ಢಾಕಾ: ಪ್ರಸ್ತುತ ಬಾಂಗ್ಲಾದೇಶ ತಂಡ ಸರ್ವ ವಿಭಾಗದಲ್ಲಿಯೂ ಶಕ್ತವಲಾಗಿದ್ದು. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಿದರೆ ಭಾರತವನ್ನು ಸೋಲಿಸಬಲ್ಲೆವು ಎಂದು ಬಾಂಗ್ಲಾದೇಶ ಕ್ರಿಕೆಟ್ ಆಟಗಾರ ತಮೀಮ್ ಇಕ್ಬಾಲ್ ಹೇಳಿದ್ದಾರೆ.
ಏಷ್ಯಾಕಪ್ ಟಿ20 ಸರಣಿಯ ಫೈನಲ್ ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಮೀಮ್ ಇಕ್ಬಾಲ್, ಏಕದಿನ ಕ್ರಿಕೆಟ್ನಲ್ಲಿ ಈಗಾಗಲೆ ಕೆಲ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿದ್ದೇವೆ. ಟಿ20 ಕ್ರಿಕೆಟ್ನಲ್ಲೂ ಅದನ್ನು ಪುನರಾವರ್ತಿಸುವ ಸಾಮರ್ಥ್ಯ ನಮಗಿದೆ. ಭಾರತದ ವಿಶಿಷ್ಟ ಶೈಲಿಯ ವೇಗಿ ಜಸ್ಪ್ರೀತ್ ಬುಮ್ರಾ ಎದುರಿಸಲು ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ತಮೀಮ್ ಹೇಳಿದರು.
ಕೇವಲ ಬುಮ್ರಾ ಮಾತ್ರ ನಮ್ಮ ಗುರಿಯಲ್ಲ. ಭಾರತ ತಂಡದ ಪ್ರತಿಯೊಬ್ಬ ಬೌಲರ್ ಕೂಡ ನಮಗೆ ಮಾರಕವಾಗಬಲ್ಲರು. ಹೀಗಾಗಿ ಭಾರತದ ವಿರುದ್ಧ ತಂಡವಾಗಿ ಆಡಿ, ಸಂಪೂರ್ಣ ಸಾಮರ್ಥ್ಯವನ್ನು ಪ್ರದರ್ಶಿಸಿದರೆ ಮಾತ್ರ ಗೆಲುವು ಶತಃಸಿದ್ದ ಎಂದು ತಮೀಮ್ ಹೇಳಿದರು.
ಇನ್ನು ಇದೇ ಭಾನುವಾರ ಮೀರ್ ಪುರದ ಶೇರ್ ಎ ಬಾಂಗ್ಲಾ ಮೈದಾನದಲ್ಲಿ 2016ನೇ ಸಾಲಿನ ಏಷ್ಯಾಕಪ್ ಟಿ20 ಸರಣಿಯ ಫೈನಲ್ ಪಂದ್ಯ ನಡೆಯಲಿದ್ದು, ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಪರಸ್ಪರ ಎದುರಾಗಲಿವೆ. ಈ ಹಿಂದೆ 2012ರಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಪಾಕಿಸ್ತಾನದೊಂದಿಗೆ ಸೆಣಸಿತ್ತಾದರೂ ಸೋತು ಹೋಗಿತ್ತು. ಇದೀಗ ಮತ್ತೆ ಬಲಾಢ್ಯ ತಂಡಗಳನ್ನೇ ಸೋಲಿಸಿ ಫೈನಲ್ ಗೇರಿದೆ. ಇನ್ನು ಟೂರ್ನಿಯ ಲೀಗ್ ಹಂತ ಸೇರಿದಂತೆ ಬಾಂಗ್ಲಾ ವಿರುದ್ಧ ಇದುವರೆಗೆ ಆಡಿರುವ ಎಲ್ಲ 3 ಟಿ20 ಪಂದ್ಯ ಗೆದ್ದ ಅಜೇಯ ದಾಖಲೆ ಭಾರತದ್ದಾಗಿದೆ.