ಮೀರ್ ಪುರ: ಏಷ್ಯಾಕಪ್ ಟಿ20 ಫೈನಲ್ ಪಂದ್ಯ ಕುತೂಹಲಕಾರಿ ಘಟ್ಟ ತಲುಪಿದ್ದು, ನಿಗದಿತ 15 ಓವರ್ ಗಳಲ್ಲಿ ಬಾಂಗ್ಲಾದೇಶ 5 ವಿಕೆಟ್ ನಷ್ಟಕ್ಕೆ 120 ರನ್ ಪೇರಿಸಿದೆ.
ಮಳೆಯಿಂದಾಗಿ 15 ಓವರ್ ಗಳಿಗೆ ಸಮೀತವಾದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಸಬ್ಬೀರ್ ರೆಹಮಾನ್ (32 ರನ್), ಶಕೀಬ್ ಅಲ್ ಹಸನ್ (21 ರನ್) ಮತ್ತು ಮಹಮದುಲ್ಲಾ (33 ರನ್) ಅವರ ಸಮಯೋಚಿತ ಆಟದ ನೆರವಿನಿಂದ ನಿಗದಿತ 15 ಓವರ್ ಗಳಲ್ಲಿ 120 ರನ್ ಗಳ ಸಾವಾಲಿನ ಮೊತ್ತ ಪೇರಿಸಿತು. ಭಾರತೀಯ ಬೌಲರ್ ಗಳ ಎದುರು ಆರಂಭದಲ್ಲಿ ಕೊಂಚ ತಿಣುಕಾಡಿದ ಬಾಂಗ್ಲಾ ಬ್ಯಾಟ್ಸಮನ್ ಗಳು ಬಳಿಕ ಚೇತರಿಸಿಕೊಂಡು ಕ್ರಮೇಣ ರನ್ ಗತಿ ಏರಿಸಿದರು. ಉಳಿದಂತೆ ತಮೀಮ್ ಇಕ್ಬಾಲ್ 13, ಸೌಮ್ಯ ಸರ್ಕಾರ್ 14 ಮತ್ತು ಮಷ್ಫಿಕರ್ ರೆಹಮಾನ್ 4 ರನ್ ಸೇರಿಸಿದರು. ಇನ್ನು ನಾಯಕ ಮುಷ್ರಫೆ ಮೋರ್ತಾಜಾ ಶೂನ್ಯಕ್ಕೆ ಔಟ್ ಆಗುವ ಮೂಲಕ ಬಾಂಗ್ಲಾ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.
ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಭಾರತೀಯ ಬೌಲರ್ ಗಳು, ತಮ್ಮ ಸಂಘಟಿತ ಆಟದೊಂದಿಗೆ ಬಾಂಗ್ಲಾ ಬೃಹತ್ ಮೊತ್ತ ಪೇರಿಸದಂತೆ ನೋಡಿಕೊಂಡರು. ಭಾರತದ ಪರ ಆಶೀಶ್ ನೆಹ್ರಾ, ಆರ್ ಅಶ್ವಿನ್, ಬುಮ್ರಾಹ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.