ಬೆಂಗಳೂರು: ಎಫ್ಐಬಿಎ (ಫೆಡರೇಶನ್ ಇಂಟರ್ ನ್ಯಾಷನಲ್ ಬ್ಯಾಸ್ಕೆಟ್ ಬಾಲ್) ವಿಶ್ವಕಪ್ 2027 ರ ಏಷ್ಯನ್ ಅರ್ಹತಾ ಪಂದ್ಯಗಳಲ್ಲಿ ಭಾಗವಹಿಸಿದ್ದ ಭಾರತ ಪುರುಷರ ಬ್ಯಾಸ್ಕೆಟ್ಬಾಲ್ ತಂಡವು ದೋಹಾದಲ್ಲಿ ಸಂಕಷ್ಟಕ್ಕೆ ಸಿಲುಕಿದೆ.
ಪ್ರಾದೇಶಿಕ ಯುದ್ಧಸಮಾನ ಪರಿಸ್ಥಿತಿಯಿಂದ ವಾಯು ಮಾರ್ಗ ಮುಚ್ಚಿರುವ ಹಿನ್ನೆಲೆ ತಂಡದ ಆಟಗಾರರು ಮತ್ತು ಅಧಿಕಾರಿಗಳು ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ.
ಎಂಎಲ್ಸಿ ಹಾಗೂ ಎಫ್ಐಬಿಎ ಏಷ್ಯಾ ಅಧ್ಯಕ್ಷರಾದ ಕೆ.ಗೋವಿಂದರಾಜ್ ಅವರು ಮಂಗಳವಾರ ಮಾಹಿತಿ ನೀಡಿ, ಸಂಕಷ್ಟದಲ್ಲಿರುವ ತಂಡದಲ್ಲಿ ಕರ್ನಾಟಕದ ಮೂವರು ಆಟಗಾರರೂ ಇದ್ದಾರೆ ಎಂದು ತಿಳಿಸಿದ್ದಾರೆ.
ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಕತಾರ್ ಬ್ಯಾಸ್ಕೆಟ್ಬಾಲ್ ಫೆಡರೇಶನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಟಗಾರರ ಸುರಕ್ಷತೆ ಕುರಿತು ಮನವಿ ಮಾಡಲಾಗಿದೆ. ಪ್ರಸ್ತುತ ನೆಲಮಟ್ಟದ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಆದರೆ, ವಾಯು ಮಾರ್ಗ ತೆರೆಯುವವರೆಗೂ ತಂಡವನ್ನು ಭಾರತಕ್ಕೆ ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಇದೀಗ ಕತಾರ್ ಬ್ಯಾಸ್ಕೆಟ್ಬಾಲ್ ಫೆಡರೇಶನ್ ಭಾರತೀಯ ತಂಡಕ್ಕೆ ಹೋಟೆಲ್ ವಸತಿ ವ್ಯವಸ್ಥೆ ಮಾಡಿ, ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಭಾರತಕ್ಕೆ ವಿಮಾನ ಸೇವೆಗಳು ಪ್ರಾರಂಭವಾದ ಕೂಡಲೇ ತಂಡವನ್ನು ಮರಳಿ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆಂದು ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕ ಸಂಘ ಕತಾರ್ (KSQ) ಮತ್ತು ಕರ್ನಾಟಕ ಕನ್ನಡ ಸಂಘ ಕತಾರ್ ಸದಸ್ಯರು ಸಂಕಷ್ಟದಲ್ಲಿರುವ ಕನ್ನಡಿಗರಿಗೆ ನೆರವಾಗುತ್ತಿದ್ದು, ಆಹಾರ, ವಸತಿ ಹಾಗೂ ಅಗತ್ಯ ಸಹಾಯಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಗೋವಿಂದರಾಜ್ ಅವರು ತಿಳಿಸಿದ್ದಾರೆ.