ಚಿತ್ತೂರು: ಮಂಗಳವಾರ ಮುಂಜಾನೆ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಪೊಲೀಸ್ ಎನ್ ಕೌಂಟರ್ ಗೆ ಬಲಿಯಾದ ಸ್ಮಗ್ಲರ್ ಗಳು ದಂತಚೋರ ವೀರಪ್ಪನ್ ನ ಸಹಚರರು ಎಂದು ಶಂಕಿಸಲಾಗುತ್ತಿದೆ.
ಮೂಲಗಳ ಪ್ರಕಾರ ಹತ್ಯೆಗೀಡಾದವರ ಪೈಕಿ ಕೆಲ ಸ್ಮಗ್ಲರ್ ಗಳು ತಮಿಳುನಾಡಿನ ಸತ್ಯಮಂಗಲ ಅರಣ್ಯಪ್ರದೇಶದ ಮೂಲದವರಾಗಿರಬಹುದು ಎಂದು ಎನ್ ಕೌಂಟರ್ ಮಾಡಿರುವ ಸೆಷಲ್ ಟಾಸ್ಕ್ ಫೋರ್ಸ್ ನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಚೆನ್ನೈ ಮತ್ತು ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ರಕ್ತಚಂದನ ಸ್ಮಗ್ಲರ್ ಗಳು ಇವರಿಂದ ಈ ಬೃಹತ್ ಕಳ್ಳಸಾಗಣೆಗೆ ಕೈಹಾಕಿಸಿರಬಹುದು ಎಂದೂ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ ಕಳ್ಳಸಾಗಣೆದಾರರ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡುತ್ತಿದ್ದಂತೆಯೇ ಕಳ್ಳರ ಜೊತೆಗೆ ಆಗಮಿಸಿದ್ದ ಕೂಲಿ ಕಾರ್ಮಿಕರು ಅರಣ್ಯದೊಳಗೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಪರಾರಿಯಾದರೆಲ್ಲರೂ ತಮಿಳುನಾಡು ಮೂಲದ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ. ಅಂತೆಯೇ ಇವರ ಮಧ್ಯೆಯೇ ಕಳ್ಳಸಾಗಣೆದಾರರ ಪೈಕಿ ಯಾರಾದರೂ ತಪ್ಪಿಸಿಕೊಂಡು ಹೋಗಿರುವ ಶಂಕೆ ವ್ಯಕ್ತಪಡಿಸುತ್ತಿರುವ ಪೊಲೀಸರು, ಕೂಲಿಕಾರ್ಮಿಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇವರ ಜೊತೆಗೆಯೇ ಸ್ಫೆಷಲ್ ಟಾಸ್ಕ್ ಫೋರ್ಸ್ ಕೂಡ ಕಳ್ಳಸಾಗಣೆದಾರರ ವಿರುದ್ಧದ ತನ್ನ ಕೂಬಿಂಗ್ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ತಿಳಿದುಬಂದಿದೆ.
ಖಚಿತ ಮಾಹಿತಿಯಾಧಾರದ ಮೇಲೆ ಇಂದು ಬೆಳಗ್ಗೆ ಸುಮಾರು 5 ಗಂಟೆಗೆ ಶೇಷಾಚಲಂ ಅರಣ್ಯ ಪ್ರದೇಶಕ್ಕೆ ದೌಡಾಯಿಸಿದ ಪೊಲೀಸರು ರಕ್ತಚಂದನ ಮರಗಳ ಕಳ್ಳರ ವಿರುದ್ಧ ಗುಂಡಿನ ದಾಳಿ ನಡೆಸಿ 20 ಮಂದಿ ಕಳ್ಳರನ್ನು ಹತ್ಯೆ ಗೈದಿದ್ದರು.