ಮುಂಬೈ: ಮಹಾರಾಷ್ಟ್ರ ಸರ್ಕಾರ ಹಲವು ವರ್ಷಗಳ ಹಿಂದೆಯೇ ಕುಸ್ತಿ ಅಕಾಡೆಮಿ ಸ್ಥಾಪನೆ ಮಾಡುವ ಭರವಸೆ ನೀಡಿದ್ದು ಇದೀಗ ಯಾವುದೇ ನಿರ್ಧಾರ ಕೈಗೊಳ್ಳದ ಕಾರಣ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ತಂದಿತ್ತ ಕುಸ್ತಿಪಟು ಕಶಬ ದಾದಾಸಾಹೇಬ್ ಜಾದವ್ ಅವರ ಕುಟುಂಬವು ಆ ಪದಕವನ್ನು ಹರಾಜಿಗಿಡುವ ಬೆದರಿಕೆಯೊಡ್ಡಿದೆ.
ಒಲಿಂಪಕ್ಸ್ ಪದಕವನ್ನು ಹರಾಜು ಮಾಡಿ ಅದರಿಂದ ಬರುವ ಹಣದಲ್ಲಿ ಸತ್ರಾ ಜಿಲ್ಲೆಯ ಗೊಳೇಶ್ವರ್ ನಲ್ಲಿ ಕುಸ್ತಿ ಅಕಾಡೆಮಿ ಸ್ಥಾಪಿಸುತ್ತೇವೆ ಎಂದು ಜಾದವ್ ಕುಟುಂಬಸ್ಥರು ಹೇಳಿದ್ದಾರೆ. ಕಳೆದ 2009ಲ್ಲಿ ಜಾದವ್ ಕುಟುಂಬದ ಸದಸ್ಯರು ಮಹಾರಾಷ್ಟ್ರ ಸರ್ಕಾರಕ್ಕೆ ಕುಸ್ತಿ ಅಕಾಡೆಮಿ ಸ್ಥಾಪಿಸುವಂತೆ ಮನವಿ ಸಲ್ಲಿಸಿತ್ತು. ಈ ವೇಳೆ ಅದಕ್ಕೆ ಮಹಾರಾಷ್ಟ್ರ ಸಮ್ಮತಿ ಸೂಚಿಸಿತ್ತು.
ಮನವಿ ಸಲ್ಲಿಸಿ ಎಂಟು ವರ್ಷ ಕಳೆದರು ಇನ್ನು ಮಹಾರಾಷ್ಟ್ರ ಸರ್ಕಾರ ಸರಿಯಾದ ನಿರ್ಧಾರ ಕೈಗೊಂಡಿಲ್ಲ. ಸರ್ಕಾರದ ಈ ನಿರ್ಲಕ್ಷ್ಯದಿಂದ ಬೇಸತ್ತ ಜಾದವ್ ಅವರ ಕುಟುಂಬವು, 1952ರಲ್ಲಿ ಫಿನ್ ಲೆಂಡ್ ನಲ್ಲಿ ನಡೆದಿದ್ದ ಒಲಿಂಪಿಕ್ಸ್ ನಲ್ಲಿ ದಾದಾಸಾಹೇಬ್ ಅವರು ಗೆದ್ದಿದ್ದ ಕಂಚಿನ ಪದಕವನ್ನು ಹರಾಜು ಹಾಕಲು ಮುಂದಾಗಿದ್ದು ಸರ್ಕಾರಕ್ಕೆ ಇದಕ್ಕೆ ಬೆಲೆ ನಿಗದಿ ಪಡಿಸಲಿ ಎಂದಿದೆ.