕ್ಕೆಲುಬಿನ ಮೇಲೆ ಯಾವುದೇ ಆಂತರಿಕ ಗಾಯಗಳಾಗದೇ ಇರುವುದು

  • ರಕ್ಷಣಾ ಕಾರ್ಯಾಚರಣೆಯನ್ನು 30 ಗಂಟೆಗಳ ಒಳಗೆ ಪೂರ್ಣಗೊಳಿಸಿರುವುದು

ಈ ಮೇಲ್ಕಂಡ 4 ಅಂಶಗಳು ಮಗು ಬದುಕಿ ಬರಲು ಕಾರಣವಾಗಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ಬಾಲಕ ಕೊಳವೆಬಾವಿಯಲ್ಲಿ ಬಿದ್ದ ನಂತರ ಸಂಜೆ 6:30 ರ ಸುಮಾರಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು ಮತ್ತು ಅಧಿಕಾರಿಗಳು ಸಂಜೆ 7:00 ರ ಹೊತ್ತಿಗೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದರು. ಮೊದಲಿಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಕೊಳವೆಬಾವಿಯಲ್ಲಿ ಮತ್ತಷ್ಟು ಜಾರಿ ಬೀಳುವುದನ್ನು ತಡೆಯಲು ಅವರು ಮಗುವಿನ ಪಾದಗಳನ್ನು ಲಾಕ್ ಮಾಡಲು ಕೊಕ್ಕೆ ಮಾದರಿ ವಸ್ತುವನ್ನು ಪೈಪ್ ನೊಳೆಗೆ ಇಳಿ ಬಿಟ್ಟರು. ಬಳಿಕ ಸಂಜೆ 7:30ರ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಮಣ್ಣು ತೆಗೆಯುವ ಯಂತ್ರಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು.

ಕ್ಲಿಷ್ಠ ಪರಿಸ್ಥಿಯಲ್ಲೂ ಮಗುವಿಗೆ ನಿರಂತರ ಆಮ್ಲಜನಕ ಪೂರೈಕೆ

ಇನ್ನು ಈ ಪ್ರಕರಣದ ಕುರಿತು ಮಾತನಾಡಿರುವ ಡಾ ಪಾಟೀಲ್ ಅವರು, "ಅದ್ಭುತವಾಗಿ, ಮಗುವಿಗೆ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ಎಲ್ಲಾ ನಾಲ್ಕು ಅಂಶಗಳನ್ನು ಪೂರೈಸಿದ್ದಾರೆ. ಸಾಮಾನ್ಯವಾಗಿ ಮನುಷ್ಯರು ಕಡಿಮೆ ಆಮ್ಲಜನಕ ಪೂರೈಕೆಯನ್ನು ಹೊಂದಿರುವ ಆಳವಾದ ಕೊಳವೆಬಾವಿಗಳಿಗೆ ಬಿದ್ದಾಗ, ಅವರು ಉಸಿರುಕಟ್ಟುವಿಕೆಯಿಂದ ಸಾಯುತ್ತಾರೆ. ವೈದ್ಯಕೀಯ ವಿಚಾರದಲ್ಲಿ ಸಾಮಾನ್ಯವಾಗಿ, ವ್ಯಕ್ತಿಯು ಸುಮಾರು ಶೇ.21%ರಷ್ಟು ಆಮ್ಲಜನಕವನ್ನು ಪಡೆದರೆ ಹೆಚ್ಚು ಕಾಲ ಬದುಕಬಹುದು. ಸಾತ್ವಿಕ್‌ನ ವಿಷಯದಲ್ಲಿ, ಅವನು ಆಮ್ಲಜನಕವಿಲ್ಲದ ಸ್ಥಳದಲ್ಲಿ ಹೆಚ್ಚು ಆಳಕ್ಕೆ ಬಿದ್ದಿರಲಿಲ್ಲ. ಅಲ್ಲದೆ, ಬಾಹ್ಯ ಆಮ್ಲಜನಕ ಪೂರೈಕೆಯನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು, ಇದು ಹುಡುಗನಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿತು" ಎಂದು ಹೇಳಿದ್ದಾರೆ.

