ಭಾರತದ ಚೆಸ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್
ಪುಣೆ: ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯ ಎಂಬ ನಿಯಮವನ್ನು ವಿರೋಧಿಸಿ ಇರಾನ್ ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚೆಸ್ ಟೂರ್ನಿಯಿಂದ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಹೊರಬಂದಿದ್ದಾರೆ.
ಇರಾನ್ ನಲ್ಲಿ ಮಹಿಳೆಯರು ತಲೆಗೆ ಸ್ಕಾರ್ಫ್ ಧರಿಸುವುದು ಕಡ್ಡಾಯ. ಇದೇ ನಿಯಮವನ್ನು ಇರಾನ್ ಕ್ರೀಡಾ ಇಲಾಖೆ ಅಂತಾರಾಷ್ಟ್ರೀಯ ಚೆಸ್ ಟೂರ್ನಿಗೂ ಅಳವಡಿಸಿದ್ದು, ಇದರಿಂದ ಬೇಸತ್ತ ಭಾರತದ ಸ್ಟಾರ್ ಆಟಗಾರ್ತಿ ಸೌಮ್ಯ ಸ್ವಾಮಿನಾಥನ್ ಟೂರ್ನಿಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದ್ದಾರೆ.
'ಇರಾನ್ ನ ಹಮದಾನ್ನಲ್ಲಿ ಜೂನ್ 26ರಿಂದ ಆಗಸ್ಟ್ 4ರವರೆಗೆ ಚೆಸ್ ಚಾಂಪಿಯನ್ಷಿಪ್ ನಡೆಯಲಿದೆ. ಇರಾನ್ ಕಾನೂನಿನ ಪ್ರಕಾರ ಮಹಿಳೆಯರು ತಲೆಗೆ ಸ್ಕಾರ್ಫ್ ಕಟ್ಟಿಕೊಳ್ಳಬೇಕಿರುವುದು ಕಡ್ಡಾಯವಾಗಿದೆ. ಆದರೆ ಅದು ತಮ್ಮ ವೈಯಕ್ತಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ. ಈ ಕಾರಣದಿಂದ ನಾನು ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸೌಮ್ಯಾ ಹೇಳಿದ್ದಾರೆ.
ಈ ಕುರಿತು ಫೇಸ್ಬುಕ್ ಪುಟದಲ್ಲಿ ಬರೆದಿು ಕೊಂಡಿರುವ ಸೌಮ್ಯಾ, 'ಮಹಿಳೆಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ಇರಾನ್ ನ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳು ಸೇರಿದಂತೆ ನನ್ನ ಮೂಲ ಮಾನವ ಹಕ್ಕುಗಳನ್ನು ನೇರವಾಗಿ ಹತ್ತಿಕ್ಕುತ್ತದೆ. ಪ್ರಸ್ತುತದ ಸಂದರ್ಭದಲ್ಲಿ ನನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ನಾನು ಇರಾನ್ಗೆ ತೆರಳದೆ ಇರುವುದೇ ಸೂಕ್ತ ಎಂದೆನಿಸಿದೆ ಎಂದು ಹೇಳಿದ್ದಾರೆ.
ಅಂತೆಯೇ ಕ್ರೀಡಾಪಟುಗಳ ಮೇಲೆ ಧಾರ್ಮಿಕ ವಸ್ತ್ರಸಂಹಿತೆಯನ್ನು ಹೇರುವುದು ಸರಿಯಲ್ಲ. ಅಧಿಕೃತ ಚಾಂಪಿಯನ್ಷಿಪ್ಗಳಲ್ಲಿ ನಾವು ರಾಷ್ಟ್ರೀಯ ತಂಡದ ಧಿರಿಸು ಅಥವಾ ಕ್ರೀಡಾ ಉಡುಪನ್ನು ಧರಿಸಿರುವುದನ್ನು ಆಯೋಜಕರು ನಿರೀಕ್ಷಿಸುತ್ತಾರೆ. ಆದರೆ, ಕ್ರೀಡೆಯಲ್ಲಿ ಧಾರ್ಮಿಕ ವಸ್ತ್ರಸಂಹಿತೆಯನ್ನು ಬಲವಂತವಾಗಿ ಹೇರುವಂತಿಲ್ಲ. ವಸ್ತ್ರಸಂಹಿತೆಯ ನಿಯಮವನ್ನು ವಿರೋಧಿಸಿ ಭಾರತದ ಕ್ರೀಡಾಪಟು ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿರುವುದು ಇದು ಮೊದಲೇನಲ್ಲ. 2016ರಲ್ಲಿ ಭಾರತದ ಶೂಟರ್ ಹೀನಾ ಸಿಧು ಅವರು ಇದೇ ಇರಾನ್ ನಲ್ಲಿ ಆಯೋಜಿಸಿದ್ದ ಏಷ್ಯನ್ ಏರ್ಗನ್ ಸ್ಪರ್ಧೆಯಿಂದ ಇದೇ ಕಾರಣದಿಂದ ಹಿಂದಕ್ಕೆ ಸರಿದಿದ್ದರು.
ಪದೇ ಪದೇ ತನ್ನ ಧಾರ್ಮಿಕ ವಸ್ತ್ರ ಸಂಹಿತೆ ಹೇರುವ ಮೂಲಕ ಇರಾನ್ ದೇಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗುತ್ತಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos