ಮೀರ್ಪುರ್: ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಂ ಇಂಡಿಯಾ ಬಾಂಗ್ಲಾ ವಿರುದ್ಧ ಸತತ ಎರಡು ಪಂದ್ಯಗಳನ್ನು ಸೋತು ಸುಣ್ಣವಾಗಿದ್ದು, ಈ ಮಧ್ಯೆ ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ, ಸಚಿನ್ ನಿವೃತ್ತಿ ಬಳಿಕ ಟೀಮ್ ಇಂಡಿಯಾವನ್ನು ಹುರಿದುಂಬಿಸುತ್ತಿದ್ದ ಸುಧೀರ್ ಗೌತಮ್ ಮೇಲೆ ಬಾಂಗ್ಲಾದೇಶದಲ್ಲಿ ಹಲ್ಲೆ ನಡೆದ ವರದಿಯಾಗಿದೆ.
ಮೀರ್ ಪುರ್ ನಲ್ಲಿ ನಿನ್ನೆ ಎರಡನೇ ಏಕದಿನ ಪಂದ್ಯ ನಡೆದಿದ್ದು, ಪಂದ್ಯದ ವೇಳೆ ತಂಡವನ್ನು ಹುರಿದುಂಬಿಸುವ ಉದ್ದೇಶದೊಂದಿಗೆ ದೇಹದ ಮೇಲೆ ತ್ರಿವರ್ಣ ಧ್ವಜದ ಪೇಂಟಿಂಗ್ ಮಾಡಿಕೊಂಡು ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಘೋಷ ಮೊಳಗಿಸಿದ್ದರು.
ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದ್ದು, ಪಂದ್ಯದ ಬಳಿಕ ಸುಧೀರ್ ಮೇಲೆ ಕಲ್ಲೆಸತ ನಡೆದಿದೆ. ಅಪರಿಚಿತ ಪುಂಡರ ಗುಂಪೊಂದು ಸುಧೀರ್ ಆಟೋ ಮೇಲೂ ದಾಳಿ ನಡೆಸಿದೆ. ಈ ಮಧ್ಯೆ ಭದ್ರತಾಪಡೆ ಸುಧೀರ್ ಅವರನ್ನು ರಕ್ಷಿಸಿದೆ.