ಬಿದ್ದ ನಂತರ ಮಗು ಇದ್ದ ಸ್ಥಾನ

ಕೊಳವೆ ಬಾವಿಯಲ್ಲಿ ಯಾವುದೇ ಮಾನವ ತಲೆಕೆಳಗಾಗಿ ಬಿದ್ದಾಗ ಆತನಿಗೆ ಮೇಲ್ಭಾಗದಿಂದ ಸಾಕಷ್ಟು ಆಮ್ಲಜನಕ ಪೂರೈಕೆಯಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಸಿರುಗಟ್ಟಿ ಸಾಯುವ ಅವಕಾಶ ಹೆಚ್ಚು. ಆದರೆ ಹಾಲಿ ಪ್ರಕರಣದಲ್ಲಿ ಮಗು ತಲೆಕೆಳಗಾಗಿ ಬಿದ್ದರೂ, ಯಾವುದೇ ರೀತಿ ಆಮ್ಲಜನಕ ಕೊರತೆಯುಂಟಾಗಿಲ್ಲ. ಮಗು ಪೈಪ್ ನೊಳಗೆ ನೇರವಾಗಿ ಬಿದ್ದಿದ್ದರಿಂದ ಮಗುವಿನ ಭಂಗಿ ಆಮ್ಲಜನಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಮುಖ್ಯವಾಗಿ ಕುತ್ತಿಗೆಯನ್ನು ಬಾಗಿಸಿದರೆ ಗಾಳಿ ಸಂಚಾರಕ್ಕೆ ಅನುವಾಗುವ ರೀತಿಯಲ್ಲಿತ್ತು. ಮಗುವಿನ ಅಂಗಗಳಿಗೆ ಮುಖ್ಯವಾಗಿ ಮೆದುಳಿಗೆ ಆಮ್ಲಜನಕವನ್ನು ಪಡೆಯಲು ಕಾರಣವಾಯಿತು. ಇಂದು ಮಗು ರಕ್ಷಣೆಯಲ್ಲಿ ನಿರ್ಣಾಯಕ ಅಂಶವಾಗಿದೆ ಎಂದು ಡಾ.ಬಗ್ವಾನ್ ವಿವರಿಸಿದ್ದಾರೆ.

ಅಂಗಗಳಿಗೆ ಗಾಯಗಳಾಗಿಲ್ಲ

ಮೂರನೆಯ ಅಂಶವನ್ನು ಉಲ್ಲೇಖಿಸಿದ ವೈದ್ಯರು, ಕೊಳವೆ ಬಾವಿಗೆ ಬಿದ್ದರೂ ಮಗುವಿನ ತಲೆಗೆ ಯಾವುದೇ ಗಾಯವಾಗಿಲ್ಲ ಎಂದು ತೋರುತ್ತಿದೆ. ಇದು ರಕ್ತಸ್ರಾವ ಅಥವಾ ಮೂಳೆ ಮುರಿತವಾಗಿಲ್ಲ. ಮುಖ್ಯವಾಗಿ ಪಕ್ಕೆಲುಬಿಗೆ ಗಾಯವಾಗಿಲ್ಲ. ಒಂದು ವೇಳೆ ಪಕ್ಕೆಲುಬಿಗೆ ಗಾಯವಾಗಿದ್ದರೆ ಇದು ಉಸಿರಾಟವನ್ನು ಅತ್ಯಂತ ಕಷ್ಟಕರ ಮತ್ತು ನೋವಿನಿಂದ ಕೂಡಿರುತ್ತಿತ್ತು. ಮಗುವಿಗೆ ಅಂತಹ ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ತೋರುತ್ತಿದೆ.

30 ಗಂಟೆಗಳೊಳಗೆ ರಕ್ಷಣಾ ಕಾರ್ಯಾಚರಣೆ

ನಾಲ್ಕನೆಯದು.. ಒಬ್ಬ ಸಾಮಾನ್ಯ ಮನುಷ್ಯ ನೀರು ಮತ್ತು ಆಹಾರವಿಲ್ಲದೆ ಕನಿಷ್ಠ ಮೂರು ದಿನಗಳವರೆಗೆ ಬದುಕಬಲ್ಲನು. ಮಗುವಿನ ವಿಷಯದಲ್ಲಿ, ಮಗು ಆರೋಗ್ಯವಾಗಿದ್ದರೆ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿಲ್ಲವಾದರೆ, ಮಗು ಹೆಚ್ಚು ಕಾಲ ಬದುಕಬಲ್ಲದು. ದೇಹವು ತನ್ನಲ್ಲಿರುವ ಕೊಬ್ಬಿನ ಅಂಶಗಳನ್ನು ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಶಕ್ತಿಯಾಗಿ ಅಥವಾ ಆಹಾರವಾಗಿ ಬಳಕೆ ಮಾಡಿಕೊಳ್ಳುತ್ತವೆ. ಈ ಮಗುವಿನ ಪ್ರಕರಣದಲ್ಲಿ, ಮಗುವನ್ನು 30 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ರಕ್ಷಿಸಲಾಗಿದೆ, ಇದು ಮಗು ಜೀವಂತವಾಗಿ ಹೊರಬರಲು ಸಹಾಯ ಮಾಡಿದೆ ಎಂದು ವೈದ್ಯರು ಹೇಳಿದ್ದಾರೆ.

SCROLL FOR NEXT