ಕ್ರೀಡೆ

ನೀನು ಇನ್ನೆಂದೂ ಅನ್ಯಾಯಕ್ಕೆ ಬಲಿಯಾಗುವುದಿಲ್ಲ: ನರಸಿಂಗ್ ಗೆ ಪ್ರಧಾನಿ ಮೋದಿ ಭರವಸೆ

Sumana Upadhyaya
ನವದೆಹಲಿ: ರಾಷ್ಟ್ರೀಯ ಉದ್ದೀಪನ ವಿರೋಧ ಸಂಸ್ಥೆ(ನಾಡಾ)ಯಿಂದ ಕ್ಲೀನ್ ಚಿಟ್ ಪಡೆದುಕೊಂಡ ಭಾರತದ ಕುಸ್ತಿಪಟು ನರಸಿಂಗ್ ಯಾದವ್ ಗೆ ಇನ್ನೆಂದೂ ನೀನು ಅನ್ಯಾಯಕ್ಕೆ ಬಲಿಯಾಗುವುದಿಲ್ಲ ಎಂದು ಭರವಸೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಂಬರುವ ರಿಯೊ ಒಲಿಂಪಿಕ್ಸ್ ಗೆ ಶುಭಾಶಯ ಕೋರಿದ್ದಾರೆ.
ಇಂದು ಪ್ರಧಾನಿಯವರನ್ನು ಭೇಟಿ ಮಾಡಿದ ನರಸಿಂಗ್ ಯಾದವ್, ತಾನು ಉದ್ದೀಪನ ಹಗರಣದಲ್ಲಿ ಆರೋಪಮುಕ್ತನಾಗಿ ಹೊರಬರಲು ಸಹಾಯ ಮಾಡಿದ್ದಕ್ಕೆ ಧನ್ಯವಾದ ಹೇಳಿದರು.
''ನನಗೆ ಶುಭಾಶಯ ಹೇಳಿದ ಪ್ರಧಾನ ಮಂತ್ರಿಗಳು ಇನ್ನೆಂದಿಗೂ ಅನ್ಯಾಯಕ್ಕೆ ಬಲಿಯಾಗಲು ಬಿಡುವುದಿಲ್ಲ. ಕಠಿಣ ಪರಿಶ್ರಮ ಹಾಕಿ ದೇಶಕ್ಕೆ ಪದಕ ಗೆದ್ದು ತಾ'' ಎಂದು ಹಾರೈಸಿದರು ಎಂದು ನರಸಿಂಗ್ ಯಾದವ್ ಪ್ರಧಾನಿಯವರನ್ನು ಭೇಟಿ ಮಾಡಿ ಹೊರಬಂದ ನಂತರ ಮಾಧ್ಯಮದವರಿಗೆ ತಿಳಿಸಿದರು.
ರಿಯೊ ಒಲಿಂಪಿಕ್ಸ್ ಗೆ ಖಂಡಿತವಾಗಿಯೂ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಯಾದವ್, ಹೌದು, ಖಂಡಿತವಾಗಿಯೂ ರಿಯೊದಲ್ಲಿ ಸ್ಪರ್ಧಿಸಿ ದೇಶಕ್ಕೆ ಪದಕ ಗೆದ್ದು ತರುತ್ತೇನೆ. ಹಿಂದೆ ನಡೆದ ವಿವಾದಗಳನ್ನು ಮರೆತು ನನ್ನ ತರಬೇತಿ ಮೇಲೆ ಗಮನ ಹರಿಸುತ್ತೇನೆ ಎಂದು ಹೇಳಿದರು.
SCROLL FOR NEXT